ಕಾಂಗ್ರೆಸ್ ಮೊದಲು ಭರವಸೆ ಈಡೇರಿಸಲಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ಶುಭ ಹಾರೈಸಿದ್ದು, ಒಳ್ಳೆಯ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿದೆ ಎಂದು ಮಂಗಳವಾರ ಹೇಳಿದ್ದಾರೆ.
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ

ಮೈಸೂರು: ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು, ಶುಭ ಹಾರೈಸಿದ್ದು, ಒಳ್ಳೆಯ ವಿರೋಧ ಪಕ್ಷವಾಗಿ ಬಿಜೆಪಿ ಕೆಲಸ ಮಾಡಲಿದೆ ಎಂದು ಮಂಗಳವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲು-ಗೆಲುವು ರಾಜಕೀಯ ಮತ್ತು ಚುನಾವಣೆಯ ಭಾಗವಾಗಿದೆ. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸಾಮಾನ್ಯ, ನಾವು ನಮ್ಮ ಸೋಲನ್ನು ಒಪ್ಪಿಕೊಂಡಿದ್ದೇವೆ ಮತ್ತು ವಿರೋಧ ಪಕ್ಷವಾಗಿ ನಾವು ನಮ್ಮ ಕೆಲಸವನ್ನು ಹೆಚ್ಚು ಉತ್ಸಾಹದಿಂದ ಮಾಡುತ್ತೇವೆ. ಆರ್ಥಿಕ ಬಿಕ್ಕಟ್ಟಿನಿಂದಾಗಿ, ದೇಶದಲ್ಲಿ ಉದ್ಯೋಗ ಸೃಷ್ಟಿಯನ್ನು ತ್ವರಿತಗತಿಯಲ್ಲಿ ಮಾಡಲು ಸಾಧ್ಯವಾಗಲಿಲ್ಲ. ಹಿಂದಿನ ಯುಪಿಎ ಸರ್ಕಾರದ ಕೆಟ್ಟ ಹಣಕಾಸು ನಿರ್ವಹಣೆಯೂ ಇದಕ್ಕೆ ಭಾಗಶಃ ಕಾರಣ. ಆದರೆ, ಕೇಂದ್ರ ಸರ್ಕಾರ ಇಂದು 71,206 ಉದ್ಯೋಗಾವಕಾಶಗಳನ್ನು ನೀಡಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಜನರನ್ನು ನೇಮಿಸಿ ಉದ್ಯೋಗ ಪ್ರಮಾಣಪತ್ರವನ್ನು ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಯೋಜನೆಗಳು ಶೇ.95 ಕ್ಕೂ ಹೆಚ್ಚು ಹಳ್ಳಿಗಳ ತಲುಪಿವೆ. ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನಾಯಕತ್ವವು ಕರ್ನಾಟಕವನ್ನು ಅಭಿವೃದ್ಧಿಯ ದೃಷ್ಟಿಯಿಂದ ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯಲು ಸಹಾಯ ಮಾಡಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಗೆಲುವು ಸಾಧಿಸಿದವರಿಗೆ ಶುಭವಾಗಲಿ. ಕೊಟ್ಟಿರುವ ಭರವಸೆಗಳನ್ನು ಈಡೇರಿಸುವ ಶಕ್ತಿ ಸಿಗಲಿ’ ಎಂದರು.

ಇದೇ ವೇಳೆ ಮುಖ್ಯಮಂತ್ರಿ ಆಯ್ಕೆ ವಿಚಾರ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಅದು ಆ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.

ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗ ಸೃಷ್ಟಿ: ಶೋಭಾ
ಕೇಂದ್ರ ಸರ್ಕಾರವು 2022ರ ಆಗಸ್ಟ್ 22 ರಿಂದ ಉದ್ಯೋಗ ಮೇಳಗಳನ್ನು ನಡೆಸುವ ಮೂಲಕ ಅನೇಕರಿಗೆ ನೇಮಕಾತಿ ಮತ್ತು ಉದ್ಯೋಗ ನೀಡುವಲ್ಲಿ ಯಶಸ್ವಿಯಾಗಿದೆ. ಕಳೆದ ಒಂಬತ್ತು ವರ್ಷಗಳಿಂದ ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸರ್ಕಾರಿ ಉದ್ಯೋಗಗಳನ್ನು ಸೃಷ್ಟಿಸಲಾಗಿದೆ ಎಂದು ಶೋಭಾ ಕರಂದ್ಲಾಜೆಯವರು ಹೇಳಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ 70,000 ಉದ್ಯೋಗ ಪ್ರಮಾಣಪತ್ರಗಳನ್ನು ವಿತರಿಸಿದ ಸಂದರ್ಭದ ಅಂಗವಾಗಿ ಮಂಗಳವಾರ ಇಲ್ಲಿನ ಎಐಐಎಸ್‌ಎಚ್‌ನಲ್ಲಿ ನಡೆದ ರೋಜ್‌ಗಾರ್ ಮೇಳದಲ್ಲಿ ಅಂಚೆ ಇಲಾಖೆ, ಎಐಐಎಸ್‌ಎಚ್ ಮತ್ತು ರೈಲ್ವೆಯ 28 ಕ್ಕೂ ಹೆಚ್ಚು ಸಿಬ್ಬಂದಿಗೆ ಉದ್ಯೋಗ ಪ್ರಮಾಣಪತ್ರಗಳನ್ನು ವಿತರಿಸಿದ ಸಂದರ್ಭದಲ್ಲಿ ಶೋಭಾ ಕರಂದ್ಲಾಜೆಯವರು ಮಾತನಾಡಿದರು.

 ಎಲ್ಲಾ ಇಲಾಖೆಗಳು ಬಲವರ್ಧಿತ ಮತ್ತು ಅಭಿವೃದ್ಧಿ ಹೊಂದುವುದನ್ನು ಖಚಿತಪಡಿಸಿಕೊಳ್ಳಲು ಜಿಲ್ಲೆಯ 45 ವಿವಿಧ ಸ್ಥಳಗಳಲ್ಲಿ ರೋಜ್ಗಾರ್ ಮೇಳವನ್ನು ಆರಂಭಿಸಲಾಗುತ್ತಿದೆ.     ಮುಂದಿನ 24 ವರ್ಷಗಳಲ್ಲಿ ದೇಶವನ್ನು ದೊಡ್ಡ ಮಟ್ಟಕ್ಕೆ ಕೊಂಡೊಯ್ಯುವ ಮತ್ತು ಭಾರತವನ್ನು ವಿಶ್ವದ ಶ್ರೇಷ್ಠ ಆರ್ಥಿಕತೆಯನ್ನಾಗಿ ಮಾಡುವ ದೃಷ್ಟಿಯನ್ನು ಮೋದಿಯವರು ಹೊಂದಿದ್ದಾರೆಂದು ಹೇಳಿದರು.

ನಾಲ್ಕು ರೋಜ್ಗಾರ್ ಮೇಳಗಳಲ್ಲಿ 3.59 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಲಾಗಿದೆ. ಉದ್ಯೋಗ ಪಡೆದವರು ದೇಶವನ್ನು ಪ್ರಗತಿಯ ಪಥದಲ್ಲಿ ಕೊಂಡೊಯ್ಯುವುದನ್ನು ಖಚಿತಪಡಿಸಿಕೊಳ್ಳಬೇಕು. ಸಾರ್ವಜನಿಕರ ಕಷ್ಟಪಟ್ಟು ಸಂಪಾದಿಸಿದ ತೆರಿಗೆ ಹಣದ ಮೂಲಕ ವೇತನ ಪಡೆದವರು ಅದನ್ನು ತಮ್ಮ ಸೇವೆಯ ಮೂಲಕ ಹಿಂದಿರುಗಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು, ಬಿಟ್ಟಿ ಮಾತುಗಳನ್ನು ನಂಬುವುದಿಲ್ಲ, ಈ ಹಿಂದೆ ಮನೆಯಲ್ಲಿ ಹೆಣ್ಣು ಮಗು ಹುಟ್ಟಿದಾಗ ಮೊದಲು ಆಕೆಗೆ ಮದುವೆ ಮಾಡಬೇಕೆಂದು ಹೇಳುತ್ತಿದ್ದರು. ಆದರೆ, ಇಂದು ಪರಿಸ್ಥಿತಿ, ಸನ್ನಿವೇಶಗಳು ಬದಲಾಗಿದೆ. ಯಾವುದೇ ಮಗು ಹುಟ್ಟಿದರೂ ಅದಕ್ಕೆ ಶಿಕ್ಷಣ ಕೊಡಿಸಬೇಕೆಂದು ಬಯಸುತ್ತಿದ್ದಾರೆ. ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿದರೆ ಉತ್ತಮ ಉದ್ಯೋಗ ಸಿಗುತ್ತದೆ, ಇದು ಸರ್ಕಾರದ ಗುರಿಯೂ ಆಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com