ಬೆಂಗಳೂರು: ಕೆಆರ್ ಪುರಂನ ಸಾಯಿ ಸೆರಿನಿಟಿ ಲೇಔಟ್ನಲ್ಲಿ ಅನಧಿಕೃತ ನಿರ್ಮಾಣ ಮತ್ತು ಅಕ್ರಮ ಕೊಳವೆಬಾವಿಗಳ ಬಗ್ಗೆ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಖರೀದಿಸುವಾಗ ಸರಿಯಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರಿಗೆ ಬಿಬಿಎಂಪಿ ಮನವಿ ಮಾಡಿದೆ.
ನಿಗದಿತ ಪಾರ್ಕಿಂಗ್ ಸ್ಥಳಗಳು, ಒಳಚರಂಡಿ ವ್ಯವಸ್ಥೆ, ಒಳಚರಂಡಿ ಸಂಸ್ಕರಣಾ ಘಟಕಗಳು ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಗಳಿಲ್ಲದೆ ಹಾಗೂ ಬಿಬಿಎಂಪಿಯಿಂದ ಯಾವುದೇ ಯೋಜನಾ ಅನುಮೋದನೆಯಿಲ್ಲದೆ , ಅನಧಿಕೃತ ಬಹುಮಹಡಿ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ ಎಂದು ಬಿಬಿಎಂಪಿ ನೋಟಿಸ್ ಉಲ್ಲೇಖಿಸಿದೆ
ಕೆಲವು ಬಿಲ್ಡರ್ಗಳು ಮತ್ತು ನಿಯಮ ಉಲ್ಲಂಘಿಸಿ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವ ಆರೋಪದ ಹಿನ್ನೆಲೆಯಲ್ಲಿ ಸಾಯಿ ಸೆರಿನಿಟಿ ಲೇಔಟ್ ನಲ್ಲಿ ಮನೆಗಳನ್ನು ಖರೀದಿಸಬಾರದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಕಟಣೆ ಹೊರಡಿಸಿದೆ. ಬಿಬಿಎಂಪಿ ಕಾಯಿದೆ 2020 ರ ಅಡಿಯಲ್ಲಿ ಬಹುಮಹಡಿ ಕಟ್ಟಡಗಳ ಬಿಲ್ಡರ್ಗಳು/ಮಾಲೀಕರಿಗೆ ಪಾಲಿಕೆ ನೋಟಿಸ್ ಕಳುಹಿಸಿದೆ.
ಈ ಪ್ರದೇಶದಲ್ಲಿ ಅಪಾರ್ಟ್ಮೆಂಟ್ಗಳಲ್ಲಿ ಫ್ಲಾಟ್ಗಳನ್ನು ಖರೀದಿಸಲು ಯೋಜಿಸುತ್ತಿರುವವರು ದಾಖಲೆಗಳನ್ನು ಕೂಲಂಕುಷವಾಗಿ ಪರಿಶೀಲಿಸುವಂತೆ ಪಾಲಿಕೆ ಸೂಚಿಸಿದೆ. ಇತ್ತೀಚೆಗೆ ನಾವು ತಪಾಸಣೆಗೆ ಭೇಟಿ ನೀಡಿದಾಗ, ನಿಯಮ ಉಲ್ಲಂಘನೆ ಮಾಡಿರುವ ಕೆಲವು ಬಿಲ್ಡರ್ ಗಳು ನಮ್ಮೊಂದಿಗೆ ಮಾತಿನ ಚಕಮಕಿ ನಡೆಸಿದರು. ಫ್ಲಾಟ್ ಖರೀದಿದಾರರು ಕೆಆರ್ ಪುರ ಉಪವಿಭಾಗ, ಹಳೆ ವಾರ್ಡ್ ನಂ-53, ಬಸವನಪುರ (ಹೊಸ ಸಂಖ್ಯೆ 92) ವ್ಯಾಪ್ತಿಗೆ ಬರುವ ಬಡಾವಣೆಯಲ್ಲಿ ಖರೀದಿಸುವ ಮುನ್ನ ನಿವೇಶನದ ದಾಖಲೆಗಳನ್ನು ಪರಿಶೀಲಿಸಬೇಕು' ಎಂದು ಹಿರಿಯ ಎಂಜಿನಿಯರ್ ಮನವಿ ಮಾಡಿದ್ದಾರೆ.
ಬೈಲಾ ಉಲ್ಲಂಘನೆ ಮತ್ತು ‘ಬಿ’ ಖಾತಾ ಭೂಮಿಯನ್ನು ಅನಧಿಕೃತವಾಗಿ ಬಳಸಿದ್ದಕ್ಕಾಗಿ ಶೀಘ್ರದಲ್ಲೇ ಬಡಾವಣೆಯಲ್ಲಿರುವ ಎರಡು ಕಟ್ಟಡಗಳನ್ನು ನೆಲಸಮಗೊಳಿಸಲಾಗುವುದು ಎಂದು ಅವರು ಹೇಳಿದರು.
ಅನಧಿಕೃತ ನಿರ್ಮಾಣ, ಕಟ್ಟಡ ಬೈಲಾ ಉಲ್ಲಂಘನೆ, ಎಲೆ ಮಲ್ಲಪ್ಪ ಶೆಟ್ಟಿ ಕೆರೆಗೆ ಕೊಳಚೆ ನೀರು ಬಿಡುವುದು ಹಾಗೂ ಸಾಯಿ ಸೆರಿನಿಟಿ ಲೇಔಟ್ನಲ್ಲಿ ಅನಧಿಕೃತ ಬೋರ್ವೆಲ್ ಪಂಪ್ ಮಾಡುವ ಕುರಿತು ಈ ಹಿಂದೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು.
Advertisement