ಮೊದಲ ಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ನಾಳೆ ಚುನಾವಣೆ ನಡೆಯಲಿದ್ದು, ಮತದಾನಕ್ಕೆ ಚುನಾವಣಾ ಆಯೋಗ ಸಂಪೂರ್ಣ ಸಿದ್ಧತೆ ನಡೆಸಿದೆ. ಒಟ್ಟು 30,602 ಮತಗಟ್ಟೆ ಸ್ಥಾಪಿಸಲಾಗಿದ್ದು, 1.40 ಲಕ್ಷ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. 2 ಕೋಟಿ 88 ಲಕ್ಷ ಮತದಾರರು ಮತದಾನ ಮಾಡಲಿದ್ದಾರೆ. 14 ಕ್ಷೇತ್ರಗಳಲ್ಲಿ 247 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣಾ ಸಿದ್ಧತೆ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯದ ಮುಖ್ಯ ಚುನಾವಣಾಧಿಕಾರಿ ಮನೋಜ್ಕುಮಾರ್ ಮೀನಾ, ಚುನಾವಣೆ ಆ್ಯಪ್ ಬಿಡುಗಡೆ ಮಾಡಿದರು.
ಆ್ಯಪ್ ಪ್ಲೇಸ್ಟೋರ್ನಲ್ಲಿ ಲಭ್ಯವಿದ್ದು, ನಾಗರಿಕರು ತಮ್ಮ ಮತಗಟ್ಟೆಗಳನ್ನು ಹುಡುಕಲು ಇದನ್ನು ಡೌನ್ಲೋಡ್ ಮಾಡಬಹುದಾಗಿದೆ. ಮತದಾರರಿಗೆ ತಮ್ಮ ಬೂತ್ನಲ್ಲಿರುವ ಸರದಿಯ ಸ್ಥಿತಿಯನ್ನು ತಿಳಿಸುತ್ತದೆ ಮತ್ತು ಅವರಿಗೆ ಪಾರ್ಕಿಂಗ್ ಸ್ಥಳಗಳನ್ನೂ ತೋರಿಸುತ್ತದೆ. 19,701 ಬೂತ್ಗಳಲ್ಲಿ ವೆಬ್ಕಾಸ್ಟಿಂಗ್ ನಡೆಯಲಿದ್ದು, 1,370 ಬೂತ್ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಎಡಗೈ ತೋರುಬೆರಳಿಗೆ ಶಾಯಿ ಹಾಕಲಾಗುವುದು. ಬೂತ್ಗಳು ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ತೆರೆದಿರುತ್ತವೆ ಎಂದು ಮನೋಜ್ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ. QR ಕೋಡ್ಗಳೊಂದಿಗೆ ಶೇ.90 ಕ್ಕಿಂತ ಹೆಚ್ಚು ವೋಟರ್ ಸ್ಲಿಪ್ಗಳನ್ನು ಮತದಾರರಿಗೆ ವಿತರಿಸಲಾಗಿದೆ. ಮತದಾರರು ಒಮ್ಮೆ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಅದು ಮತದಾರ ತನ್ನ ಬೂತ್ಗೆ ನ್ಯಾವಿಗೇಟ್ ಮಾಡಲು ಸಹಾಯ ಮಾಡುತ್ತದೆ. ಅಲ್ಲದೆ, ಮತದಾನಕ್ಕೆ ಊರುಗಳಿಗೆ ತೆರಳುವವರಿಗೆ ಅನುಕೂಲವಾಗಲು ಬೆಂಗಳೂರು-ಮಂಗಳೂರು ನಡುವೆ ರೈಲ್ವೆ ಇಲಾಖೆ ವಿಶೇಷ ರೈಲುಗಳ ವ್ಯವಸ್ಥೆ ಮಾಡಿದೆ.
ಭಾರತೀಯ ಹವಾಮಾನ ಇಲಾಖೆ ಇಂದಿನಿಂದ 5 ದಿನಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ಹೀಟ್ ವೇವ್ ಎಚ್ಚರಿಕೆ ನೀಡಿದೆ. ಜನರು ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ಹೊರಗೆ ಹೋಗುವುದನ್ನು ತಪ್ಪಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ. ಹವಾಮಾನ ಇಲಾಖೆಯು ಕರ್ನಾಟಕಕ್ಕೆ ಆರೆಂಜ್ ಅಲರ್ಟ್ ಘೋಷಿಸಿದೆ. ಶಾಖ-ಸಂಬಂಧಿತ ಅನಾರೋಗ್ಯದ ಸಾಧ್ಯತೆ ಹೆಚ್ಚಾಗುತ್ತದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ. 5 ದಿನಗಳಲ್ಲಿ ರಾಜ್ಯಾದ್ಯಂತ ಗರಿಷ್ಠ ತಾಪಮಾನ ಈಗಿರುವುದರಿಕ್ಕಿಂತಲೂ 2-3 ಡಿಗ್ರಿ ಸೆಲ್ಸಿಯಸ್ ಏರಿಕೆಯಾಗಲಿದೆ.
ರೈಲಿಗೆ ಸಿಲುಕಿ 25 ವರ್ಷದ ಮೂವರು ಯುವಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ವರದಿಯಾಗಿದೆ. ಸಾವನ್ನಪ್ಪಿರುವ ಯುವಕರನ್ನು ಆಂಧ್ರಪ್ರದೇಶದ ಮೂಲದ ಚಿತ್ತೂರಿನ ಮೂಲದವರು ಎಂದು ಶಂಕಿಸಲಾಗಿದೆ. ಓರ್ವನ ಗುರುತು ಪತ್ತೆಯಾಗಿಲ್ಲ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ಬೈಯಪ್ಪನಹಳ್ಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಬಡಗುತಿಟ್ಟು ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇಂದು ನಿಧನರಾದರು. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಸುಬ್ರಹ್ಮಣ್ಯ ಧಾರೇಶ್ವರ ಬೆಂಗಳೂರಿನ ತಮ್ಮ ಪುತ್ರನ ಮನೆಯಲ್ಲಿದ್ದರು. 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಅವರು ಪೆರ್ಡೂರು, ಅಮೃತೇಶ್ವರಿ ಮೇಳ, ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳಗಳಲ್ಲಿ ಪ್ರಧಾನ ಭಾಗವತರಾಗಿ ಖ್ಯಾತಿ ಪಡೆದಿದ್ದರು. ಸುಬ್ರಹ್ಮಣ್ಯ ಧಾರೇಶ್ವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಆಟೋ ಚಾಲಕರು ತಮ್ಮ ರೈಡ್-ಹೇಲಿಂಗ್ ಅಕೌಂಟ್ ನಲ್ಲಿ ಬೇರೆ ಬೇರೆ ನೋಂದಣಿ ಸಂಖ್ಯೆ ಬಳಸದಂತೆ ಸಾರಿಗೆ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಓಲಾ ಮತ್ತು ಉಬರ್ನಂತಹ ಪ್ರಯಾಣ-ಬುಕಿಂಗ್ ಅಪ್ಲಿಕೇಶನ್ ಗಳೊಂದಿಗೆ ಜೋಡಣೆಯಾಗಿರುವ ಆಟೊರಿಕ್ಷಾ ಚಾಲಕರು ತಮ್ಮ ಆಟೋಗಳಲ್ಲಿ ಹೆಚ್ಚುವರಿ ನೋಂದಣಿ ನಂಬರ್ ಪ್ಲೇಟ್ಗಳನ್ನು ಪೇಪರ್ನಲ್ಲಿ ಮುದ್ರಿಸಿ ಪ್ರದರ್ಶಿಸುವುದನ್ನು ಗಮನಿಸಿರುತ್ತೇವೆ. ರೈಡ್-ಹೇಲಿಂಗ್ ಅಪ್ಲಿಕೇಶನ್ಗಳು ವಾಹನದ ನೋಂದಣಿ ಸಂಖ್ಯೆ ಮತ್ತು ಬುಕ್ ಮಾಡಿದ ಸಂಖ್ಯೆ ಹೊಂದಾಣಿಕೆಯಾಗದಿದ್ದಲ್ಲಿ, ಸುರಕ್ಷತೆಯ ದೃಷ್ಟಿಯಿಂದ ಪ್ರಯಾಣಿಕರು ಅಂತಹ ವಾಹನಗಳಲ್ಲಿ ಪ್ರಯಾಣಿಸಬಾರದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
Advertisement