ಬೆಳಗಾವಿ: ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ದಲಿತ ಮಹಿಳೆಯೊಬ್ಬರಿಗೆ ಚಪ್ಪಲಿ ಹಾರ ಹಾಕಿ, ಮಧ್ಯರಾತ್ರಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಘಟನೆ ನಡೆದಿದೆ. ಅಲ್ಲದೆ, ಮಹಿಳೆ ವಿರುದ್ಧ ಧಿಕ್ಕಾರ ಕೂಗಿ ಥಳಿಸಿರುವ ಆರೋಪ ಕೇಳಿಬಂದಿದೆ.
ದಲಿತ ಮಹಿಳೆಯೊಬ್ಬರು ಹಣಕಾಸಿನ ವ್ಯವಹಾರ ನಡೆಸುತ್ತಿದ್ದಾರೆ. ಮಹಿಳೆ ಹನಿ ಟ್ರ್ಯಾಪಿಂಗ್ ಮತ್ತು ಜನರನ್ನು ಬ್ಲಾಕ್ಮೇಲ್ ಮಾಡುವುದರಲ್ಲಿ ತೊಡಗಿದ್ದಾರೆ. ಹಣಕ್ಕಾಗಿ ಅಮಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಬೆಳಗಾವಿ ಎಸ್ಪಿಗೆ ಮನವಿ ಸಲ್ಲಿಸಿದರು.
ದಲಿತ ಸಂಘಟನೆಗಳ ಪದಾಧಿಕಾರಿಗಳು ಮಹಿಳೆಗೆ ಚಪ್ಪಲಿ ಹಾರ ಹಾಕಿ, ಗೋಕಾಕದ ಘಟಪ್ರಭಾದ ಮೃತ್ಯುಂಜಯ ಸರ್ಕಲ್ನಲ್ಲಿ ಮೆರವಣಿಗೆ ನಡೆಸಿದರು. ಮಹಿಳೆ 'ಹನಿ ಟ್ರ್ಯಾಪ್' ಮತ್ತು ಜನರನ್ನು ಬ್ಲಾಕ್ಮೇಲ್ ಮಾಡುವುದರಲ್ಲಿ ತೊಡಗಿದ್ದರು ಎಂದು ಆರೋಪಿಸಿದ್ದಾರೆ.
ಸಂಘಟನೆಗಳು ಹಣಕ್ಕಾಗಿ ಕಿರುಕುಳ ನೀಡುತ್ತಿವೆ ಎಂದು ಮಹಿಳೆ ಪ್ರತಿದೂರು ದಾಖಲಿಸಿದ್ದಾರೆ. ಶುಕ್ರವಾರ ರಾತ್ರಿ ಪದಾಧಿಕಾರಿಗಳು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಆಕೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
'ಸೆಪ್ಟೆಂಬರ್ 30ರಂದು, 5 ಲಕ್ಷ ರೂಪಾಯಿ ನೀಡುವಂತೆ ಒತ್ತಾಯಿಸಿದರು ಮತ್ತು ನನ್ನನ್ನು ಹಾಗೂ ನನ್ನ ಕುಟುಂಬವನ್ನು ಊರಿನಿಂದ ಗಡಿಪಾರು ಮಾಡುವುದಾಗಿ ಬೆದರಿಕೆ ಹಾಕಿದರು. ನಾನು ಹಣ ನೀಡಲು ನಿರಾಕರಿಸಿದೆ. ಹೀಗಾಗಿ, ಶುಕ್ರವಾರ ರಾತ್ರಿ ನನ್ನ ಮನೆಗೆ ಬಂದು ಕಿರುಕುಳ ನೀಡಲು ಆರಂಭಿಸಿದರು. ಅವರು ನನ್ನ ಮತ್ತು ನನ್ನ ಗಂಡನ ಮೇಲೆ ಹಲ್ಲೆ ನಡೆಸಿದರು. ನನಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದರು' ಎಂದು ಮಹಿಳೆ ತಿಳಿಸಿದ್ದಾರೆ.
ಗೋಕಾಕ ಡಿವೈಎಸ್ಪಿ ಡಿಎಚ್ ಮುಲ್ಲಾ ಮಾತನಾಡಿ, ಹಣಕಾಸಿನ ವ್ಯವಹಾರದ ಹಿನ್ನೆಲೆಯಲ್ಲಿ ಘಟನೆ ನಡೆದಿದೆ. ಎರಡೂ ಪಕ್ಷಗಳು ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ' ಎಂದು ಹೇಳಿದರು.
Advertisement
Advertisement