ಏರ್‌ಪೋರ್ಟ್ ಲೈನ್‌ನಲ್ಲಿ ರೋಡ್-ಕಮ್-ಮೆಟ್ರೋ ಫ್ಲೈಓವರ್‌; 2025ಕ್ಕೆ ಪಿಂಕ್ ಲೈನ್ ಮೆಟ್ರೋ ಸಂಚಾರಕ್ಕೆ ಮುಕ್ತ!

ನಮ್ಮ ಮೆಟ್ರೋ ದೇಶದ ಇತರೇ ಭಾಗಗಳ ಮೆಟ್ರೋಗಳಿಗಿಂತ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು, ಎರಡನೆ ಹಂತದ ರೀಚ್-6 ಮೆಟ್ರೋ ಮಾರ್ಗ 2025ರ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ನಮ್ಮ ಮೆಟ್ರೋ ದೇಶದ ಇತರೇ ಭಾಗಗಳ ಮೆಟ್ರೋಗಳಿಗಿಂತ ಗುಣಮಟ್ಟದಲ್ಲಿ ಅತ್ಯುತ್ತಮವಾಗಿದ್ದು, ಎರಡನೆ ಹಂತದ ರೀಚ್-6 ಮೆಟ್ರೋ ಮಾರ್ಗ 2025ರ ವೇಳೆಗೆ ಲೋಕಾರ್ಪಣೆಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಗುರುವಾರ ನಾಗವಾರ ಮುಖ್ಯರಸ್ತೆಯ ಕೆ.ಜಿ.ಹಳ್ಳಿ ಮೆಟ್ರೋ ಸ್ಟೇಷನ್ ಬಳಿ ಸುರಂಗ ಕೊರೆದು ಯಂತ್ರ ಹೊರಬರುವ ಪ್ರಕ್ರಿಯೆಯನ್ನು ವೀಕ್ಷಿಸಿದ ನಂತರ ಮಾತನಾಡಿದ ಅವರು, ‘ಈ ಮಾರ್ಗದಲ್ಲಿ ಒಟ್ಟು 13.76 ಕಿ.ಮೀ ಉದ್ದ ಸುರಂಗ ಇರಲಿದ್ದು. ಡೈರಿ ವೃತ್ತದಿಂದ ನಾಗಾವರದ ತನಕ 12 ನಿಲ್ದಾಣಗಳು ಬರಲಿವೆ. ಕಾಳೇನ ಅಗ್ರಹಾರದಿಂದ ನಾಗಾವರದ ತನಕ ಈ ಮಾರ್ಗವು ಒಟ್ಟು 21.26 ಕಿಮೀ ಉದ್ದವಿದೆ. 9 ಸುರಂಗ ಕೊರೆಯುವ ಯಂತ್ರಗಳು ಈಗ ಕಾರ್ಯನಿರ್ವಹಿಸುತ್ತಿದ್ದು, 7 ಕಡೆಗಳಲ್ಲಿ ಕೆಲಸ ಮುಗಿಯುವ ಹಂತಕ್ಕೆ ಬಂದಿದೆ. ಒಟ್ಟು 12 ನಿಲ್ದಾಣಗಳಿದ್ದು, ಶೇ.75ರಷ್ಟು ಕಾಮಗಾರಿ ಮುಗಿದಿದೆ ಎಂದರು.

ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಸುರಂಗ ರಸ್ತೆಗಳನ್ನು ಮಾಡುವ ಆಲೋಚನೆ ನಮ್ಮ ಮುಂದಿದೆ. ಆದ ಕಾರಣ ಎಷ್ಟು ಆಳ ಹೋಗಬೇಕಾಗುತ್ತದೆ. ಈ ಕಾರ್ಯ ಮಾಡಲು ಏನಾದರೂ ಅಡಚಣೆ ಉಂಟಾಗುತ್ತದೆಯೇ, ಸವಾಲುಗಳು ಏನು ಬರಬಹುದು ಎಂದು ತಿಳಿದುಕೊಳ್ಳಲು ಖುದ್ದಾಗಿ ಕಾಮಗಾರಿ ವೀಕ್ಷಣೆಗೆ ಬಂದಿದ್ದೇನೆ ಎಂದು ಹೇಳಿದರು.

ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆ ಬಗ್ಗೆ ಸಾರ್ವಜನಿಕ ಚರ್ಚೆ ಏರ್ಪಟ್ಟಿದೆ ಎನ್ನುವ ಪ್ರಶ್ನೆಗೆ ಈಗಾಲೇ ಕಾಮಗಾರಿ ವೇಗದಿಂದ ಸಾಗುತ್ತಿದೆ. ಪಿಲ್ಲರ್‌ಗಳನ್ನು ಹಾಕದೆ ಇರುವ ಕಡೆ ಎರಡು ಹಂತಗಳನ್ನು ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ಮೇಲಿನ ಹಂತದಲ್ಲಿ ಮೆಟ್ರೋ ಕೆಳಗಿನ ಹಂತದಲ್ಲಿ ರಸ್ತೆ ಮಾಡುವಂತೆ ಸೂಚನೆ ನೀಡಲಾಗಿದೆ. ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಈ ಆಲೋಚನೆಯನ್ನು ಅನುಷ್ಠಾನ ಮಾಡುವಂತೆ ತಿಳಿಸಿದ್ದೇನೆ.

ಇದರಿಂದ ಮೇಲ್ಸೇತುವೆ ನಿರ್ಮಾಣಕ್ಕೆ ಆಗುವಂತಹ ಶೇ 60 ರಷ್ಟು ವೆಚ್ಚ ತಗ್ಗಲಿದೆ. ಬಿಬಿಎಂಪಿ ಮತ್ತು ಬಿಎಂಆರ್‌ಸಿಎಲ್ ಜಂಟಿಯಾಗಿ ಈ ಯೋಜನೆಗೆ ವೆಚ್ಚ ಮಾಡಲಿವೆ. ಮೇಲ್ಸೇತುವೆ ನಿರ್ಮಾಣದ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಈ ರೀತಿಯ ಯೋಜನೆ ರೂಪಿಸಲಾಗಿದೆ. ನಾಗ್ಪುರದಲ್ಲಿ ಈ ರೀತಿಯ ಯೋಜನೆ ಗಮನಿಸಿದ್ದೆ. ಮುಂದಿನ ಮೆಟ್ರೋ ಕಾಮಗಾರಿಗಳಲ್ಲಿ ಈ ಆಲೋಚನೆಯನ್ನು ಕಾರ್ಯಗತ ಮಾಡುತ್ತೇವೆ ಎಂದು ತಿಳಿಸಿದರು.

2024 ರಲ್ಲಿಯೇ ಕಾಮಗಾರಿ ಮುಗಿಯುತ್ತದೆ ಎಂದು ಹೇಳಲಾಗಿತ್ತು ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು ಈಗಾಗಲೇ ಶೇ 98 ರಷ್ಟು ಭೂ ಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಭೌತಿಕ ಕೆಲಸಗಳು ಶೇ 53 ರಷ್ಟು ಪೂರ್ಣಗೊಂಡಿದೆ. 17 ಎಲಿವೇಟೆಡ್ ನಿಲ್ದಾಣಗಳ ಕೆಲಸ ಪ್ರಗತಿಯಲ್ಲಿವೆ ಎಂದು ತಿಳಿಸಿದರು.

ಮುಂಬರುವ ಬಜೆಟ್‌ನಲ್ಲಿ ಹೊಸ ಮೆಟ್ರೋ ಮಾರ್ಗಗಳ ಯೋಜನೆ ನೀಡಲಾಗುತ್ತದೆಯೇ ಎಂದು ಕೇಳಿದಾಗ  ತುಮಕೂರು, ಆನೇಕಲ್, ಬಿಡದಿ ಮಾರ್ಗಗಳಲ್ಲಿ ಡಿಪಿಆರ್ ನಡೆಸಲು ಈಗಾಗಲೇ ಸೂಚನೆ ನೀಡಲಾಗಿದೆ. ಈಗಲೇ ಮಾಹಿತಿ ನೀಡುವುದಿಲ್ಲ. ಡಿಪಿಆರ್ ಬಂದ ನಂತರ ಮಾಹಿತಿ ನೀಡಲಾಗುವುದು. ಇಲ್ಲಿ ಕೇಂದ್ರ ಸರ್ಕಾರದ ಪ್ರಾಯೋಜಕತ್ವವೂ ಇರುವುದರಿಂದ, ಅವರನ್ನೂ ಸಹ ವಿಶ್ವಾಸಕ್ಕೆ ತೆಗೆದುಕೊಂಡ ನಂತರ ಸಂಪೂರ್ಣ ಮಾಹಿತಿ ನೀಡುತ್ತೇನೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com