ಬೆಂಗಳೂರು: ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಯಾವುದೇ ಬಾಕಿ ಉಳಿದಿಲ್ಲ ಎಂದು ಗುರುವಾರ ಹೇಳಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯಕ್ಕೆ ಬರ ಪರಿಹಾರವಾಗಿ ಬರಬೇಕಾದ ಎನ್ ಡಿ ಆರ್ ಎಫ್ ಹಣ ಬಿಡುಗಡೆಗೆ ಒಂದು ಕಮಿಟಿ ಇದೆ. ಅದು ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಯವರು ಪ್ರಧಾನಿ ಆಗುವ ಮುನ್ನವೇ 10 ವರ್ಷ ಕಾಲ ಗುಜರಾತ್ ಸಿಎಂ ಆಗಿದ್ದವರು. ಹೀಗಾಗಿ ಅವರಿಗೆ ಕೇಂದ್ರದಿಂದ ಹಣವನ್ನು ಸೂಕ್ತ ಕಾಲಕ್ಕೆ ಪಡೆಯುವುದು ಹೇಗೆಂಬುದು ಗೊತ್ತಿದೆ, ''ರಾಜ್ಯ ಸರಕಾರದ ಆರೋಪಗಳಲ್ಲಿ ಹುರುಳಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಕೃಷಿ, ಕಂದಾಯ ಸಚಿವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಆರೋಪಗಳನ್ನು ಮಾಡಬಹುದು. ಆ ಪತ್ರ ನನಗೆ ತಲುಪುವ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಹಾಕ್ತಾರೆ. ಬೆಂಗಳೂರಿನಲ್ಲಿ ಮಾತ್ರ ಈ ವಿಚಾರವನ್ನು ಹೇಳುತ್ತಿಲ್ಲ. ಎರಡು ದಿನಗಳ ಹಿಂದೆ, ಕೇರಳದಲ್ಲಿದ್ದಾಗಲೂ ಹೀಗೆ ಹೇಳಿದ್ದೇನೆ. “ನಮ್ಮ ಕಡೆಯಿಂದ ಕರ್ನಾಟಕಕ್ಕೆ ಏನೂ ಬಾಕಿ ಇಲ್ಲ, ನಾನು ರಾಜ್ಯದ ಸಂಸದೆಯಾಗಿದ್ದು, ನನಗೂ ಜವಾಬ್ದಾರಿ ಇದೆ. ಯಾವುದೇ ರೀತಿಯ ಬಾಕಿ ಇಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಪತ್ರಕ್ಕೆ ನಾನು ಕಾಯುತ್ತಿದ್ದೇನೆ. ಅಕೌಂಟೆಂಟ್ ಜನರಲ್ ಅ ಸಹಿ ಇಲ್ಲದೆ ಹಣ ಕಳಿಸೋಕೆ ಸಾಧ್ಯನಾ? ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದರು.
ಕರ್ನಾಟಕಕ್ಕೆ ಬರ ಪರಿಹಾರಕ್ಕಾಗಿ ಎನ್ಡಿಆರ್ಎಫ್ ಹಣ ಬಿಡುಗಡೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, "ಎನ್ಡಿಆರ್ಎಫ್ಗಾಗಿ ಒಂದು ಸಮಿತಿ ಇದೆ. ಗೃಹ ಸಚಿವ ಅಮಿತ್ ಶಾ ಅದನ್ನು ಪರಿಶೀಲಿಸುತ್ತಾರೆ. ಈ ಸಂಬಂಧ ಕೃಷ್ಣ ಬೈರೇಗೌಡ ಭೇಟಿ ಮಾಡಿದ್ದು, ಅವರಿಗೆ ವಿವರಿಸಿದ್ದೇನೆ ಎನ್ಡಿಆರ್ಎಫ್ ಹಣ ಬಿಡುಗಡೆಗೆ ಕೇಂದ್ರ ತಂಡ ಬಂದು ಪರಿಶೀಲನೆ ಮಾಡಿ ವರದಿ ನೀಡಿದೆ. ಹೈಪವರ್ ಕಮಿಟಿ ಅದನ್ನು ಮುಂದೆ ನೋಡುತ್ತದೆ. ಹೈಪವರ್ ಕಮಿಟಿ ತೀರ್ಮಾನ ಮಾಡಿದ ತಕ್ಷಣವೇ ರಾಜ್ಯಕ್ಕೆ ಪರಿಹಾರ ಬರಲಿದೆ. ಅದನ್ನು ಯಾರು ನಿಲ್ಲಿಸಲು ಸಾಧ್ಯವಿಲ್ಲ ಎಂದರು.
Advertisement