ಬೆಂಗಳೂರು: ಫಿಸಿಯೋಥೆರಪಿಸ್ಟ್ ಹತ್ಯೆ ಪ್ರಕರಣದಲ್ಲಿ ಮೂವರ ಬಂಧನ
ಬೆಂಗಳೂರು: 32 ವರ್ಷದ ಫಿಸಿಯೋಥೆರಪಿಸ್ಟ್ ನನ್ನು ಕೊಲೆ ಮಾಡಿ ದೇಹವನ್ನು ಸುಟ್ಟು ಹಾಕಿದ್ದ ಪ್ರಕರಣ ಸಂಬಂಧ ಮೂವರನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಮೇಸ್ತ್ರಿ ವೀರ ಆಂಜನೇಯುಲು ಅಲಿಯಾಸ್ ಪುಲಿ (38), ಅನಂತಪುರದ ಗೋವರ್ಧನ್ ಅಲಿಯಾಸ್ ಡಿಜೆ (23) ಮತ್ತು ಬುಡ್ಡಪ್ಪ ಅಲಿಯಾಸ್ ಭಾಸ್ಕರ್ (46) ಆರೋಪಿಗಳು.
ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಯಲ್ಲಿ ಫಿಸಿಯೋಥೆರಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಪೆನುಕೊಂಡದ ಶ್ರೀಧರ್ ಎಂಬಾತನನ್ನು ಕೊಲೆ ಮಾಡಿದ ಆರೋಪ ಇವರ ಮೇಲಿದೆ. ಫೆಬ್ರವರಿ 7 ರಂದು ಗಾಣಿಗರಹಳ್ಳಿಯ ಕೃಷಿ ಭೂಮಿಯಲ್ಲಿ ಅಪರಿಚಿತ ವ್ಯಕ್ತಿಯ ಭಾಗಶಃ ಸುಟ್ಟ, ಕೊಳೆತ ಶವ ಪತ್ತೆಯಾಗಿದ್ದು, ಎರಡು ದಿನಗಳ ನಂತರ ಮೃತರ ಗುರುತು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಂಡಪ್ಪ ಬಡಾವಣೆ ನಿವಾಸಿಯಾಗಿದ್ದ ಶ್ರೀಧರ್, ಆಸ್ಪತ್ರೆಯೊಂದರಲ್ಲಿ ಫಿಜಿಯೋಥೆರಪಿಸ್ಟ್ ಕೆಲಸ ಮಾಡುತ್ತಿದ್ದರು. ಇವರ ಮನೆ ಸಮೀಪದಲ್ಲೇ ವೀರಾಂಜನೇಯ ವಾಸವಿದ್ದ. ಇಬ್ಬರೂ 8 ವರ್ಷಗಳ ಸ್ನೇಹಿತರು. ಹಳೇ ವೈಷಮ್ಯದಿಂದಾಗಿ ಶ್ರೀಧರ್ ಮೇಲೆ ಸಿಟ್ಟಾಗಿದ್ದ ವೀರಾಂಜನೇಯ, ತನ್ನ ಸ್ನೇಹಿತರಾದ ಗೋವರ್ಧನ್ ಹಾಗೂ ಬುಡ್ಡಪ್ಪ ಜೊತೆ ಸೇರಿ ಕೃತ್ಯ ಎಸಗಿದ್ದ ಎಂದರು.
ಮೃತದೇಹವನ್ನು ಆಟೊದಲ್ಲಿ ಗಾಣಿಗರಹಳ್ಳಿಯ ಜಮೀನೊಂದಕ್ಕೆ ಆರೋಪಿಗಳು ತೆಗೆದುಕೊಂಡು ಹೋಗಿದ್ದರು. ಅಲ್ಲಿಯೇ ಪೆಟ್ರೋಲ್ ಹಾಕಿ, ಮೃತದೇಹ ಸುಟ್ಟು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ