ಯಾದಗಿರಿ: ಭಾರತೀಯ ರೈಲ್ವೆ ಯಾದಗಿರಿ ಜಿಲ್ಲೆಯ ಜನರಿಗೆ ಶುಕ್ರವಾರ ಸಿಹಿ ಸುದ್ದಿ ನೀಡಿದ್ದು, ಬೆಂಗಳೂರು-ಕಲಬುರಗಿ ನಡುವಿನ ನೂತನ ವಂದೇ ಭಾರತ್ ರೈಲು ಇನ್ನುಮುಂದೆ ಯಾದಗಿರಿಯಲ್ಲೂ ನಿಲ್ಲಲಿದೆ.
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ್ದ ಬೆಂಗಳೂರು-ಕಲಬುರಗಿ ನಡುವಿನ ವಂದೇ ಭಾರತ್ ರೈಲು ಯಾದಗಿರಿಯಲ್ಲಿ ನಿಲ್ಲುವುದಿಲ್ಲ ಎಂಬುದಕ್ಕೆ ಜಿಲ್ಲೆಯ ಜನ ಬೇಸರ ವ್ಯಕ್ತಪಡಿಸಿದ್ದರು. ಆದರೆ ಇನ್ಮುಂದೆ ಯಾದಗಿರಿ ರೈಲ್ವೆ ನಿಲ್ದಾಣಕ್ಕೂ ವಂದೇ ಭಾರತ್ ರೈಲು ಸ್ಟಾಪ್ ಆಗಲಿದೆ.
ಕಲಬುರ್ಗಿಯಿಂದ ಬೆಂಗಳೂರಿಗೆ ಹೊರಡಲಿರುವ ನೂತನ ವಂದೇ ಭಾರತ್ ರೈಲು ಕಳೆದ ತಿಂಗಳಷ್ಟೇ ಆರಂಭವಾಗಿತ್ತು. ವಂದೇ ಭಾರತ್ ರೈಲು ನಿಲ್ಲುಗಡೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಗಿತ್ತು.
ಪ್ರತಿಭಟನೆಗೆ ಮಣಿದ ರೈಲ್ವೆ ಇಲಾಖೆ ಕೊನೆಗೂ ರೈಲು ನಿಲ್ಲುಗಡೆ ಮಾಡುವುದಾಗಿ ಆದೇಶಿಸಿದ್ದು, ಯಾದಗಿರಿ ರೈಲ್ವೆ ನಿಲ್ದಾಣಕ್ಕೆ ಕಲಬುರ್ಗಿಯಿಂದ ಬೆಳಗ್ಗೆ 5:54 ಕ್ಕೆ ರೈಲು ಬರಲಿದೆ. ವಿಚಾರ ತಿಳಿದ ಜಿಲ್ಲೆಯ ಜನರು ಸಂತಸಗೊಂಡಿದ್ದಾರೆ.
ನೂತನ ವೇಳಾಪಟ್ಟಿ ಹೀಗಿದೆ
ಪ್ರತಿನಿತ್ಯ ಬೆಳಗ್ಗೆ 5.15 ಕ್ಕೆ ಕಲಬುರಗಿಯಿಂದ ಹೊರಟು, 5.54ಕ್ಕೆ ಯಾದಗಿರಿಗೆ ಬರಲಿದೆ ಮತ್ತು ಮಧ್ಯಾಹ್ನ 12.45 ಕ್ಕೆ ಬೆಂಗಳೂರು ತಲುಪಲಿದೆ. ಮಧ್ಯಾಹ್ನ 3.15ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 9.44ಕ್ಕೆ ಯಾದಗಿರಿ ತಲುಪಲಿದೆ ಮತ್ತು 11.30 ಕ್ಕೆ ಕಲಬುರಗಿಗೆ ಬರಲಿದೆ.
Advertisement