ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ: ದೇವರಾಜೇಗೌಡ ಪತ್ರದೊಂದಿಗೆ ಅಮಿತ್ ಶಾ ಗೆ ಕಾಂಗ್ರೆಸ್ ಸರಣಿ ಪ್ರಶ್ನೆ!

ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಇದುವರೆಗೆ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಸರಣಿ ಪ್ರಶ್ನೆ ಕೇಳಿದೆ.
ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ: ದೇವರಾಜೇಗೌಡ ಪತ್ರದೊಂದಿಗೆ ಅಮಿತ್ ಶಾ ಗೆ ಕಾಂಗ್ರೆಸ್ ಸರಣಿ ಪ್ರಶ್ನೆ!
Updated on

ಬೆಂಗಳೂರು: ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಇದುವರೆಗೆ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಂಗ್ರೆಸ್ ಸರಣಿ ಪ್ರಶ್ನೆ ಕೇಳಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಧಾನಸಭಾ ಚುನಾವಣೆಯ ಬಿಜೆಪಿ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಅವರ ಪತ್ರವನ್ನು ಹಂಚಿಕೊಂಡಿರುವ ಕಾಂಗ್ರೆಸ್, 2023ರ ಡಿಸೆಂಬರ್ 8ನೇ ತಾರೀಖಿನಂದು ದೇವರಾಜೇಗೌಡ ನಿಮಗೆ ಪ್ರಜ್ವಲ್ ರೇವಣ್ಣನ ಕರ್ಮಕಾಂಡದ ಪೂರ್ಣ ವಿವರಗಳೊಂದಿಗೆ ಪತ್ರ ಬರೆದಿದ್ದರು ಏಕೆ ಗಣನೆಗೆ ತೆಗೆದುಕೊಳ್ಳಲಿಲ್ಲ? ದೇಶದ ಗೃಹ ಮಂತ್ರಿಯಾಗಿ ಇಂತಹದ್ದೊಂದು ಪ್ರಕರಣ ಗಮನಕ್ಕೆ ಬರುತ್ತಲೇ ಕಾನೂನು ಕ್ರಮಕ್ಕೆ ಮುಂದಾಗಬೇಕಿತ್ತು, ದೇಶದ ಮಹಿಳೆಯರ ಮಾನ ಉಳಿಸುವ ಕೆಲಸ ಮಾಡಬೇಕಿತ್ತು, ಆದರೆ ನೀವು ಮಾಡಲಿಲ್ಲ ಏಕೆ? ನಾರಿ ಶಕ್ತಿ, ಮಾತೃಶಕ್ತಿ ಎಂದು ಪುಂಗುವ ತಮಗೆ ದೇವರಾಜೇಗೌಡರು ಪತ್ರ ಬರೆದಾಗ ಈ ನಾರೀಶಕ್ತಿಯ ಬಗ್ಗೆ ಕಾಳಜಿ, ಕನಿಕರ ಬರಲಿಲ್ಲವೇಕೆ? ಎಂದು ಪ್ರಶ್ನಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಪೆನ್ ಡ್ರೈವ್ ಮೊದಲು ತಲುಪಿದ್ದೇ ಬಿಜೆಪಿಗೆ, ಬಿಜೆಪಿಯ ದೇವರಾಜೇಗೌಡರ ಕೈಗೆ, ಹೀಗಿದ್ದೂ ಬಿಜೆಪಿ ಏಕೆ ಮಹಿಳೆಯರ ಮಾನ ಕಾಪಾಡಲು ದೂರು ನೀಡಲಿಲ್ಲ? ರಾಜ್ಯಾಧ್ಯಕ್ಷ ವಿಜಯೇಂದ್ರರಿಗೂ ಈ ವಿಷಯ ಮೊದಲೇ ತಿಳಿದಿದ್ದರೂ ಏಕೆ ಪೊಲೀಸ್ ದೂರು ನೀಡಿ ನಾರೀಶಕ್ತಿಯ ಘನತೆ ಕಾಪಾಡುವ ಕೆಲಸ ಮಾಡಲಿಲ್ಲ? ಎಂದು ಪ್ರಶ್ನೆಗಳ ಸರಮಾಲೆಯನ್ನೆ ಮುಂದಿಟ್ಟಿದೆ.

ಅಮಿತ್ ಶಾ ಅವರೇ, ಪ್ರಜ್ವಲ್ ರೇವಣ್ಣನನ್ನು ಮೋದಿ ಪರಿವಾರಕ್ಕೆ" ಸೇರಿಸಿಕೊಂಡು ಈಗ ಜುಮ್ಲಾ ನಾಟಕ ಆಡುತ್ತಿರುವ ತಾವು "ಕಾಂಗ್ರೆಸ್ ಸರ್ಕಾರವಿದೆ, ಕಾಂಗ್ರೆಸ್ ಕ್ರಮ ಕೈಗೊಳ್ಳಬೇಕು" ಎಂದು ಮೈಗೆ ಎಣ್ಣೆ ಹಚ್ಚಿಕೊಂಡು ಮಾತಾಡಿದ್ದೀರಿ, ಹಾಗೂ ಕಾಂಗ್ರೆಸ್ ಮೇಲೆ ಆರೋಪಿಸಲು ಯತ್ನಿಸಿದ್ದೀರಿ. ನಿಮಗೆ ತಿಳಿದಿರಲಿ, ಪ್ರಜ್ವಲ್ ರೇವಣ್ಣನ ಕುಕೃತ್ಯದ ಬಗ್ಗೆ ಸಂತ್ರಸ್ತರ ದೂರು ಬಂದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಸರ್ಕಾರ SIT ರಚನೆ ಮಾಡಿ ತನಿಖೆಗೆ ಮುಂದಾಗಿದೆ. ಮೂವರು ದಕ್ಷ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ಪ್ರಕರಣದ ಪಾರದರ್ಶಕ ತನಿಖೆಗೆ ವ್ಯವಸ್ಥೆ ಮಾಡಿದೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದೆ.

ಬಿಜೆಪಿಯ ದೇವರಾಜೇಗೌಡರನ್ನು ಬಿಟ್ಟರೆ ಬೇರೆ ಯಾರಿಗೂ ಪೆನ್ ಡ್ರೈವ್ ಕೊಟ್ಟಿಲ್ಲ ಎಂದು ಪ್ರಜ್ವಲ್ ರೇವಣ್ಣನ ಮಾಜಿ ಕಾರು ಚಾಲಕ ಹೇಳಿದ್ದಾರೆ. ಇಂತಹ ಗಂಭೀರ ವಿಷಯ ಸಾಕ್ಷಿ ಸಮೇತ ತಿಳಿದರೂ ರಾಜ್ಯ ಬಿಜೆಪಿ

ಸುಮ್ಮನೆ ಕುಳಿತಿದ್ದೇಕೆ? ದೂರು ದಾಖಲಿಸಿ ಮಹಿಳೆಯರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಲಿಲ್ಲ ಏಕೆ? 2023ರಲ್ಲೇ ಇವೆಲ್ಲಾ ವಿಷಯಗಳು ತಿಳಿದ ನಂತರವೂ ಮೈತ್ರಿ ಮಾಡಿಕೊಂಡಿದ್ದೇಕೆ? ಮೋದಿ ಪರಿವಾರದ ಸದಸ್ಯನನ್ನಾಗಿ ಮಾಡಿಕೊಂಡಿದ್ದೇಕೆ?

ಪ್ರಧಾನಿ ತಮ್ಮ ಕಚೇರಿಗೆ ಕರೆಸಿಕೊಂಡು ಬೆನ್ನು ತಟ್ಟಿದ್ದೇಕೆ? ಪೆನ್ ಡ್ರೈವ್ ಸಂಗತಿಯ ಬಗ್ಗೆ ದೇವರಾಜೇಗೌಡ ಹಲವು ಬಾರಿ ಬಾಯಿ ಬಡಿದುಕೊಂಡರೂ ಸಹ ನಿರ್ಲಕ್ಷಿಸಿ ಪ್ರಜ್ವಲ್ ಪರ ಇಡೀ ಬಿಜೆಪಿ ಪ್ರಚಾರ ಮಾಡಿದ್ದೇಕೆ? ಎಂದು ಸರಣಿ ಪ್ರಶ್ನೆಗಳ ಮೂಲಕ ತರಾಟೆಗೆ ತೆಗೆದುಕೊಂಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com