ಹುಬ್ಬಳ್ಳಿ/ಧಾರವಾಡ: ನೇಹಾ ಹಿರೇಮಠ ಹತ್ಯೆ ಖಂಡಿಸಿ ಅಂಜುಮನ್-ಎ-ಇಸ್ಲಾಂ ಸಂಘಟನೆ ಕರೆ ನೀಡಿದ್ದ ಧಾರವಾಡ ಬಂದ್'ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಹುಬ್ಬಳ್ಳಿಯ ಶಾಹ ಬಜಾರ್ ಮತ್ತು ನೂರಾನಿ ಮಾರ್ಕೆಟ್ ವ್ಯಾಪಾರಸ್ಥರಿಂದ ಬಂದ್ಗೆ ಬೆಂಬಲ ನೀಡಲಾಯಿತು. ಬೆಳಗ್ಗೆ 8ರಿಂದ ಮಧ್ಯಾಹ್ನ 3ಗಂಟೆಯವರೆಗೆ ಅಂಗಡಿ- ಮುಗ್ಗಟ್ಟುಗಳನ್ನ ಬಂದ್ ಮಾಡಿದ ವ್ಯಾಪಾರಸ್ಥರು ಬೆಂಬಲ ವ್ಯಕ್ತಪಡಿಸಿದರು.
ಜಸ್ಟಿಸ್ ಟು ನೇಹಾ ಹಿರೇಮಠ ಎಂದು ತಮ್ಮ ಅಂಗಡಿಗಳಿಗೆ ಬೋರ್ಡ್ಗಳನ್ನು ಹಾಕಿ ಬಂದ್ಗೆ ಬೆಂಬಲ ವ್ಯಕ್ತಪಡಿಸಿದರು. ಅಲ್ಲದೆ, ತಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ರ್ಯಾಲಿಯನ್ನೂ ನಡೆಸಿದರು.
ಇಸ್ಮಾಯಿಲ್ ತಮಟಗಾರ ಧಾರವಾಡ ಘಟಕದ ಅಧ್ಯಕ್ಷ ಅಂಜುಮಾನ್-ಎ-ಇಸ್ಲಾಂ ಮಾತನಾಡಿ, ಜಾತಿ, ಮತ, ಧರ್ಮದ ಭೇದವಿಲ್ಲದೆ ಯಾವುದೇ ರೀತಿಯ ಅಮಾನವೀಯ ಘಟನೆಗಳನ್ನು ಸಮುದಾಯವು ಸಹಿಸುವುದಿಲ್ಲ ಎಂದು ಹೇಳಿದರು.
ಮನುಷ್ಯರಾದ ನಾವು ಇಂತಹ ಕೃತ್ಯಗಳ ಬಗ್ಗೆ ನಾಚಿಕೆಪಡಬೇಕು. ಜವಾಬ್ದಾರಿಯುತ ನಾಗರಿಕರಾದ ನಾವು ಇಂತಹ ಅಪರಾಧಗಳನ್ನು ವಿರೋಧಿಸಬೇಕು. ಒಗ್ಗೂಡಲು ಇದು ಸಕಾಲವಾಗಿದೆ ಎಂದು ವ್ಯಾಪಾರಸ್ಥರೊಬ್ಬರು ಹೇಳಿದ್ದಾರೆ.
Advertisement