ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಕುರಿತು ಅಧ್ಯಯನ ನಡೆಸಿರುವ ಕೇಂದ್ರ ಸರ್ಕಾರದ ಅಧಿಕಾರಿಗಳ ತಂಡವು ಹತ್ತು ದಿನಗಳೊಳಗೆ ವರದಿ ಸಲ್ಲಿಸಲಿದೆ. ಆ ಬಳಿಕ ಪರಿಹಾರದ ಮೊತ್ತ ಖಚಿತವಾಗಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಕೃಷ್ಣ ಬೈರೇಗೌಡರ, ಬರ ಪರಿಸ್ಥಿತಿಯನ್ನು ಪರಿಶೀಲಿಸಲು ಕೇಂದ್ರ ತಂಡ ಇತ್ತೀಚೆಗೆ ರಾಜ್ಯಕ್ಕೆ ಭೇಟಿ ನೀಡಿತ್ತು. ರಾಜ್ಯದಲ್ಲಿ ತೀವ್ರ ಬರಗಾಲ ಇರುವುದು ಕೇಂದ್ರದ ಅಧಿಕಾರಿಗಳ ತಂಡಗಳಿಗೆ ಮನವರಿಕೆ ಆಗಿದೆ. ಸಣ್ಣ ರೈತರ ಸಂಖ್ಯೆ ಸೇರಿದಂತೆ ಕೆಲವು ಅಂಕಿಅಂಶಗಳನ್ನು ಕೇಂದ್ರ ತಂಡಗಳು ಕೇಳಿವೆ. ಶೀಘ್ರದಲ್ಲಿ ಒದಗಿಸಲಾಗುವುದು' ಎಂದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೇಂದ್ರ ಸರ್ಕಾರವು 475 ಕೋಟಿಯಷ್ಟು ಕೂಲಿ ಹಣವನ್ನು ಬಾಕಿ ಇರಿಸಿಕೊಂಡಿದೆ. ಅದನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದರು.
ಸಂಕಷ್ಟದ ವರ್ಷದಲ್ಲಿ ಉದ್ಯೋಗ ದಿನಗಳನ್ನು ಹೆಚ್ಚಿಸುವ ಕುರಿತು ಮಾತನಾಡಿದ ಅವರು, ಬರಗಾಲದಲ್ಲಿ ಕೂಲಿ ಕಾರ್ಮಿಕರಿಗೆ 100 ದಿನಗಳ ಬದಲು 150 ದಿನ ಕೆಲಸ ನೀಡಬೇಕು ಎಂದು ಕಾನೂನಿನಲ್ಲಿ ಅವಕಾಶವಿದೆ. ಹಾಗಾಗಿ ರಾಜ್ಯದಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಉದ್ಯೋಗ ದಿನಗಳನ್ನು 100 ರಿಂದ 150ಕ್ಕೆ ವಿಸ್ತರಿಸಲು ಈ ಬಗ್ಗೆ ಆದೇಶ ಹೊರಡಿಸಬೇಕು ಎಂದು ರಾಜ್ಯ ಸರ್ಕಾರ ಸೆ.23ರಂದು ಕೇಂದ್ರಕ್ಕೆ ಮನವಿ ಪತ್ರ ರವಾನಿಸಿದೆ ಎಂದರು.
ಈಗಾಗಲೇ ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿರುವ ಸಚಿವ ಸಂಪುಟ ಉಪಸಮಿತಿ ಇದೀಗ ಮಂಗಳವಾರದಿಂದ 21 ತಾಲೂಕುಗಳ ಭೂ ಪರಿಶೀಲನೆ ನಡೆಸಿ ಶುಕ್ರವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ ಎಂದು ಗೌಡರು ತಿಳಿಸಿದರು.
ರಾಜ್ಯದಲ್ಲಿ ಶೇ.60ಕ್ಕಿಂತ ಹೆಚ್ಚು ಸಣ್ಣ ಮತ್ತು ಅತಿ ಸಣ್ಣ ರೈತರಿದ್ದಾರೆ ಎಂಬ ನಮ್ಮ ಹೇಳಿಕೆಯನ್ನು ಸಮರ್ಥಿಸಲು ನಾವು ಪೂರಕ ಮಾಹಿತಿ ಸಂಗ್ರಹಿಸುತ್ತಿದ್ದೇವೆ. ಈ ಮಾಹಿತಿಯನ್ನು ಕೇಂದ್ರ ತಂಡಕ್ಕೆ ಪೂರಕ ಜ್ಞಾಪಕ ಪತ್ರದ ರೂಪದಲ್ಲಿ ಸಲ್ಲಿಸುತ್ತೇವೆ ಎಂದು ಹೇಳಿದರು.
ವಿಚಿತ್ರ ಹವಾಮಾನ ಪರಿಸ್ಥಿತಿ ರಾಜ್ಯದಲ್ಲಿ ಇದೆ. ಕೆಲವು ತಿಂಗಳಲ್ಲಿ ವಾಡಿಕೆಗಿಂತ ಮಳೆ ಜಾಸ್ತಿಯಾದರೆ ಕೆಲವು ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಮಳೆ ಸ್ಥಿತಿಗತಿಗಳ ಬಗ್ಗೆ ಸ್ಪಷ್ಟತೆ ಇಲ್ಲದ ವಾತಾವರಣ ಇದೆ. ಹವಾಮಾನ ಏರುಪೇರು ಬಗ್ಗೆ. ಕೇಂದ್ರ ಗಂಭೀರವಾಗಿ ತೆಗೆದುಕೊಳ್ಳಬೇಕು ಇದಕ್ಕೆ ಅನುಗುಣವಾಗಿ ಸರ್ಕಾರದ ನೀತಿ, ಕಾರ್ಯಕ್ರಮ ರೂಪಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವರಿಕೆ ಮಾಡಿದ್ದೇವೆ ಎಂದರು.
Advertisement