ಎನ್ಆರ್ಐಗಳಿಗೆ ಮತದಾನದ ಅವಕಾಶ ಕಲ್ಪಿಸಲು ಕೋರಿ ಅರ್ಜಿ; ಪಿಐಎಲ್ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು: ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಅನಿವಾಸಿ ಭಾರತೀಯರಿಗೆ (ಎನ್ಆರ್ಐ) ಮತದಾನದ ಸೌಲಭ್ಯವನ್ನು ಒದಗಿಸುವಂತೆ ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಾಗರೋತ್ತರ ಕನ್ನಡಿಗರ ಸಂಘದ ಸಂಸ್ಥಾಪಕ ಮತ್ತು ಜಂಟಿ ಕಾರ್ಯದರ್ಶಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ.
ಮೈಸೂರು ಮೂಲದ ಎನ್ಆರ್ಐ ಎಂ. ರವಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ರೂಪಿಸಿರುವ ಕಾನೂನನ್ನು ಪರಿಗಣಿಸಿ ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ವಿಜಯಕುಮಾರ್ ಎ ಪಾಟೀಲ್ ಅವರ ರಜಾಕಾಲದ ವಿಭಾಗೀಯ ಪೀಠವು ತಿರಸ್ಕರಿಸಿದೆ.
ತಾವು ಎನ್ಆರ್ಐ ಆಗಿರುವುದರಿಂದ ತಾವು ವಾಸಿಸುವ ದೇಶದಲ್ಲಿ ಮತದಾನ ಮಾಡುವಲ್ಲಿ ಸಮಸ್ಯೆ ಅನುಭವಿಸಿದ್ದಾರೆ. ತಾವು ಸೌದಿ ಅರೇಬಿಯಾದಲ್ಲಿ 2008 ರಿಂದ ವಾಸಿಸುತ್ತಿದ್ದು, ದಾದಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಸುಮಾರು 60 ಲಕ್ಷ ಭಾರತೀಯ ಅರ್ಹ ಮತದಾರರು ಪ್ರಪಂಚದಾದ್ಯಂತ ವಿವಿಧ ವೃತ್ತಿಗಳಲ್ಲಿ ಮತ್ತು ಅಧ್ಯಯನದಲ್ಲಿ ತೊಡಗಿದ್ದಾರೆ.
ಫಿಲಿಪೈನ್ಸ್ ಮತ್ತು ಇಟಲಿಯ ಕೆಲವು ಸಹೋದ್ಯೋಗಿಗಳು ತಾವು ವಾಸಿಸುವ ದೇಶದ ರಾಯಭಾರ ಕಚೇರಿಗೆ ಭೇಟಿ ನೀಡುವ ಮೂಲಕ ವಿದೇಶದಲ್ಲಿ ವಾಸಿಸುತ್ತಿದ್ದರೂ ಆಯಾ ದೇಶಗಳಿಂದಲೇ ಮತ ಚಲಾಯಿಸುವುದನ್ನು ಅವರು ಮತ್ತು ಇತರ ಎನ್ಆರ್ಐಗಳು ಗಮನಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
ಕಾರ್ಯನಿರತ ಪತ್ರಕರ್ತರು ಅಗತ್ಯ ಸೇವಾ ವರ್ಗದ ಅಡಿಯಲ್ಲಿ ಅಂಚೆ ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸಲು ಭಾರತೀಯ ಚುನಾವಣಾ ಆಯೋಗವು ನಿಬಂಧನೆಯನ್ನು ಮಾಡಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ