ಬೆಂಗಳೂರು/ತಿರುವನಂತಪುರಂ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಅವರ ಐಟಿ ಸಂಸ್ಥೆ ಎಕ್ಸಾಲಾಜಿಕ್ ಸಲ್ಯೂಷನ್ಸ್ ವಿರುದ್ಧದ ಗಂಭೀರ ವಂಚನೆಗಳ ತನಿಖಾ ಕಚೇರಿ(ಎಸ್ಎಫ್ಐಒ) ತನಿಖೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಶುಕ್ರವಾರ ನಿರಾಕರಿಸಿದೆ.
ಕರ್ನಾಟಕ ಹೈಕೋರ್ಟ್ನ ಆದೇಶವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಭಾರಿ ಹಿನ್ನಡೆಯಾಗಿದೆ, ಏಕೆಂದರೆ ಅವರ ಪುತ್ರಿ ವೀಣಾ ವಿಜಯನ್ ಎಕ್ಸಾಲಾಜಿಕ್ನ ಏಕೈಕ ನಿರ್ದೇಶಕರಾಗಿದ್ದಾರೆ.
ಎಸ್ಎಫ್ಐಒ ತನಿಖೆ ಮುಂದುವರಿಯಬಹುದು ಎಂದು ಕರ್ನಾಟಕ ಹೈಕೋರ್ಟ್ ಒಂದು ಸಾಲಿನ ಆದೇಶ ಹೊರಡಿಸಿದೆ ಮತ್ತು ಸಂಪೂರ್ಣ ಆದೇಶವನ್ನು ಶನಿವಾರ ಪ್ರಕಟಿಸುವುದಾಗಿ ತಿಳಿಸಿದೆ.
ಎಸ್ಎಫ್ಐಒ ನಡೆಸುತ್ತಿರುವ ತನಿಖೆಗೆ ತಡೆ ಕೋರಿ ಕಳೆದ ವಾರ ಎಕ್ಸಾಲಾಜಿಕ್ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ತನಿಖೆಗೆ ತಡೆ ನೀಡಲು ನಿರಾಕರಿಸಿದೆ. ಆದರೆ ಕಂಪನಿಗೆ ಸಂಬಂಧಿಸಿದ ದಾಖಲೆಗಳನ್ನು ಅರ್ಜಿದಾರರು ಎಸ್ಎಫ್ಐಒಗೆ ಒದಗಿಸಬೇಕು. ಅರ್ಜಿದಾರರ ವಿರುದ್ಧ ಬಂಧನದಂತಹ ಯಾವುದೇ ಬಲವಂತದ ಕ್ರಮವನ್ನು ಎಸ್ಫ್ಐಒ ಕೈಗೊಳ್ಳಬಾರದು ಎಂದು ಸೂಚಿಸಿದೆ.
ಕಂಪನಿಯ ವಿರುದ್ಧ ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವಾಲಯ ಕಂಪನಿ ಕಾಯಿದೆಯ ವಿವಿಧ ಸೆಕ್ಷನ್ಗಳ ಅಡಿ ತನಿಖೆ ನಡೆಸುವಂತೆ ಜನವರಿ 31 ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. ಕೇಂದ್ರ ಸರ್ಕಾರದ ಈ ಆದೇಶವು ದೋಷಪೂರಿತವಾಗಿದೆ. ಸೂಕ್ತ ಕಾರಣವಿಲ್ಲದೇ ತನಿಖೆಗೆ ಆದೇಶಿಸಿದ್ದು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಜೊತೆಗೆ ಸಂವಿಧಾನದ ಪರಿಚ್ಛೇದ 14 ಮತ್ತು 21ಕ್ಕೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
Advertisement