ಬೆಂಗಳೂರು: ನಂಬರ್ ಪ್ಲೇಟ್​ ಬಿಚ್ಚಿಕೊಡ್ತೀನಿ, ಎಷ್ಟು ಕೇಸ್ ಬೇಕಾದ್ರೂ ಹಾಕ್ಕೋ; ಟ್ರಾಫಿಕ್ ಪೊಲೀಸ್ ಕೈಕಚ್ಚಿ, ಹಾವಳಿ ನಡೆಸಿದ್ದ ಸವಾರನ ಬಂಧನ

ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದ್ದನ್ನು ಮೊಬೈಲ್​ನಲ್ಲಿ ಫೋಟೋ ತೆಗೆದಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್​ ಕಾನ್​ಸ್ಟೆಬಲ್​ ಕೈ ಬೆರಳು ಕಚ್ಚಿ ಗಾಯಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ. 
ಸಂಚಾರಿ ಪೊಲೀಸರ ಕೈಕಚ್ಚಿದ್ದಾತನ ಬಂಧನ
ಸಂಚಾರಿ ಪೊಲೀಸರ ಕೈಕಚ್ಚಿದ್ದಾತನ ಬಂಧನ

ಬೆಂಗಳೂರು: ಹೆಲ್ಮೆಟ್ ಹಾಕದೇ ವಾಹನ ಚಲಾಯಿಸಿದ್ದನ್ನು ಮೊಬೈಲ್​ನಲ್ಲಿ ಫೋಟೋ ತೆಗೆದಿದ್ದಕ್ಕೆ ಕೋಪಗೊಂಡ ವಾಹನ ಸವಾರ ಟ್ರಾಫಿಕ್​ ಕಾನ್​ಸ್ಟೆಬಲ್​ ಕೈ ಬೆರಳು ಕಚ್ಚಿ ಗಾಯಗೊಳಿಸಿರುವ ಘಟನೆ ನಗರದಲ್ಲಿ ನಡೆದಿದೆ.  ವಿಲ್ಸನ್ ಗಾರ್ಡನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಾಹನ ಸವಾರನನ್ನು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್ 1ನೇ ಹಂತದ ನಿವಾಸಿ ಸೈಯದ್ ಶಫಿ ಎಂಬಾತ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ, ಈ ವೇಳೆ ಕಾನ್‌ಸ್ಟೆಬಲ್ ಸಿದ್ದರಾಮೇಶ್ವರ ಕೌಜಲಗಿ ಆತನ ಫೋಟೊ ತೆಗೆಯುತ್ತಿದ್ದರು. ಇದನ್ನು ಕಂಡು ಆಕ್ರೋಶಗೊಂಡ ಆರೋಪಿ ಅವರ  ಕೈ ಬೆರಳಪ ಕಚ್ಚಿದ್ದಾನೆ. ಜೊತೆಗೆ ಕಾನ್‌ಸ್ಟೆಬಲ್‌ನ ಮೊಬೈಲ್‌ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹೆಡ್ ಕಾನ್‌ಸ್ಟೆಬಲ್ ತಮ್ಮ ಸಹೋದ್ಯೋಗಿಯೊಂದಿಗೆ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ದ್ವಿಚಕ್ರ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪಿ ಶಫಿ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವ ಬೆದರಿಕೆ ಹಾಕಿದ್ದಾನೆ . ನಂಬರ್ ಪ್ಲೇಟ್​ ಬಿಚ್ಚಿಕೊಡುತ್ತೇನೆ, ಎಷ್ಟು ಕೇಸ್ ಹಾಕೊಳ್ತೀಯಾ ಹಾಕ್ಕೋ ಎಂದು ಏಕವಚನದಲ್ಲೇ ನಿಂದಿಸಿ ಕಾನ್​ಸ್ಟೆಬಲ್ ಕೈಯಲ್ಲಿದ್ದ ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ.

ಈ ವೇಳೆವಾಹನ ಸವಾರನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕರ್ತವ್ಯನಿರತ ಪೊಲೀಸರ ಮೇಲೆ ಹಲ್ಲೆ, ಬೆದರಿಕೆ ಹಾಕಿರುವ ಸಂಬಂಧ ಸಂಚಾರ ಪೊಲೀಸರು ನೀಡಿದ ದೂರಿನ ಮೇರೆಗೆ ವಿಲ್ಸನ್ ಗಾರ್ಡನ್ ಠಾಣೆಯ ಕಾನೂನು ಸುವ್ಯವಸ್ಥೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com