ಮಡಿಕೇರಿ: ಕೊಡಗಿನಲ್ಲಿ ಕೂಂಬಿಂಗ್ ಮತ್ತು ಹುಲಿ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯಾಧಿಕಾರಿಗಳು ಮತ್ತು ಆನೆಗಳ ಹಿಂಡಿನ ಮೇಲೆ ಜೇನುನೊಣಗಳು ದಾಳಿ ನಡೆಸಿದ್ದು, ಗಾಯಗೊಂಡಿವೆ. ದಕ್ಷಿಣ ಕೊಡಗಿನ ಹರಿಹರ ಗ್ರಾಮದ ಅರಣ್ಯದ ಅಂಚಿನಲ್ಲಿ ಗುರುವಾರ ಈ ಘಟನೆ ವರದಿಯಾಗಿದೆ.
ದಕ್ಷಿಣ ಕೊಡಗಿನ ಗ್ರಾಮಗಳಲ್ಲಿ ಹುಲಿಯ ಚಲನವಲನ ಪತ್ತೆಯಾಗಿದ್ದು, ಅಲ್ಲಿನ ನಿವಾಸಿಗಳು ಭಯಭೀತರಾಗಿದ್ದಾರೆ. ಪೊನ್ನಂಪೇಟೆ ತಾಲೂಕಿನ ಹರಿಹರ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ಹುಲಿ ಪ್ರತ್ಯಕ್ಷವಾಗಿದ್ದು, ರೈತರು, ಕಾರ್ಮಿಕರು ಹಾಗೂ ಇತರ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಇದರ ಬೆನ್ನಲ್ಲೇ ಅರಣ್ಯ ಇಲಾಖೆ ಈ ಪ್ರದೇಶದಲ್ಲಿ ಹುಲಿ ಪತ್ತೆಗೆ ಕ್ರಮ ಕೈಗೊಂಡಿದೆ. ಸಂಘರ್ಷ ವಲಯದ ಅರಣ್ಯದ ಅಂಚಿನಲ್ಲಿ ಇರಿಸಲಾದ ಕ್ಯಾಮೆರಾ ಟ್ರ್ಯಾಪ್ಗಳ ಜೊತೆಗೆ, ಹುಲಿಯ ಚಲನವಲನವನ್ನು ಪತ್ತೆಹಚ್ಚಲು ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದೆ.
ಗ್ರಾಮದ ಅರಣ್ಯ ಪ್ರದೇಶದಲ್ಲಿ ಕೂಂಬಿಂಗ್ ಕಾರ್ಯಾಚರಣೆ ವೇಳೆ ಗುರುವಾರ ಮಧ್ಯಾಹ್ನ ಜೇನುನೊಣಗಳ ಹಿಂಡಿನ ದಾಳಿಯಲ್ಲಿ ಡಿಆರ್ಎಫ್ಒ ರಂಜನ್ ಮತ್ತು ಭೀಮ ಹೆಸರಿನ ಆನೆ ಗಾಯಗೊಂಡಿದೆ. ರಂಜನ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆನೆ ಭೀಮಗೆ ಸಣ್ಣಪುಟ್ಟ ಗಾಯಗಳಾಗಿವೆ.
ಆದರೂ, ಮತ್ತೊಂದು ಆನೆ ಮಹೇಂದ್ರ ಸೇರಿದಂತೆ ಉಳಿದ ಸಿಬ್ಬಂದಿಯೊಂದಿಗೆ ಅರಣ್ಯ ಇಲಾಖೆ ಕೂಂಬಿಂಗ್ ಕಾರ್ಯಾಚರಣೆ ಮುಂದುವರಿಸಿದೆ.
ಟಿ ಶೆಟ್ಟಿಗೇರಿ, 2ನೇ ರುದ್ರಗುಪ್ಪೆ, ಹರಿಹರ, ಕೆ ಬಡಗ ಗ್ರಾಮಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹುಲಿ ಸಂಘರ್ಷ ವಲಯವಾಗಿ ಮಾರ್ಪಟ್ಟಿವೆ. ಕಳೆದ ವರ್ಷ ಫೆಬ್ರುವರಿಯಲ್ಲಿ ಹುಲಿ ದಾಳಿಗೆ ಇಬ್ಬರು ವ್ಯಕ್ತಿಗಳು ಸಾವಿಗೀಡಾಗಿದ್ದರು.
Advertisement