ಬೆಂಗಳೂರು: ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಕೆ ಮಾಡಾಳ್ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ್ ಮಾಡಾಳ್ ಅವರ ಕಚೇರಿ ಮತ್ತು ನಿವಾಸದಲ್ಲಿ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು 8.12 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ನಗದನ್ನು ವಶಪಡಿಸಿಕೊಂಡಿದ್ದಾರೆ.
ಮೊನ್ನೆ ಗುರುವಾರ ಸಾಯಂಕಾಲ ಲೋಕಾಯುಕ್ತ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಪ್ರಶಾಂತ್ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ನಂತರ ನಡೆದ ವಿದ್ಯಾಮಾನದ ನಂತರ ನಿನ್ನೆ ಬೆಳಗ್ಗೆಯಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪರಾರಿಯಾಗಿದ್ದಾರೆ. ಮೊನ್ನೆ ಗುರುವಾರ 40 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಪ್ರಶಾಂತ್ ಬಂಧನವಾಗಿದೆ.
ವಶಪಡಿಸಿಕೊಂಡ 8.12 ಕೋಟಿ ನಗದು ಕರ್ನಾಟಕ ಲೋಕಾಯುಕ್ತ ಇತಿಹಾಸದಲ್ಲಿ ಒಂದೇ ಪ್ರಕರಣದಲ್ಲಿ ಅತಿ ಹೆಚ್ಚು ಎಂದು ಹೇಳಲಾಗಿದೆ. ಇದೀಗ ಪ್ರಕರಣದ ಪ್ರಮುಖ ಆರೋಪಿ ವಿರೂಪಾಕ್ಷಪ್ಪನ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಶಾಸಕರು ಈ ಹಿಂದೆ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್ಡಿಎಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ದಾವಣಗೆರೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ಮಾಡಾಳ್ ಮತ್ತು ಅವರ ಪುತ್ರನ ವಿರುದ್ಧ ಕೆಮಿಕ್ಸಿಲ್ ಕಾರ್ಪೊರೇಷನ್ ನಡೆಸುತ್ತಿರುವ ಶ್ರೇಯಸ್ ಕಶ್ಯಪ್ ಎಂಬುವರು ತಂದೆ-ಮಗ ಇಬ್ಬರು ತಮ್ಮ ಮತ್ತು ಟಿಎಎಸ್ ಮೂರ್ತಿಯಿಂದ 81 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ ಎಂದು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಇವರು MS ಡೆಲಿಸಿಯಾ ಕೆಮಿಕಲ್ಸ್ ನಡೆಸುತ್ತಿದ್ದಾರೆ.
ಕೆಎಸ್ಡಿಎಲ್ಗೆ ಕೆಮಿಕಲ್ ಆಯಿಲ್ ಪೂರೈಕೆಗೆ ಟೆಂಡರ್ ನೀಡಿ, ಖರೀದಿ ಆದೇಶ ನೀಡಿ, ಪೂರೈಕೆಯಾದ ರಾಸಾಯನಿಕದ ಬಿಲ್ ಮೊತ್ತವನ್ನು ಮನಬಂದಂತೆ ಬಿಡುಗಡೆ ಮಾಡಲು ಲಂಚ ಪಡೆಯಲಾಗಿದೆ ಎಂದು ಆರೋಪಿಸಲಾಗಿದೆ.
ಗುರುವಾರ ಬಂಧಿಸಲಾದ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ್ ಮತ್ತು ಇತರ ನಾಲ್ವರನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ಅವರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಗುರುವಾರ ರಾತ್ರಿ ಕ್ರೆಸೆಂಟ್ ರಸ್ತೆಯಲ್ಲಿರುವ ಪ್ರಶಾಂತ್ ಅವರ ಖಾಸಗಿ ಕಚೇರಿಯಿಂದ 2.02 ಕೋಟಿ ರೂಪಾಯಿ ಲೆಕ್ಕವಿಲ್ಲದ ಹಣವನ್ನು ಪೊಲೀಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಅದೇ ಸಮಯದಲ್ಲಿ ಅವರ ನಿವಾಸದಲ್ಲಿಯೂ 6.10 ಕೋಟಿ ರೂಪಾಯಿ ಲೆಕ್ಕಕ್ಕೆ ಸಿಗದ ಹಣ ಪತ್ತೆಯಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದರು. ಶಾಸಕರನ್ನು ಪ್ರಶ್ನಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ನ್ಯಾಯಮೂರ್ತಿ ಪಾಟೀಲ್, ''ತನಿಖೆ ನಡೆಯುತ್ತಿರುವುದರಿಂದ ವಿವರಗಳನ್ನು ಬಹಿರಂಗಪಡಿಸುವುದು ಸೂಕ್ತವಲ್ಲ. ಪೊಲೀಸ್ ವಿಭಾಗ ಈ ಬಗ್ಗೆ ನಿರ್ಧರಿಸುತ್ತದೆ. ಲೆಕ್ಕಪರಿಶೋಧಕ ಸುರೇಂದ್ರ ಮತ್ತು ಇತರ ಮೂವರನ್ನು ಸಹ ಬಂಧಿಸಲಾಗಿದೆ ಎಂದಷ್ಟೇ ಹೇಳಿದರು.
Advertisement