ಮಂಗಳೂರು ಸ್ಫೋಟದ ಹೊಣೆ ಹೊತ್ತುಕೊಂಡ ಐಎಸ್ಕೆಪಿ; ಡಿಕೆ ಶಿವಕುಮಾರ್ ವಿರುದ್ಧ ಸಿಎಂ ಬೊಮ್ಮಾಯಿ ಟೀಕೆ
ಮಂಗಳೂರು ಕುಕ್ಕರ್ ಸ್ಫೋಟದ ಹೊಣೆಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಎಸ್ಕೆಪಿ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
Published: 06th March 2023 05:17 PM | Last Updated: 06th March 2023 07:55 PM | A+A A-

ಸಿಎಂ ಬಸವರಾಜ ಬೊಮ್ಮಾಯಿ.
ಬೆಂಗಳೂರು: ಮಂಗಳೂರು ಕುಕ್ಕರ್ ಸ್ಫೋಟದ ಹೊಣೆಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆ ಐಎಸ್ಕೆಪಿ ವಹಿಸಿಕೊಂಡ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ಐಎ ತನ್ನ ಕರ್ತವ್ಯ ನಿರ್ವಹಿಸುತ್ತಿದೆ. ಉಗ್ರ ಸಂಘಟನೆ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಈಗ ಶಿವಕುಮಾರ್ ಏನು ಹೇಳುತ್ತಾರೆ. ಇದು ಕುಕ್ಕರ್ ಬಾಂಬ್ ಅಲ್ಲ, ಇದು ಕೇವಲ ಕುಕ್ಕರ್, ಅದರಲ್ಲಿ ಏನೂ ಇಲ್ಲ ಎಂದು ಲೇವಡಿ ಮಾಡಿದ್ದರು. ಬಿಜೆಪಿಯವರು ಈ ವಿಷಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಈಗ ಅವರು ಏನು ಹೇಳುತ್ತಾರೆ ಎಂದು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.
ಮಂಗಳೂರು ಕುಕ್ಕರ್ ಸ್ಫೋಟ ಪ್ರಕರಣದ ಹೊಣೆಯನ್ನು ಜಾಗತಿಕ ಉಗ್ರ ಸಂಘಟನೆ ಐಎಸ್ ಹೊತ್ತುಕೊಂಡಿದೆ. ಇಸ್ಲಾಮಿಕ್ ಸ್ಟೇಟ್ನ ಅಂಗಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್-ಖೊರಾಸನ್ ಪ್ರಾವಿನ್ಸ್ (ಐಎಸ್ಕೆಪಿ), 'ವಾಯ್ಸ್ ಆಫ್ ಖೊರಾಸನ್' ಎಂಬ ತನ್ನ ನಿಯತಕಾಲಿಕೆಯಲ್ಲಿ ಮಂಗಳೂರು ಮತ್ತು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದ ಸ್ಫೋಟದ ಹೊಣೆ ಹೊತ್ತಿದೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ: ಶಂಕಿತ ಉಗ್ರ ಶಾರಿಕ್ 10 ದಿನ ಎನ್ಐಎ ವಶಕ್ಕೆ
2022ರ ನವೆಂಬರ್ 19ರಂದು ಮಂಗಳೂರಿನಲ್ಲಿ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ ಸಂಭವಿಸಿತ್ತು. ಕರಾವಳಿ ಪ್ರದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮು ಉದ್ವಿಗ್ನತೆಗೆ ಉತ್ತೇಜನ ನೀಡಲು ದೊಡ್ಡ ಪ್ರಮಾಣದ ದಾಳಿ ನಡೆಸಲು ಕುಕ್ಕರ್ ಬಾಂಬ್ ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ. ಇಸ್ಲಾಮಿಕ್ ರೆಸಿಸ್ಟೆನ್ಸ್ ಕೌನ್ಸಿಲ್ (ಐಆರ್ಸಿ) ಮಂಗಳೂರು ಸ್ಫೋಟದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಮತ್ತು ಭವಿಷ್ಯದಲ್ಲಿ ಮತ್ತೊಂದು ದಾಳಿಯ ಎಚ್ಚರಿಕೆಯನ್ನು ನೀಡಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವೋಟರ್ ಐಡಿ ಹಗರಣದಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮಂಗಳೂರು ಸ್ಫೋಟದ ಘಟನೆಯನ್ನು ಆಡಳಿತಾರೂಢ ಬಿಜೆಪಿಯೇ ಮಾಡಿದೆ ಎಂದಿದ್ದು ವಿವಾದಕ್ಕೆ ಕಾರಣವಾಗಿತ್ತು.
ಸ್ಫೋಟಕ್ಕೆ ಸಂಬಂಧಿಸಿದಂತೆ ಬಂಧಿತ ಶಂಕಿತ ಮೊಹಮ್ಮದ್ ಶಾರಿಕ್ನನ್ನು ತನಿಖೆಯಿಲ್ಲದೆ ಹೇಗೆ ಭಯೋತ್ಪಾದಕ ಎಂದು ಘೋಷಿಸಬಹುದು. ಇದು 26/11 ಮುಂಬೈ ಭಯೋತ್ಪಾದನಾ ದಾಳಿಯಂತಹ ಘಟನೆಯೇ? ಇದು ಪುಲ್ವಾಮಾ ಭಯೋತ್ಪಾದಕ ದಾಳಿಯಂತಹ ಘಟನೆಯೇ? ಎಂದು ಶಿವಕುಮಾರ್ ಪ್ರಶ್ನಿಸಿದ್ದರು.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಬಾಂಬ್, ಕೊಯಮತ್ತೂರು ಸ್ಫೋಟದ ಹೊಣೆ ಹೊತ್ತ ISIS ಸಂಘಟನೆ!
ಇಡೀ ಘಟನೆಯನ್ನು ಆಡಳಿತಾರೂಢ ಬಿಜೆಪಿ ಹೇಗೆ ಬಿಂಬಿಸಿತು? ಕರ್ನಾಟಕದಲ್ಲಿ ವೋಟರ್ ಐಡಿ ಹಗರಣ ಬೆಳಕಿಗೆ ಬಂದಾಗಲೇ, ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟ ಹೇಗೆ ಸಂಭವಿಸಿತು. ಏಕೆ? ಆರೋಪಿಗಳು ಎಲ್ಲಿಂದ ಬಂದರು? ಎಂದು ಆಗ ಕೇಳಿದ್ದರು.
ನೀವು ಜೀವನದಲ್ಲಿ ಭಾವನಾತ್ಮಕ ಸಮಸ್ಯೆಗಳನ್ನು ಹೈಲೈಟ್ ಮಾಡಲು ಪ್ರಯತ್ನಿಸುತ್ತಿದ್ದೀರಿ ಮತ್ತು ಅದನ್ನು ಜೀವನೋಪಾಯ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೀರಿ. ನಿಮ್ಮ (ಬಿಜೆಪಿ) ಅಧಿಕಾರಾವಧಿಯಲ್ಲಿ ಗುರುತಿಸಬಹುದಾದ ಒಂದೇ ಒಂದು ಕೆಲಸವೂ ನಡೆದಿಲ್ಲ. ಸುಮ್ಮನೆ ನೀವು ಒಂದು ವಿಷಯದಿಂದ ಮತ್ತೊಂದು ವಿಷಯದೆಡೆಗೆ ಜನರ ಗಮನ ತಿರುಗಿಸುವಲ್ಲಿ ತೊಡಗಿದ್ದೀರಿ. ಡಿಜಿ ತರಾತುರಿಯಲ್ಲಿ ಭೇಟಿ ನೀಡಿ ಇದನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸುತ್ತಾರೆ. ನೀವು ಏನು ಮಾಡಲು ಪ್ರಯತ್ನಿಸುತ್ತಿದ್ದೀರಿ?. ಜನರು ದಡ್ಡರು ಎಂದು ನೀವು ಭಾವಿಸುತ್ತೀರಾ? ಎಂದಿದ್ದರು.