ಬೆಂಗಳೂರು: ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ತಾರತಮ್ಯ ಮಾಡುತ್ತಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ನಲ್ಲಿ ಅತಿ ದೊಡ್ಡ ಸುಳ್ಳು ಹೇಳಿದ್ದಾರೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿಂದು ಮಾತನಾಡಿದ ಅವರು, ಕೇಂದ್ರದಿಂದ ಒಂದೇ ಒಂದು ರೂಪಾಯಿ ನಮಗೆ ಬಂದಿಲ್ಲ. ಅತಿ ದೊಡ್ಡ ಸುಳ್ಳನ್ನು ಸಂಸತ್ನಲ್ಲಿ ನಿರ್ಮಾಲಾ ಸೀತರಾಮನ್ ಹೇಳಿದ್ದಾರೆ. ಕರ್ನಾಟಕದಿಂದ ಆಯ್ಕೆ ಆಗಿರುವ ಸಚಿವೆ ಸುಳ್ಳು ಹೇಳಿದ್ದು ಬೇಸರ ತರಿಸಿದೆ. ಬರ ಸಂಬಂಧ ರಾಜ್ಯದಲ್ಲಿ ಸರ್ವೆ ಕೆಲಸ ಮಾಡಿಕೊಂಡು ಹೋಗಿದ್ದರು. ಆದರೆ ಹಣ ಬಿಡುಗಡೆ ಮಾಡಿಲ್ಲ. ನಮಗೆ ಕೊಡಬೇಕಾದ ಎನ್ಡಿಆರ್ಎಫ್ ಹಣ ಕೊಡಿ ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರದಿಂದ ಮಲತಾಯಿ ಧೋರಣೆ: ಮಹದಾಯಿ ಯೋಜನೆಗೆ ರಾಷ್ಟ್ರೀಯ ವಾಣಿಜ್ಯ ಮಂಡಳಿ ತಕರಾರು ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಮಹದಾಯಿ, ಮೇಕೆದಾಟು, ಅಪ್ಪರ್ ಭದ್ರಾಗೆ ಅನುಮತಿ ಕೊಡಲಿಲ್ಲ. ಅಪ್ಪರ್ ಭದ್ರಾಗೆ 5,300 ಕೋಟಿ ಕೊಡುತ್ತೇವೆ ಅಂತ ಹೇಳಿ ಕೊಡಲಿಲ್ಲ. ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಮಾಡುತ್ತಿದೆ ಎಂದು ಹೇಳಬೇಕಾಗುತ್ತದೆ ಎಂದರು.
ಚುನಾವಣೆ ಸಮಯದಲ್ಲಿ ಅಮಿತ್ ಶಾ ಪ್ರವಾಸ: ಚುನಾವಣೆ ಸಂದರ್ಭದಲ್ಲಿ ಅಮಿತ್ ಶಾ ಬಂದೇ ಬರುತ್ತಾರೆ. ಇಷ್ಟರಲ್ಲೇ ಪ್ರಧಾನಿ ಮೋದಿ ಟಿಪಿ ಕೂಡ ಬರುತ್ತದೆ. ಬಿಜೆಪಿ ನಾಯಕರು ಏನು ಮಾಡಬೇಕೋ ಅದನ್ನು ಮಾಡಲಿ. ನಾವು ಏನು ಮಾಡಬೇಕೋ ಮಾಡುತ್ತೇವೆ. ಸಂದರ್ಭ ಬಂದಾಗ ಅಭ್ಯರ್ಥಿಗಳ ಘೋಷಣೆ ಮಾಡುತ್ತೇವೆ ಎಂದರು.
ವೈಯಕ್ತಿಯ ವಿಚಾರವಾಗಿ ಪ್ರತಾಪ್ ರೆಡ್ಡಿ ರಾಜೀನಾಮೆ: ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿದ್ದ ಐಪಿಎಸ್ ಅಧಿಕಾರಿ ಪ್ರತಾಪ್ ರೆಡ್ಡಿ ಅವರು ನಿವೃತ್ತಿಗೆ ಎರಡು ತಿಂಗಳು ಬಾಕಿ ಇರುವಾಗಲೇ ರಾಜೀನಾಮೆ ನೀಡಿದ್ದಾರೆ. ಈ ವಿಚಾರ ಬಗ್ಗೆ ಕೇಳಿದಾಗ, ವೈಯಕ್ತಿಕ ಕಾರಣದಿಂದ ಪ್ರತಾಪ್ ರೆಡ್ಡಿ ರಾಜೀನಾಮೆ ಕೊಟ್ಟಿದ್ದಾರೆ. ಯಾವುದೇ ಕಾರಣ ಕೊಟ್ಟು ರಾಜೀನಾಮೆ ಕೊಟ್ಟಿಲ್ಲ. ಅದಕ್ಕೆ ಅಂಗೀಕಾರ ಮಾಡಬೇಕಾಗುತ್ತದೆ ಎಂದರು.
ಕಾರ್ಯಕರ್ತರಿಗೆ ನಿಗಮ ಮಂಡಳಿ ಹಂಚಿಕೆ ವಿಳಂಬ ವಿಚಾರವಾಗಿ ಮಾತನಾಡಿದ ಪರಮೇಶ್ವರ್, ಆದಷ್ಟು ಬೇಗ ಮಾಡುತ್ತೇವೆ ಎಂದರು, ನಾವು ಬೇಸರ ಪಟ್ಟಿದ್ದು ಎಲ್ಲಾ ಮುಗಿದು ಹೋಯ್ತು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಚರ್ಚೆ ಮಾಡಿದ್ದಾರೆ. ಅಂತಿಮಗೊಳಿಸಿದ್ದೀವಿ ಎಂದರು.
Advertisement