ಕೇಂದ್ರದಿಂದ ಬರ ಪರಿಹಾರವಾಗಿ 3,454 ಕೋಟಿ ರೂ. ಬಿಡುಗಡೆ. ರಾಜ್ಯದ 14 ಕ್ಷೇತ್ರಗಳಲ್ಲಿ ದಾಖಲೆ 69.56ರಷ್ಟು ಮತದಾನ!- ಇವು ಇಂದಿನ ಸುದ್ದಿ ಮುಖ್ಯಾಂಶಗಳು 27-04-24

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

1. ಕೇಂದ್ರದಿಂದ ಬರ ಪರಿಹಾರವಾಗಿ 3,454 ಕೋಟಿ ರೂ. ಬಿಡುಗಡೆ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯವಾದ ಬೆನ್ನಲ್ಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಕರ್ನಾಟಕದಲ್ಲಿ ಕಳೆದ ವರ್ಷ ಮುಂಗಾರು ಮಳೆ ಕೈಕೊಟ್ಟು ತೀವ್ರ ಬರಗಾಲ ಉಂಟಾಗಿ ರೈತರು ಸಂಕಷ್ಟ ಅನುಭವಿಸಿದ್ದರು. ಇನ್ನು ಕೇಂದ್ರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆಯಾಗಿಲ್ಲ ಎಂದು ರಾಜ್ಯಸರ್ಕಾರ ಸುಪ್ರೀಂಕೋರ್ಟ್‌ನ ಮೊರೆ ಹೋಗಿತ್ತು. ಸುಪ್ರೀಂಕೋರ್ಟ್‌ನಲ್ಲಿ ಕೇಂದ್ರ ಸರ್ಕಾರ ಏಪ್ರಿಲ್ 26ರಂದು ಸೋಮವಾರದ ಒಳಗೆ ಚುನಾವಣಾ ಆಯೋಗದ ಅನುಮತಿ ಪಡೆದು ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಅದರಂತೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ಇಂದು 3,454 ಕೋಟಿ ರೂ. ಬರ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದೆ. ಕೇಂದ್ರ ಸರ್ಕಾರ ಬರ ಪರಿಹಾರವಾಗಿ ಬಿಡುಗಡೆ ಮಾಡಿರುವ ಮೊತ್ತ ಕಡಿಮೆಯಾಗಿದೆ. ನಾವು 18, 172 ಕೋಟಿ ರೂಪಾಯಿ ಕೇಳಿದ್ದೇವು. ಆದರೆ ಕೇಂದ್ರ 3,454 ಕೋಟಿ ರೂಪಾಯಿ ಮಾತ್ರ ಬಿಡುಗಡೆ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

2. ರಾಜ್ಯದ 14 ಕ್ಷೇತ್ರಗಳಲ್ಲಿ ದಾಖಲೆ 69.56ರಷ್ಟು ಮತದಾನ

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನದ ಅಂಕಿಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದ್ದು, ರಾಜ್ಯದಲ್ಲಿ ಒಟ್ಟಾರೆ ಶೇ.69.56ರಷ್ಟು ಮತದಾನವಾಗಿದೆ. ನಿನ್ನೆ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು. ಕೆಲ ಕ್ಷೇತ್ರಗಳಲ್ಲಿ ತಾಂತ್ರಿಕ ದೋಷ ಮತ್ತು ಮತದಾನ ಬಹಿಷ್ಕಾರದಂತಹ ಘಟನೆಗಳ ನಡುವೆ ಅಧಿಕಾರಿಗಳು ಸಂಧಾನ ಮಾಡಿ ಮತದಾನದ ಅವಧಿ ಮುಕ್ತಾಯದ ಬಳಿಕ ಮತದಾನ ಮಾಡಿಸುವಲ್ಲಿ ಸಫಲರಾಗಿದ್ದರು. ಹಲವು ಮತಗಟ್ಟೆಗಳಲ್ಲಿ ಸಂಜೆ 7 ಗಂಟೆ ನಂತರವೂ ಮತದಾನ ನಡೆದಿತ್ತು. ಹೀಗಾಗಿ ಒಟ್ಟಾರೆ ಅಂಕಿ ಅಂಶಗಳನ್ನು ಇಂದು ಬಿಡುಗಡೆ ಮಾಡಿದೆ. ಮಂಡ್ಯ ಗರಿಷ್ಠ ಅಂದರೆ ಶೇ.81.67ರಷ್ಟು ಮತದಾನವಾಗಿದ್ದು, ಬೆಂಗಳೂರು ದಕ್ಷಿಣದಲ್ಲಿ ಕನಿಷ್ಠ ಅಂದರೆ ಶೇ.53.17ರಷ್ಟು ಮತದಾನವಾಗಿದೆ ಎಂದು ಚುನವಾವಣಾ ಆಯೋಗ ಮಾಹಿತಿ ನೀಡಿದೆ. ಇನ್ನು ಚಾಮರಾಜನಗರ ಕ್ಷೇತ್ರದ ಹನೂರು ಗ್ರಾಮಸ್ಥರು ನಿನ್ನೆ ಮತದಾನ ಬಹಿಷ್ಕರಿಸಿದ್ದರು. ಹೀಗಾಗಿ ಏಪ್ರಿಲ್ 29ರಂದು ಹನೂರ ಮತಗಟ್ಟೆ ಸಂಖ್ಯೆ 146ರಲ್ಲಿ ಮರು ಮತದಾನ ನಡೆಯಲಿದೆ.

3. ಕಲಬುರಗಿಯಲ್ಲಿ ಐಟಿ ದಾಳಿ 2 ಕೋಟಿ ನಗದು ವಶ

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ಹಲವಡೆ ಐಟಿ ಇಲಾಖೆ ಅಧಿಕಾರಿಗಳ ದಾಳಿ ಮುಂದುವರಿದಿದ್ದು ಶನಿವಾರ ಕಲಬುರಗಿಯ ರೈಲು ನಿಲ್ದಾಣದ ಬಳಿ ದಾಳಿ ನಡೆಸಿದ ಅಧಿಕಾರಿಗಳು ಎರಡು ಕೋಟಿ ರೂಪಾಯಿ ನಗದು ಜಪ್ತಿ ಮಾಡಿದ್ದಾರೆ. ವ್ಯಕ್ತಿಯೊರ್ವ ರೈಲಿನಿಂದ ಇಳಿದು ಕಾರಿನಲ್ಲಿ ಹೊರಡುವ ಸಂದರ್ಭದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ ಎರಡು ಕೋಟಿ ರೂಪಾಯಿ ನಗದು ಪತ್ತೆಯಾಗಿದೆ. ಸದ್ಯ ನಗದು ಮತ್ತು ಕಾರನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಾಂಗ್ರೆಸ್ ಪಕ್ಷದ ಮಾಜಿ ಮೇಯರ್ ಒಬ್ಬರಿಗೆ ಸೇರಿದ ಕಾರು ಇದು ಎಂದು ಹೇಳಲಾಗಿದೆ. ಕಲಬುರಗಿ ಸೇರಿದಂತೆ ಉತ್ತರ ಕರ್ನಾಟಕ ವ್ಯಾಪ್ತಿಯ 14 ಲೋಕಸಭಾ ಕ್ಷೇತ್ರಗಳಿಗೆ ಮೇ 7ರಂದು ಮತದಾನ ನಡೆಯಲಿದ್ದು ಹೀಗಾಗಿ ಇಂದು ನಡೆದಿರುವ ಐಟಿ ದಾಳಿ ಮಹತ್ವದ್ದಾಗಿದೆ.

4. ಕಲಬುರಗಿಯಲ್ಲಿ ಅಪಘಾತ: ಬೈಕ್ ಸವಾರ ಸಾವು

ಕಲಬುರಗಿಯಲ್ಲಿ ಇಂದು ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಲಾರಿ- ಬೈಕ್‌ ಢಿಕ್ಕಿಯಾಗಿ ಓರ್ವ ವ್ಯಕ್ತಿಯೋರ್ವ ಸಾವನ್ನಪ್ಪಿದ್ದಾನೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಢೋಗಿ ನಾಲಾ ಬಳಿ‌ ಈ ಅಪಘಾತ ಸಂಭವಿಸಿದ್ದು, ಬೈಕ್ ಸವಾರ ಅರ್ಜುನ್ ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅವರ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. ಎರಡು ಕುಟುಂಬಗಳ ನಡುವಿನ ಜಗಳದಲ್ಲಿ 3 ವರ್ಷದ ಮಗು ಶ್ರೀನಿಧಿ ಕಾಡಪ್ಪ ಬಲಿಯಾಗಿದೆ. ಹಣಕಾಸು ವಿಚಾರವಾಗಿ ನಡೆಯುತ್ತಿದ್ದ ಜಗಳದ ವೇಳೆ ಜೋತಿಭಾ ತುಕಾರಾಮ ಎಂಬಾತ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎಂದು ಮೃತ ಕುಟುಂಬಸ್ಥರು ಆರೋಪಿಸಿದ್ದಾರೆ.

5. ಬಿಜಿ ಉದಯ್ ಗರುಡಾಚಾರ್ ವಿರುದ್ಧದ ಪ್ರಕರಣ ರದ್ದು

ಸುಳ್ಳು ಚುನಾವಣಾ ಅಫಿಡವಿಟ್‌ ಸಲ್ಲಿಸಿದ ಆರೋಪದ ಮೇಲೆ ಚಿಕ್ಕಪೇಟೆ ಶಾಸಕ ಬಿಜಿ ಉದಯ್‌ ಗರುಡಾಚಾರ್‌ಗೆ ಎರಡು ತಿಂಗಳು ಸಾಧಾರಣಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿ ವಿಚಾರಣಾಧೀನ ನ್ಯಾಯಾಲಯ ಮಾಡಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ವಿಚಾರಣಾಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಉದಯ್‌ ಗರುಡಾಚಾರ್‌ ಸಲ್ಲಿಸಿದ್ದ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ. 2018ರ ವಿಧಾನಸಭೆ ಚುನಾವಣೆ ವೇಳೆ ಉದಯ್ ಗುರುಡಾಚಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ತಮ್ಮ ವಿರುದ್ಧದ ಕ್ರಿಮಿನಲ್‌ ಪ್ರಕರಣ ಹಾಗೂ ಪತ್ನಿಯ ಬ್ಯಾಂಕ್‌ ವಿವರಗಳನ್ನು ಬಹಿರಂಗ ಪಡಿಸಿಲ್ಲ ಎಂದು ಆರೋಪಿಸಿ ಎಚ್‌ ಜಿ ಪ್ರಶಾಂತ್‌ ಎಂಬುವರು ಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com