ಬೆಂಗಳೂರು: ಹೆತ್ತ ಮಗುವನ್ನೇ ಹತ್ಯೆ ಮಾಡಿ ಚೀಲದಲ್ಲಿ ತುಂಬಿಕೊಂಡು ಬರುವಾಗ ಸಿಕ್ಕಿಬಿದ್ದಿದ್ದ ಬೆಂಗಳೂರಿನ ಖಾಸಗಿ ಕಂಪನಿ ಸಿಇಒ ಸುಚನಾ ಸೇಠ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಗೋವಾ ಪೊಲೀಸರು ನ್ಯಾಯಾಲಯಕ್ಕೆ 642 ಪುಟಗಳ ಚಾರ್ಜ್ಶೀಟ್ ಸಲ್ಲಿಸಿದ್ದಾರೆ.
ಗೋವಾ ಮಕ್ಕಳ ನ್ಯಾಯಾಲಯದಲ್ಲಿ ಆರೋಪಿ ತಾಯಿ ವಿರುದ್ಧ 642 ಪುಟಗಳ ಚಾರ್ಜ್ಶೀಟ್ ಅನ್ನು ಕಲ್ಲಂಗೂಟ್ ಪೊಲೀಸರು ಸಲ್ಲಿಸಿದ್ದು, ಆಕೆ ತನ್ನ ಮಗನನ್ನು ಹೇಗೆ ಕೊಲೆ ಮಾಡಿದಳು, ನಂತರ ತಪ್ಪಿಸಿಕೊಳ್ಳಲು ಏನೆಲ್ಲಾ ಪ್ರಯತ್ನ ನಡೆಸಿದ್ದಳು ಎಂಬುದನ್ನು ವಿವರಿಸಲಾಗಿದೆ.
ಸದ್ಯ ಸುಚನಾ ಸೇಠ್ ನ್ಯಾಯಾಂಗ ಬಂಧನದಲ್ಲಿದ್ದು, ಇವರ ಬಗ್ಗೆ 59 ಸಾಕ್ಷಿಗಳನ್ನು ಪರಿಗಣಿಸಲಾಗಿದ್ದು ಜೂನ್ 14 ರಂದು ಕೋರ್ಟ್ನಲ್ಲಿ ವಿಚಾರಣೆ ಪ್ರಾರಂಭವಾಗಲಿದೆ.
ಜನವರಿ 6ರ ರಾತ್ರಿ ಹತ್ಯೆ ಮಾಡುವುದಕ್ಕೂ ಮುನ್ನ ಮಗುವಿಗೆ ಕೆಮ್ಮಿನ ಸಿರಪ್ ನೀಡಲಾಗಿತ್ತು. ಬಳಿಕ ಬಟ್ಟೆಯನ್ನು ಮುಖಕ್ಕೆ ಸುತ್ತಿ ಹಾಗೂ ದಿಂಬನ್ನು ಬಳಸಿ ಮಗುವನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ ಎಂದು ಉಲ್ಲೇಖಿಸಲಾಗಿದೆ.
ಸುಚನಾ ಸೇಠ್ ಅವರು ತಮ್ಮ ಪತಿ ವಿಚ್ಛೇದಿತ ವೆಂಕಟ್ ರಾಮನ್ ಅವರಿಗೆ ಜನವರಿ 6 ರಂದು ಮೆಸೇಜ್ ಮಾಡಿ ಮರುದಿನ ಮಗುವನ್ನು ಭೇಟಿಯಾಗಬಹುದು ಎಂದು ತಿಳಿಸಿದ್ದರು. ಆದರೆ, ಬೆಂಗಳೂರಿಗೆ ಬಂದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಮಗು ತನ್ನ ತಂದೆಯನ್ನು ಭೇಟಿಯಾಗಲು ಇಷ್ಟಪಡದ ಕಾರಣ ಸುಚನಾ ಸೇಠ್ ಮತ್ತು ಅವರ ಮಗ ಜನವರಿ 6 ರಂದು ಕಾಂಡೋಲಿಮ್ನಲ್ಲಿರುವ ಸರ್ವಿಸ್ ಅಪಾರ್ಟ್ಮೆಂಟ್ಗೆ ಕರೆದುಕೊಂಡು ಹೋಗಿದ್ದರು ಎಂದು ಚಾರ್ಜ್ ಶೀಟ್ನಲ್ಲಿ ತಿಳಿಸಿದ್ದಾರೆ.
ಗೋವಾದಲ್ಲಿ ತಂಗಿದ್ದ ಹೋಟೆಲ್ನಲ್ಲಿನ ಸಿಬ್ಬಂದಿಗೆ ಆರೋಪಿ ತನ್ನ ಜೊತೆ ದೊಡ್ಡ ಚೀಲ ಹೊಂದಿರುವುದು ತಿಳಿದುಬಂದಿದೆ. ಜತೆಗೆ ಹೋಟೆಲ್ನಿಂದ ನಿರ್ಗಮಿಸುವಾಗ ಮಗು ಜತೆಗಿಲ್ಲ ಎಂಬುದು ಅನುಮಾನ ಮೂಡಿಸಿದೆ. ಬಳಿಕ ಹೋಟೆಲ್ ಸಿಬ್ಬಂದಿಯು ರೂಮ್ಗೆ ತೆರಳಿ ನೋಡಿದಾಗ ರಕ್ತದ ಕಲೆಗಳು ಕಂಡು ಬಂದಿವೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಚಾರ್ಜ್ ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಬೆಂಗಳೂರು ಮೂಲದ ಮೈಂಡ್ಫುಲ್ ಎ.ಐ ಲ್ಯಾಬ್ ಹೆಸರಿನ ಖಾಸಗಿ ಕಂಪನಿಯ ಸಿಇಒ 39 ವರ್ಷ ವಯಸ್ಸಿನ ಸುಚನಾ ಸೇಠ್ ಜನವರಿ 6ರಂದು ಗೋವಾದ ಹೋಟೆಲ್ ಒಂದರಲ್ಲಿ ತಮ್ಮ 4 ವರ್ಷದ ಮಗು ಚಿನ್ಮಯ್ನನ್ನು ಹತ್ಯೆ ಮಾಡಿದ್ದಳು. ಬಳಿಕ ಮೃತದೇಹವನ್ನು ಸೂಟ್ಕೇಸ್ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ ವೇಳೆ ಗೋವಾ ಪೊಲೀಸರ ಸೂಚನೆಯ ಮೇರೆಗೆ ಚಿತ್ರದುರ್ಗದ ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದರು.
Advertisement