ಸಾಮಾಜಿಕ ಪರಿವರ್ತನೆ?: ಮೈಸೂರು ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹ ಪ್ರಮಾಣ ಹೆಚ್ಚಳ!

ಸಮಾಜದಲ್ಲಿ ಜಾತಿ ತಾರತಮ್ಯ ಇನ್ನೂ ಉಸಿರಾಡುತ್ತಿದ್ದರೂ ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿರುವುದು ಸಾಮಾಜಿಕ ಪಿಡುಗು ನಿರ್ಮೂಲನೆಗೆ ದಾರಿ ದೀಪವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮೈಸೂರು: ಸಮಾಜದಲ್ಲಿ ಜಾತಿ ತಾರತಮ್ಯ ಇನ್ನೂ ಉಸಿರಾಡುತ್ತಿದ್ದರೂ ಅಂತರ್ಜಾತಿ ವಿವಾಹಗಳು ಹೆಚ್ಚುತ್ತಿರುವುದು ಸಾಮಾಜಿಕ ಪಿಡುಗು ನಿರ್ಮೂಲನೆಗೆ ದಾರಿ ದೀಪವಾಗಿದೆ. ಅಂತರ್ಜಾತಿ ವಿವಾಹಗಳಲ್ಲಿ ಬೆಂಗಳೂರಿನ ನಂತರ ಸಾಂಸ್ಕೃತಿಕ ರಾಜಧಾನಿ ಮೈಸೂರು ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಹಿಂದೆ ನಿಷಿದ್ಧವೆಂದು ಪರಿಗಣಿಸಲಾಗಿದ್ದ ಅಂತರ್ಜಾತಿ ವಿವಾಹಗಳು ಈಗ ಸಮಾಜದಲ್ಲಿ ಸ್ವೀಕಾರಾರ್ಹವಾಗುತ್ತಿವೆ.

ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸುವ ದಂಪತಿಗಳ ಕುರಿತು ಸಮಾಜ ಕಲ್ಯಾಣ ಇಲಾಖೆಯ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಅಂತರ್ಜಾತೀಯ ವಿವಾಹಗಳ ಸಂಖ್ಯೆ ಹೆಚ್ಚುತ್ತಿದೆ. 2023-24 ರಲ್ಲಿ, ಮೈಸೂರು ಜಿಲ್ಲೆ 242 ಅಂತರ್ಜಾತಿ ವಿವಾಹಗಳಾಗಿದ್ದು 2ನೇ ಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ 720 ಜೋಡಿ ಅಂತರ್ಜಾತೀಯ ವಿವಾಹ ನಡೆದಿದೆ. 2022-23ರಲ್ಲಿ ಮೈಸೂರಿನಲ್ಲಿ 253 ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದವು. ಅದಾದ ನಂತರ ಸಂಖ್ಯೆಯಲ್ಲಿ ಸ್ವಲ್ಪ ಏರಿಳಿತಗಳು ಕಂಡುಬಂದಿತ್ತು. 2021-22ರಲ್ಲಿ 226  ಅಂತರ್ ಜಾತಿಯ ವಿವಾಹವಾಗಿದ್ದರೇ 2020-21ರಲ್ಲಿ 217  ಜೋಡಿ ವಿವಾಹವಾಗಿತ್ತು.

ಇಲಾಖೆಯ ಅಂಕಿಅಂಶಗಳ ಪ್ರಕಾರ, ಡಿಸೆಂಬರ್ 2023 ರ ವೇಳೆಗೆ ಒಟ್ಟು 90 ಜೋಡಿಗಳು 2.48 ಕೋಟಿ ಪ್ರೋತ್ಸಾಹ ಧನವನ್ನು ಪಡೆದಿವೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗು ದಿ ನ್ಯೂಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಮೈಸೂರು ತಾಲೂಕಿನಲ್ಲಿ ಈ ವರ್ಷ ಅಂತರ್ಜಾತಿ ವಿವಾಹವಾದ ದಂಪತಿಗಳಿಂದ ಪ್ರೋತ್ಸಾಹಧನಕ್ಕಾಗಿ ಇಲಾಖೆಯು 143 ಹೊಸ ಅರ್ಜಿಗಳನ್ನು ಸ್ವೀಕರಿಸಿದೆ. ಹಿರಿತನದ ಆಧಾರದ ಮೇಲೆ ಪ್ರೋತ್ಸಾಹಧನ ಹಂಚಿಕೆ ಮಾಡಲಾಗುವುದು. ಈ ಮೊತ್ತವನ್ನು ದಂಪತಿಗಳ ಜಂಟಿ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಹೇಳಿದರು. ಅನ್ಯ ಜಾತಿಯ ಪುರುಷನನ್ನು ಮದುವೆಯಾದ ಪರಿಶಿಷ್ಟ ಜಾತಿಯ ಮಹಿಳೆಯರಿಗೆ 3 ಲಕ್ಷ ರೂ., ಇತರೆ ಜಾತಿಯ ಹುಡುಗಿಯನ್ನು ಮದುವೆಯಾದ ಎಸ್‌ಸಿ ಪುರುಷನಿಗೆ 2.5 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗುವುದು.

ಆದರೆ, ಜಿಲ್ಲೆಯಲ್ಲಿ ಅಂತರ್ಜಾತಿ ವಿವಾಹ, ವಿಧವಾ ಮರು ವಿವಾಹ ಹಾಗೂ ಸರಳ ವಿವಾಹ ಪ್ರಕರಣಗಳು ಕಡಿಮೆಯಾಗಿವೆ. ಅಂತರ್ಜಾತಿ ವಿವಾಹಕ್ಕೆ 13 ಅರ್ಜಿಗಳು ಬಂದಿದ್ದರೆ, ವಿಧವಾ ಮರು ವಿವಾಹಕ್ಕೆ ಕೇವಲ ಒಂದು ಮತ್ತು ಸರಳ ವಿವಾಹಕ್ಕೆ 19 ಅರ್ಜಿಗಳು ಬಂದಿವೆ. ಅಂಕಿಅಂಶಗಳ ಪ್ರಕಾರ, ಒಂಬತ್ತು ಜೋಡಿಗಳು ಅಂತರ್ಜಾತಿ ವಿವಾಹಕ್ಕೆ 18 ಲಕ್ಷ ರೂ., ಆರು ಜೋಡಿಗಳು ಮರು ವಿವಾಹಕ್ಕಾಗಿ ರೂ. 18 ಲಕ್ಷ ಪಡೆದಿದ್ದರೆ, 32 ಜೋಡಿಗಳು ಡಿಸೆಂಬರ್ 2023 ರ ಅಂತ್ಯದವರೆಗೆ ಸರಳ ವಿವಾಹಕ್ಕಾಗಿ ರೂ. 16 ಲಕ್ಷ ಪ್ರೋತ್ಸಾಹಧನ ಪಡೆದಿದ್ದಾರೆ. ಮಾನವ ಮಂಟಪ ಕನ್ನಡ ಕವಿ ಕುವೆಂಪು ಅವರು ಪ್ರತಿಪಾದಿಸಿದ ಪರಿಕಲ್ಪನೆಯಂತೆ ಯಾವುದೇ ವೈದಿಕ ಆಚರಣೆಗಳು ಅಥವಾ ಸಂಸ್ಕೃತ ಶ್ಲೋಕಗಳ ಪಠಣವಿಲ್ಲದೆ ಅಂತರ್ಜಾತಿ ವಿವಾಹಗಳಿಗೆ ವೇದಿಕೆಯಾಗಿದೆ.

ಮಾನವ ಮಂಟಪದ ಸಂಸ್ಥಾಪಕ ಉಗ್ರನರಸಿಂಹೇಗೌಡ ಮಾತನಾಡಿ, ''2006ರ ಜೂನ್‌ನಲ್ಲಿ ಸುಪ್ರೀಂ ಕೋರ್ಟ್‌ ತನ್ನ ಆದೇಶದಲ್ಲಿ ಅಂತರ್ಜಾತಿ ವಿವಾಹಗಳನ್ನು ಉತ್ತೇಜಿಸಲು, ಅಂತಹ ವಿವಾಹಗಳಿಗೆ ಅಡ್ಡಿಪಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಪೊಲೀಸರಿಂದ ದಂಪತಿಗಳಿಗೆ ರಕ್ಷಣೆ ನೀಡುವಂತೆ ಎಲ್ಲಾ ರಾಜ್ಯ ಸರಕಾರಗಳಿಗೆ ನಿರ್ದೇಶನ ನೀಡಿತ್ತು. ಮಾನವ ಮಂಟಪವು 27 ವರ್ಷಗಳಲ್ಲಿ ಸುಮಾರು 900 ವಿವಾಹ ಮಾಡುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಅಂತರ್ಜಾತಿ ಮತ್ತು ಅಂತರ್ ಧರ್ಮೀಯ ವಿವಾಹಗಳನ್ನು ನಡೆಸಿದೆ ಎಂದು ಹೇಳಿದರು.

ರಾಜ್ಯದಲ್ಲಿ ಅಂತರ್ಜಾತಿ  ವಿವಾಹವಾದ 3,972 ಜೋಡಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ, ಅದರಲ್ಲಿ 720 ಬೆಂಗಳೂರು ನಗರದಿಂದ, 242 ಮೈಸೂರಿನಿಂದ ಮತ್ತು 217 ಶಿವಮೊಗ್ಗ ಜಿಲ್ಲೆಯಿಂದ.

ಒಟ್ಟು 414 ಜೋಡಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕಲಬುರಗಿಯಿಂದ 42, ಬೆಳಗಾವಿಯಿಂದ 41 ಮತ್ತು ಮೈಸೂರಿನಿಂದ 13 ಜೋಡಿಗಳು ಪ್ರೋತ್ಸಾಹಧನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ವಿಧವಾ ಪುನರ್ವಿವಾಹಕ್ಕಾಗಿ, 57 ಜೋಡಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಯಾದಗಿರಿಯಿಂದ 14, ಕಲಬುರಗಿಯಿಂದ 11 ಮತ್ತು ಮೈಸೂರಿನಿಂದ ಒಬ್ಬರು ಅರ್ಜಿ ಸಲ್ಲಿಸಿದ್ದಾರೆ.

ಸರಳ ವಿವಾಹಗಳಿಗೆ ಒಟ್ಟು-751 ಅರ್ಜಿಗಳು, ಬೀದರ್‌ನಿಂದ 188, ರಾಯಚೂರಿನಿಂದ 116 ಆದರೆ ಮೈಸೂರಿನಿಂದ ಕೇವಲ 19 ಅರ್ಜಿಗಳು ಸಲ್ಲಿಕೆಯಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com