ದಾವಣಗೆರೆ/ರಾಮನಗರ: ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗುತ್ತಿದ್ದಂತೆ ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದು ಅಕ್ರಮ ಸಾಗಾಣೆ ಮೇಲೆ ನಿಗಾ ಇಟ್ಟಿದ್ದು ರಾಮನಗರ ಮತ್ತು ದಾವಣಗೆರೆಯಲ್ಲಿ ತಪಾಸಣೆ ವೇಳೆ ಬರೋಬ್ಬರಿ 22 ಕೋಟಿ ಮೌಲ್ಯದ ಚಿನ್ನ ಮತ್ತ ವಜ್ರಗಳನ್ನು ವಶಪಡಿಸಿಕೊಂಡಿದ್ದಾರೆ.
ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಕೋಟಿ ಮೌಲ್ಯದ ಚಿನ್ನವನ್ನು ರಾಮನಗರದಲ್ಲಿ ಜಪ್ತಿ ಮಾಡಿದ್ದರೆ ದಾವಣಗೆರೆಯಲ್ಲಿ 12.50 ಕೋಟಿ ಮೌಲ್ಯದ ಚಿನ್ನ, ವಜ್ರ, ಹಾಗೆ ತುಮಕೂರಿನಲ್ಲಿ 70 ಲಕ್ಷ ಹಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾವಣಗೆರೆಯ ಲೋಕಿಕೆರೆ ಚೆಕ್ಪೋಸ್ಟ್ ನಲ್ಲಿ ಚುನಾವಣಾ ಅಧಿಕಾರಿ ಲೋಕೇಶ್ ನೇತೃತ್ವದಲ್ಲಿ ತಪಾಸಣೆ ನಡೆಸಿದ್ದು ಈ ವೇಳೆ ಸೂಕ್ತ ದಾಖಲೆಗಳು ಇಲ್ಲದ ಕಾರಣ 12.50 ಕೋಟಿ ರೂ. ಮೌಲ್ಯದ ಚಿನ್ನ, ವಜ್ರವನ್ನು ಜಪ್ತಿ ಮಾಡಲಾಗಿದೆ. ಈ ಚಿನ್ನ ಮತ್ತು ವಜ್ರವನ್ನು ವಿವಿಧ ಆಭರಣ ಅಂಗಡಿಗಳಿಗೆ ಸಾಗಿಸಲಾಗುತ್ತಿತ್ತು ಎಂದು ತಿಳಿಬಂದಿದೆ.
ರಾಮನಗರದ ಬಿಡದಿ ಪೊಲೀಸರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 10 ಕೋಟಿ ಮೌಲ್ಯದ ಚಿನ್ನವನ್ನು ಜಪ್ತಿ ಮಾಡಿದ್ದಾರೆ. ಬೆಂಗಳೂರು-ಮೈಸೂರು ಹೆದ್ದಾರಿ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದ ವಾಹನವನ್ನು ಬಿಡದಿ ಬಳಿಯ ಹೆಜ್ಜಾಲ ಟೋಲ್ ಬಳಿ ಪೊಲೀಸರು ತಪಾಸಣೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ.
Advertisement