ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ದಲಿತ ಯುವಕನ ಮೇಲೆ ಮೇಲ್ಜಾತಿಗಳ ಗುಂಪೊಂದು ತಮ್ಮ ಪ್ರದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಹಲ್ಲೆ ನಡೆಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಗೇರಮರಡಿ ಗ್ರಾಮದಲ್ಲಿ ಈ ಘಟನೆ ವರದಿಯಾಗಿದೆ. ಹಲ್ಲೆಗೊಳಗಾದ ದಲಿತ ಯುವಕನನ್ನು ಮಾರುತಿ ಎಂದು ಗುರುತಿಸಲಾಗಿದ್ದು, ಆತನನ್ನು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರಪೇಟೆ ಗ್ರಾಮದ ಗೊಲ್ಲರ ಕೇರಿಯಲ್ಲಿ ಮಾರುತಿ ಎಂಬುವವರು ಜೆಸಿಬಿ ಮೂಲಕ ಕಾಮಗಾರಿಗೆ ತೆರಳಿದ್ದರು. ಈತನನ್ನು ಯಾರೆಂದು ವಿಚಾರಿಸಿದ ಸ್ಥಳೀಯರು, ದಲಿತ ಸಮುದಾಯದವನೆಂದು ತಿಳಿಯುತ್ತಿದ್ದಂತೆ ಹಲ್ಲೆ ನಡೆಸಿದ್ದಾರೆ.
ದಲಿತ ಸಂಘಟನೆಗಳು ಇದೀಗ ಯುವಕನ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ತೆರಳಿ ಅಸ್ಪೃಶ್ಯತೆ ವಿರುದ್ಧ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿವೆ. ಅಲ್ಲದೆ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದಾರೆ.
Advertisement