ಬರದಿಂದಾಗಿ ರಾಜ್ಯದಲ್ಲಿ ವಿದ್ಯುತ್ ಬಳಕೆ 6,000 ಮೆಗಾವ್ಯಾಟ್ ಹೆಚ್ಚಾಗಿದೆ; ರೈತರಿಗೆ ಐದು ತಾಸು ವಿದ್ಯುತ್ ಪೂರೈಕೆಗೆ ಸೂಚನೆ: ಸಿಎಂ
ಬೆಂಗಳೂರು: ರಾಜ್ಯದಲ್ಲಿ ಬರಗಾಲದಿಂದ ಉತ್ಪಾದನೆ ಕುಂಠಿತವಾಗಿ, ಬೇಡಿಕೆ ಹೆಚ್ಚಾಗಿ ವಿದ್ಯುತ್ ಸಮಸ್ಯೆ ಇದೆ, ಇದರಿಂದ ಅನಿವಾರ್ಯವಾಗಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಒಪ್ಪಿಕೊಂಡಿದ್ದರು.
ರೈತರಿಗೆ ಹಳ್ಳಿಗಳಲ್ಲಿ ವಿದ್ಯುತ್ ಪೂರೈಕೆ ಸಮಸ್ಯೆಯಾಗುತ್ತಿರುವ ಬಗ್ಗೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ, ವಿದ್ಯುತ್ ಸಮಸ್ಯೆ ಆಗಿರುವುದು ನಿಜ. ರೈತರ ಪಂಪ್ಸೆಟ್ಗಳಿಗೆ ನಿತ್ಯ 5 ಗಂಟೆ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಇಂದು ಮೈಸೂರಿನಲ್ಲಿ ತಿಳಿಸಿದರು.
ರೈತರಿಗೆ ಐದು ತಾಸು ವಿದ್ಯುತ್ ಪೂರೈಕೆಗೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಇದಲ್ಲದೇ ಮೂರು ಫೇಸ್ನಲ್ಲಿ ಶೆಡ್ಯೂಲ್ ಮಾಡಿ ನೀಡುವಂತೆ ಸೂಚನೆ ನೀಡಲಾಗಿದ್ದು, ವಿದ್ಯುತ್ ಹೊರಗಿನಿಂದ ಕೊಂಡುಕೊಳ್ಳುವಂತೆ ಇದಲ್ಲದೇ ಸಕ್ಕರೆ ಫ್ಯಾಕ್ಟರಿಗಳಿಂದ ಕೂಡ ವಿದ್ಯುತ್ ಖರೀದಿಗೆ ಸೂಚನೆ ನೀಡಲಾಗಿದೆ ಎಂದರು.
ಕರ್ನಾಟಕದ ಪ್ರಸ್ತುತ ವಿದ್ಯುತ್ ಬಿಕ್ಕಟ್ಟಿಗೆ ಹಿಂದಿನ ಬಿಜೆಪಿ ಸರ್ಕಾರವನ್ನು ದೂಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ವರ್ಷ ಬರಗಾಲದ ಕಾರಣ ಅಕ್ಟೋಬರ್ನಲ್ಲಿ ಬಳಕೆ 10,000 ಮೆಗಾವ್ಯಾಟ್ನಿಂದ 16,000 ಮೆಗಾವ್ಯಾಟ್ಗೆ ಏರಿದೆ. ರಾಜ್ಯದಲ್ಲಿ 2,000 ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ. ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದರು.
ಮಳೆ ಇರದ ಕಾರಣ ವಿದ್ಯುತ್ ಚ್ಛಕ್ತಿ ಪಂಪ್ಸೆಟ್ಗಳಿಗೆ ಹೆಚ್ಚಿನ ಬಳಕೆಯಾಗಿದೆ. ಕಳೆದ ಸಾರಿ ಹತ್ತು ಸಾವಿರ ಮೆಗಾವ್ಯಾಟ್ ವಿದ್ಯುತ್ ಬಳಕೆಯಾಗಿದೆ. ಈಗ ಹದಿನಾರು ಸಾವಿರ ಮೆಗಾವಾಟ್ ಬಳಕೆ ಹೆಚ್ಚಾಗಿದೆ. ಸರಿ ಸುಮಾರು ಎರಡು ಸಾವಿರ ಮೆಗಾವ್ಯಾಟ್ ವಿದ್ಯುತ್ ಕೊರತೆ ಇರುವುದಾಗಿ ಸಿಎಂ ಸಿದ್ದರಾಮಯ್ಯ ಅವರು ತಿಳಿಸಿದರು.
ಈಗ ಮೇವಿನ ಕೊರತೆ ಇಲ್ಲ, ಆದರೆ ಮೇವನ್ನು ಶೇಖರಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಚನೆ ನೀಡಲಾಗಿದ್ದು, ಖಾಸಗಿಯವರಿಂದ ಬೋರ್ವೆಲ್ ಪಡೆದುಕೊಳ್ಳುವಂತೆ ಇದಲ್ಲದೇ ಹೊಸ ಬೋರ್ವೆಲ್ ಕೂಡ ಕೊರೆಯುವಂತೆ ತಿಳಿಸಲಾಗಿದೆ ಅಂತ ಅವರು ಇದೇ ವೇಳೆ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ