ಹಾಸನ: ಎದುರಿಗೆ ಸಿಕ್ಕವರ ಮೇಲೆ ದಾಳಿ ಮಾಡುತ್ತಿದ್ದ ಕಾಡಾನೆ ಕರಡಿಯ ಉಪಟಳ ಜಾಸ್ತಿಯಾಗಿತ್ತು. ಹೀಗಾಗಿ ಕರಡಿ ಕಾಡಾನೆಯನ್ನು ಹಿಡಿಯುವಂತೆ ಒತ್ತಾಯಗಳು ಹೆಚ್ಚಾಗಿತ್ತು. ಆದರೆ ಕಳೆದ ಮೂರ್ನಾಲ್ಕು ತಿಂಗಳಿಂದ ಮದ ಇದ್ದಿದ್ದರಿಂದ ಅದನ್ನು ಹಿಡಿಯುವ ಕಾರ್ಯಕ್ಕೆ ಅರಣ್ಯಾಧಿಕಾರಿಗಳು ಮುಂದಾಗಿರಲಿಲ್ಲ.
ಅರ್ಜುನ ಸಾವಿನ ನಂತರ ಅರಣ್ಯಾಧಿಕಾರಿಗಳು ಸಹ ಮದದಲ್ಲಿರುವ ಕಾಡಾನೆಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಕೈಬಿಟ್ಟಿತ್ತು. ಆದರೆ ಇದೀಗ ಕರಡಿ ಕಾಡಾನೆಗೆ ಮದ ಕಡಿಮೆಯಾಗಿರುವುದರಿಂದ ಕಾರ್ಯಾಚರಣೆ ಕೈಗೊಂಡಿದ್ದ ಅರಣ್ಯಾಧಿಕಾರಿಗಳು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಕರಡಿ ಆನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಬೇಲೂರು ತಾಲ್ಲೂಕಿನ ವಾಟೇಹಳ್ಳಿಯ ಐಬಿಸಿ ಕಾಫಿ ತೋಟದಲ್ಲಿ ಅರಣ್ಯ ಇಲಾಖೆ ತಂಡ ಕರಡಿ ಆನೆಯನ್ನು ಸೆರೆ ಹಿಡಿದಿದೆ. ಅಭಿಮನ್ಯು, ಪ್ರಶಾಂತ, ಸುಗ್ರೀವ, ಕರ್ನಾಟಕ ಭೀಮ, ಅಶ್ವತ್ಥಾಮ, ಮಹೇಂದ್ರ ಸೇರಿ ಎಂಟು ಆನೆಗಳಿಂದ ಭರ್ಜರಿ ಕಾರ್ಯಾಚರಣೆ ಮೂಲಕ ಕಾಡಾನೆ ಕರಡಿಯನ್ನು ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ. ಸದ್ಯ ಹಾಸನದಲ್ಲಿ ಸೆರೆ ಹಿಡಿದ ಕಾಡಾನೆ ಕರಡಿಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸ್ಥಳಾಂತರ ಮಾಡಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ಕರಡಿ ಕಾಡಾನೆ ಜನವರಿ 4ರಂದು ಬೇಲೂರು ತಾಲ್ಲೂಕಿನ ಮತ್ತಾವರ ಬಳಿ ಕಾರ್ಮಿಕ ವಸಂತ್ನನ್ನು ಕೊಂದಿತ್ತು. ಬಳಿಕ ಬೇಲೂರು ಸಕಲೇಶಪುರ ಭಾಗದಲ್ಲಿ ಹಲವರ ಮೇಲೆ ದಾಳಿ ಮಾಡಿ ಆತಂಕ ಸೃಷ್ಟಿ ಮಾಡಿತ್ತು. ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಗ್ರಾಮಸ್ಥರು ಭಯಭೀತಗೊಂಡಿದ್ದರು. ಕಾಡಾನೆ ಜನರನ್ನು ಅಟ್ಟಾಡಿಸುವ ವಿಡಿಯೋ ಮೊಬೈಲ್ನಲ್ಲಿ ಸೆರೆ ಆಗಿದ್ದು, ಎಲ್ಲೆಡೆ ವೈರಲ್ ಕೂಡ ಆಗಿತ್ತು.
Advertisement