ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ, ಯಾವುದೇ ತೊಂದರೆಯಾದರೆ ಪೊಲೀಸ್ ಇಲಾಖೆ-ಕಾಂಗ್ರೆಸ್ ಕಾರಣ: ಸಿಟಿ ರವಿ

ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು 3 ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ.
ಸಿಟಿ.ರವಿ
ಸಿಟಿ.ರವಿ
Updated on

ಬೆಂಗಳೂರು: ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಬಿಜೆಪಿ ನಾಯಕ ಸಿಟಿ ರವಿಯವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ಅವರು, ಪೊಲೀಸ್ ಕಸ್ಟಡಿಯಲ್ಲಿ ತಲೆಗೆ ಆದ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು 3 ಗಂಟೆ ತೆಗೆದುಕೊಂಡ ಕರ್ನಾಟಕ ಪೊಲೀಸರು. ಈಗ ಕಳೆದ ಐದಾರು ಗಂಟೆಗಳಿಂದ ಪೊಲೀಸ್ ವಾಹನದಲ್ಲಿ ಕೂರಿಸಿಕೊಂಡು ಸುತ್ತಾಡಿಸುತಿದ್ದಾರೆ. ನಿರ್ಜನ ಪ್ರದೇಶದಲ್ಲಿ ವಾಹನ ನಿಲ್ಲಿಸಿ, ಫೋನ್ ನಲ್ಲಿ ಮಾತುಕತೆ ನಡೆಸುತ್ತಾ ಏನೋ ಷಡ್ಯಂತ್ರ ಮಾಡುತ್ತಿದ್ದಾರೆ. ನನಗಾಗುವ ಯಾವುದೇ ತೊಂದರೆಗೆ ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹೇಳಿದ್ದಾರೆ.

ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ವಾಗ್ದಾಳಿ ನಡೆಸಿರುವ ಅವರು, ಯಾವುದೇ ಪರಿಶೀಲನೆ ನಡೆಸದೆ, ತಾನು ಕಾನೂನು ತಜ್ಞ ಎಂದು ಕರೆಸಿಕೊಳ್ಳುವ ಸನ್ಮಾನ್ಯ ಮುಖ್ಯಮಂತ್ರಿಗಳೇ, ತಾವು ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಹಾಗು ರಾಜಕೀಯ ತೇಜೋವಧೆ ನಡೆಸುವುದು ನಿಮಗೂ, ನೀವಿರುವ ಸ್ಥಾನಕ್ಕೂ ಗೌರವ ತರುವಂತದ್ದಲ್ಲ. ವಿಧಾನ ಸಭೆ, ವಿಧಾನ ಪರಿಷತ್ತಿನಲ್ಲಿ ಪ್ರತಿಯೊಂದು ಸಂಗತಿಗಳ ಆಡಿಯೋ ಹಾಗು ವಿಡಿಯೋ ದಾಖಾಲಾತಿ ಇರುತ್ತದೆ. ಅದ್ಯಾವುದನ್ನೂ ನೋಡದೆ ನನ್ನ ಬಗ್ಗೆ ಸುಳ್ಳು ಆಪಾದನೆ ಮಾಡುತ್ತಿರುವುದು ನಿಮಗೆ ಶೋಭೆಯೇ?

ಸಿಟಿ.ರವಿ
ಬಿಜೆಪಿ MLC ಸಿಟಿ ರವಿ ಬಂಧನ: ಆಶ್ಲೀಲ ಪದ ಬಳಸಿಲ್ಲ, ಪೊಲೀಸರ ಮುಂದೆ ಹೇಳಿಕೆ

ಕಾಂಗ್ರೇಸ್, ಪಾರ್ಲಿಮೆಂಟಿನಲ್ಲಿ ಕೇಂದ್ರ ಸಚಿವ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಯನ್ನು ತಿರುಚಿ ಗೊಂದಲ ಎಬ್ಬಿಸಿದಂತೆ ಇಲ್ಲೂ ಕೂಡ ನಾನು ಹೇಳಿರದ ಮಾತನ್ನು ನನ್ನದು ಎನ್ನುವಂತೆ ಬಿಂಬಿಸುವ ನಿಮ್ಮ ಪ್ರಯತ್ನ ನಾಚಿಗೆಗೇಡು ಹಾಗೂ ನೀವು ಕುಳಿತಿರುವ ಸ್ಥಾನಕ್ಕೆ ನೀವು ಮಾಡುತ್ತಿರುವ ಅವಮಾನ ಮುಖ್ಯಮಂತ್ರಿಗಳೇ ಎಂದು ತಿಳಿಸಿದ್ದಾರೆ.

ಕರ್ನಾಟಕದ ಕಾನೂನು ಸುವ್ಯವಸ್ಥೆಯನ್ನು ರೌಡಿ ಎಲಿಮೆಂಟ್ ಗಳ ಕೈಗೆ ಕೊಟ್ಟು ಗೂಂಡಾ ರಾಜ್ಯವನ್ನಾಗಿ ಮಾಡಿದ್ದೀರಿ. ನ್ಯಾಯಯುತ ಹೋರಾಟ ಮಾಡುತ್ತಿದ್ದ ಪಂಚಮಶಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡಲಾಯಿತು. ಬೆಳಗಾವಿಯ ಸುವರ್ಣ ಸೌಧದ ಒಳಗೆ ನಿಮ್ಮ ಪಕ್ಷದ ಗೂಂಡಾಗಳನ್ನು ಬಿಟ್ಟು ನನ್ನ ಮೇಲೆ ಹಲ್ಲೆ ನಡೆಸಲು ಪ್ರಯತ್ನ ನಡೆಸಿದಿರಿ. ಒಬ್ಬ ಜನ ಪ್ರತಿನಿಧಿಗೆ ರಕ್ಷಣೆ ಕೊಡಲಾಗದ ನಿಮ್ಮ ಸರ್ಕಾರ ಇನ್ನು ಜನ ಸಾಮಾನ್ಯರನ್ನು ಹೇಗೆ ಕಾಪಾಡಿತು?

ಸುವರ್ಣ ಸೌಧದ ಹೊರಗಡೆ ಶಾಂತಿಯುತ ಹಾಗು ನ್ಯಾಯಯುತ ಹೋರಾಟ ಮಾಡುವವರಿಗೆ ಲಾಠಿಯೇಟು, ರೌಡಿಗಳಿಗೆ ಸುವರ್ಣ ಸೌಧದ ಒಳಗೆ ಪ್ರವೇಶ, ಅಬ್ಬಾ ನಿಮ್ಮ ಸದಾಡಳಿತದ ಲಕ್ಷಣವೇ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ? ಎಂದು ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ತಿನ ಕಲಾಪ ಅನಿರ್ಧಿಷ್ಠಾವಧಿಗೆ ಮುಂದೂಡಿದ ಬಳಿಕ ಕಾಂಗ್ರೆಸ್ ಸರ್ಕಾರದ "ಗೌರವಾನ್ವಿತ ಮಂತ್ರಿಗಳು ಕಾಂಗ್ರೆಸ್ಸಿನ ಶಾಸಕರು ನಡೆಸಿದ ದಾಂಧಲೆಗೆ ವಿಡಿಯೋ - ಆಡಿಯೋ ಸಾಕ್ಷಿ ಇದೆ. ಸರ್ಕಾರದ ಸಚಿವರು ಸುವರ್ಣಸೌಧದಲ್ಲಿ ನಡೆಸಿದ ಗೂಂಡಾ ವರ್ತನೆಗೆ ಸಾಕ್ಷ್ಯಾಧಾರವಿದೆ ಅವರ ಮೇಲೆ ಏನು ಕ್ರಮ ಕೈಗೊಳ್ಳುತ್ತಿರಿ ಸನ್ಮಾನ್ಯ "ನ್ಯಾಯನೀತಿಪರ" ಮುಖ್ಯಮಂತ್ರಿಗಳೇ? ಸಾಕ್ಷ್ಯಾಧಾರಗಳಿಲ್ಲದ ಸುಳ್ಳುಸುದ್ದಿ ಹಬ್ಬಿಸುವ, ಅಪಪ್ರಚಾರ ಮಾಡುವ ಕೆಲಸ ಮಾಡುವ ಬದಲಾಗಿ ಕ್ಯಾಮರಾದಲ್ಲಿ ದಾಖಲಾಗಿರುವ ಆಧಾರ ಗಮನಿಸಿ ಮಂತ್ರಿಗಳ ಮೇಲೆ ಕ್ರಮ ಕೈಗೊಳ್ಳಿ ಮುಖ್ಯಮಂತ್ರಿಗಳೇ.. ಎಂದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com