ಬೆಂಗಳೂರು: ಬೆಂಗಳೂರಿಗೆ ಕುಡಿಯುವ ನೀರಿನ ಅಗತ್ಯತೆಯನ್ನು ಪೂರೈಸಲು ಕಾವೇರಿ ಐದನೇ ಹಂತದ ಯೋಜನೆಯು ಈ ವರ್ಷ ಮೇ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಇಂದು ವಿಧಾನಸಭೆಯಲ್ಲಿ 2024-25ನೇ ಸಾಲಿನ ಬಜೆಟ್ ಮಂಡಿಸಿದ ಸಿಎಂ ಸಿದ್ದರಾಮಯ್ಯ ಅವರು, ದಿನಕ್ಕೆ 775 ಮಿಲಿಯನ್ ಲೀಟರ್ ಸಾಮರ್ಥ್ಯದ 5,550 ಕೋಟಿ ರೂಪಾಯಿ ವೆಚ್ಚದ ಕಾವೇರಿ ಐದನೇ ಹಂತದ ಯೋಜನೆಯು 12 ಲಕ್ಷ ಜನರಿಗೆ ಪ್ರತಿದಿನ 110 ಲೀಟರ್ ನೀರು ಒದಗಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಕಾವೇರಿ ಹಂತ-5ರ ಅಡಿಯಲ್ಲಿ ಡಿಸೆಂಬರ್ 2024 ರೊಳಗೆ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಈ ಯೋಜನೆಯ ಭಾಗವಾಗಿ 228 ಕಿಮೀ ಒಳಚರಂಡಿ ಪೈಪ್ಲೈನ್ ಮತ್ತು 13 ಕೊಳಚೆ ನೀರು ಸಂಸ್ಕರಣಾ ಘಟಕಗಳನ್ನು(ಎಸ್ಟಿಪಿ) ನಿರ್ಮಿಸಲಾಗುವುದು. ಈ ಮೂಲಕ ದಿನಕ್ಕೆ 100 ಮಿಲಿಯನ್ ಲೀಟರ್ (ಎಂಎಲ್ಡಿ) ಕೊಳಚೆ ನೀರನ್ನು ಸಂಸ್ಕರಿಸಲಾಗುವುದು ಎಂದರು.
268 ಎಂಎಲ್ಡಿ ಕೊಳಚೆ ನೀರಿನ ದೈನಂದಿನ ಸಂಸ್ಕರಣೆ ಮತ್ತು ಮರುಬಳಕೆಗಾಗಿ ಏಳು ಎಸ್ಟಿಪಿಗಳನ್ನು 441 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಿಸಲಾಗುವುದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಗೆ ಹೊಸದಾಗಿ ಸೇರಿಸಲಾದ 110 ಹಳ್ಳಿಗಳಿಗೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಯ ಹಂತ-2 ಅನ್ನು ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
Advertisement