ಬಿಬಿಎಂಪಿ ವಾರ್ಡ್ ಮರು ವಿಂಗಡಣೆ : 225 ವಾರ್ಡ್ಗಳ ಅಂತಿಮ ಪಟ್ಟಿ ಪ್ರಕಟ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಾರ್ಡ್ಗಳ ಮರು ವಿಂಗಡಣೆ ಕುರಿತು ರಾಜ್ಯ ಸರ್ಕಾರ ಸೋಮವಾರ ಅಂತಿಮ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ 225 ವಾರ್ಡ್ಗಳು ಬರಲಿವೆ. ಹಿಂದಿನ ಬಿಜೆಪಿ ಸರ್ಕಾರ 198 ರಿಂದ 243 ಕ್ಕೆ ವಾರ್ಡ್ಗಳನ್ನು ಹೆಚ್ಚಿಸಲು ಬಯಸಿತ್ತು.
Published: 26th September 2023 10:04 AM | Last Updated: 26th September 2023 08:16 PM | A+A A-

ಬಿಬಿಎಂಪಿ ಕೇಂದ್ರ ಕಚೇರಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಾರ್ಡ್ಗಳ ಮರು ವಿಂಗಡಣೆ ಕುರಿತು ರಾಜ್ಯ ಸರ್ಕಾರ ಸೋಮವಾರ ಅಂತಿಮ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಅದರಂತೆ 225 ವಾರ್ಡ್ಗಳು ಬರಲಿವೆ. ಹಿಂದಿನ ಬಿಜೆಪಿ ಸರ್ಕಾರ 198 ರಿಂದ 243 ಕ್ಕೆ ವಾರ್ಡ್ಗಳನ್ನು ಹೆಚ್ಚಿಸಲು ಬಯಸಿತ್ತು.
ನಗರಾಭಿವೃದ್ಧಿ ಇಲಾಖೆ ಮರು ವಿಂಗಡಣೆ ಕಾರ್ಯವನ್ನು ಮೇಲ್ವಿಚಾರಣೆ ಮಾಡಿದ್ದು, ಬಿಬಿಎಂಪಿ ಕೌನ್ಸಿಲ್ಗೆ ಚುನಾವಣೆ ನಡೆಸಲು ಸರ್ಕಾರ ತಯಾರಿ ನಡೆಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ. ಪಾಲಿಕೆ ಅವಧಿಯು ಸೆಪ್ಟೆಂಬರ್ 10, 2020 ರಂದು ಕೊನೆಗೊಂಡಿತು.
ಆಗಸ್ಟ್ 18ರಂದು ವಾರ್ಡ್ ಮರುವಿಂಗಡನೆಯ ಕರಡು ಪಟ್ಟಿಯನ್ನು ಪ್ರಕಟಿಸಿದ್ದ ಸರ್ಕಾರ, ಸಾರ್ವಜನಿಕರಿಗೆ ಆಕ್ಷೇಪಣೆ ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಿತ್ತು. ಸೆ.14ರಂದು ಪರಿಶೀಲನಾ ಸಮಿತಿ ಸಭೆ ನಡೆಸಿ ಜನರು ನೀಡಿದ ವಿವಿಧ ಸಲಹೆಗಳನ್ನು ಪರಿಗಣಿಸಿದ್ದು, ವಾರ್ಡ್ಗಳ ಮರು ವಿಂಗಡಣೆ ಸಮಸ್ಯೆ ಇತ್ಯರ್ಥವಾಗಿರುವುದರಿಂದ ಇದೇ ವರ್ಷ ಡಿಸೆಂಬರ್ನಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧವಾಗಿದೆ.
12 ವಾರಗಳಲ್ಲಿ ಮರು ವಿಂಗಡಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಜೂನ್ 2023 ರಲ್ಲಿ ಹೈಕೋರ್ಟ್ ನೀಡಿದ್ದ ನಿರ್ದೇಶನವನ್ನು ಆಧರಿಸಿ, ಒಬಿಸಿ ಅಭ್ಯರ್ಥಿಗಳಿಗೆ ಮೀಸಲಿಡಬೇಕಾದ ವಾರ್ಡ್ಗಳ ಪಟ್ಟಿಯನ್ನು ಸರ್ಕಾರವು ಈಗ ಹೊರತರಲಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಕಾಂಗ್ರೆಸ್ ಸಜ್ಜು: ಕೈ ನಾಯಕರಿಂದ ಆಪರೇಷನ್ ಹಸ್ತ!
ಮರು ವಿಂಗಡಣೆ ಅವೈಜ್ಞಾನಿಕ: ಆದಾಗ್ಯೂ ಮರು ವಿಂಗಡಣೆ ಪ್ರಕ್ರಿಯೆ "ಅವೈಜ್ಞಾನಿಕ" ಎಂದು ಬಣ್ಣಿಸುವ ಮೂಲಕ ಬಿಜೆಪಿ ನಾಯಕರಿಂದ ತೀವ್ರ ಟೀಕೆಗೆ ಕಾರಣವಾಗಿದೆ. ತಮ್ಮ ಪಕ್ಷ ಪ್ರಬಲವಾಗಿರುವ ವಾರ್ಡ್ಗಳಲ್ಲಿ ಸರ್ಕಾರ ಮತದಾರರ ಸಂಖ್ಯೆಯನ್ನು ಕಡಿಮೆ ಮಾಡಿದೆ ಎಂದು ಬಿಜೆಪಿಯ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.
ಯಡಿಯೂರು ವಾರ್ಡ್ನ ತ್ಯಾಗರಾಜನಗರ ಬೂತ್ನಿಂದ ಸುಮಾರು 7,800 ಮತದಾರರನ್ನು ಗಣೇಶ ಮಂದಿರ ವಾರ್ಡ್ಗೆ ಸ್ಥಳಾಂತರಿಸಲಾಗಿದೆ. ಪ್ರತಿ ವಾರ್ಡ್ನ ಮತದಾರರ ಸಂಖ್ಯೆ 37,000 ಆಗಿರಬೇಕು. ಆದರೆ ಯಡಿಯೂರು ವಾರ್ಡ್ನ ಮತದಾರರ ಸಂಖ್ಯೆ 29 ಸಾವಿರಕ್ಕೆ ಇಳಿದಿದೆ ಎಂದು ಅವರು ಹೇಳಿದರು. ಅವೈಜ್ಞಾನಿಕ ಮರು ವಿಂಗಡಣೆ ವಿರುದ್ಧ ಅನೇಕ ನಿವಾಸಿಗಳ ಕಲ್ಯಾಣ ಸಂಘಗಳು ಹೈಕೋರ್ಟ್ಗೆ ಹೋಗಲು ಯೋಜಿಸುತ್ತಿವೆ ಎಂದು ಅವರು ಹೇಳಿದರು.