ದೇಗುಲದ ಗರ್ಭಗುಡಿ ಪ್ರವೇಶಕ್ಕೆ ನಿರಾಕರಿಸಿದ ಸಿಎಂ ಸಿದ್ದರಾಮಯ್ಯ; 'ಅಸಲಿ ಮುಖ ಇದು' ಎಂದು ಬಿಜೆಪಿ ವಾಗ್ದಾಳಿ

ಹಲವು ಬಾರಿ ಮನವಿ ಮಾಡಿದರೂ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, ಅವರ ವಿರುದ್ಧ ಕಿಡಿಕಾರಿದೆ.
ಬಿಜೆಪಿ
ಬಿಜೆಪಿ

ಬೆಂಗಳೂರು: ಹಲವು ಬಾರಿ ಮನವಿ ಮಾಡಿದರೂ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಲು ನಿರಾಕರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, ಅವರ ವಿರುದ್ಧ ಕಿಡಿಕಾರಿದೆ.

ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ನೀಡಿ, ರಾಮಮಂದಿರಕ್ಕೆ ಒಂದು ರೂ.ಗಳನ್ನು ಸಹ ದೇಣಿಗೆ ನೀಡದ ಚುನಾವಣಾ ಹಿಂದೂ ಸಿಎಂ ಸಿದ್ದರಾಮಯ್ಯರವರ ಅಸಲಿ ಮುಖ ಇದು. ವಿಜಯಪುರದ ದ್ಯಾಬೇರಿ ಗ್ರಾಮದ ವಾಗ್ದೇವಿ ದೇವಿಯ ದರ್ಶನವನ್ನು ಕಾಟಾಚಾರಕ್ಕೆ ಮಾಡಿದ ಹಿಂದೂ ವಿರೋಧಿ ಸಿದ್ದರಾಮಯ್ಯರವರು ಪ್ರಭು ಶ್ರೀರಾಮರ ಅಪರಾವತಾರವಂತೆ ಎಂದು ಬಿಜೆಪಿ ಟೀಕಿಸಿದೆ.

ಮುಂದುವರಿದು. ಸಿಎಂ ಸಿದ್ದರಾಮಯ್ಯನವರೇ, ಮಸೀದಿ, ದರ್ಗಾಗಳಿಗೆ ಹೋಗಿ ಅವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಂಡು ಫೋಸು ಕೊಡುವ ನಿಮಗೆ, ದೇವಿಯ ಬಳಿ ನಾಡಿನ ಒಳಿತಿಗಾಗಿ ಭಕ್ತಿಯಿಂದ ಕೈ ಮುಗಿಯುವಷ್ಟು ಸಮಯವಿಲ್ಲ. ಹಿಂದೂ ಧರ್ಮ, ಹಿಂದೂ ದೈವ ಹಾಗೂ ಹಿಂದೂಗಳನ್ನು ಕಂಡರೆ ಈ ಪರಿ ಅಸಡ್ಡೆ ಏಕೆ..? ಎಂದು ಬಿಜೆಪಿ ಪ್ರಶ್ನಿಸಿದೆ. 

ಬಿಜೆಪಿ ಸಿಎಂ ಸಿದ್ದರಾಮಯ್ಯ ವಿರುದ್ಧ ತೀವ್ರ ಹರಿಹಾಯ್ದಿದ್ದು, ಅವರ ಹಿಂದೂ ವಿರೋಧಿ ನಿಲುವನ್ನು ಎತ್ತಿ ಹಿಡಿಯುವ ಮೂಲಕ ಅವರ ವಿರುದ್ಧ ಸರಣಿ ಪೋಸ್ಟ್‌ಗಳನ್ನು ಹಾಕುತ್ತಿದೆ.

39 ಸೆಕೆಂಡುಗಳ ಈ ವಿಡಿಯೋದಲ್ಲಿ, ಸಿಎಂ ಸಿದ್ದರಾಮಯ್ಯ ಅವರು ದೇವಾಲಯದ ಪ್ರವೇಶದ್ವಾರದ ಬಳಿ ನಿಂತಿರುವುದನ್ನು ಕಾಣಬಹುದು. ಅಲ್ಲಿಂದ ಅವರನ್ನು ಗರ್ಭಗುಡಿಗೆ ಬರುವಂತೆ ಮನವಿ ಮಾಡಿದರೂ, ಅವರು ಪ್ರವೇಶಿಸಲು ನಿರಾಕರಿಸುತ್ತಾರೆ. ಅವರ ಬದಲಿಗೆ ಅವರು ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂಬಿ ಪಾಟೀಲ ಅವರನ್ನು ದೇವಸ್ಥಾನದ ಒಳಗೆ ಕಳುಹಿಸುತ್ತಾರೆ. ಒಳಗೆ ಬಂದ ಪಾಟೀಲ ಅವರು ಸಹ ಸಿಎಂಗೆ ಮನವಿ ಮಾಡಿದರೂ, ಅವರು ಒಳಗೆ ಬರಲು ನಿರಾಕರಿಸುತ್ತಾರೆ.

ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ಭೇದ ಮರೆತು ಭಾರತೀಯರೆಲ್ಲರೂ ಒಟ್ಟಾಗಿ ರಾಮಮಂದಿರ ನಿರ್ಮಾಣವನ್ನು ಸಂಭ್ರಮಿಸುತ್ತಿರುವುದು ಕಾಂಗ್ರೆಸ್ ಸರ್ಕಾರಕ್ಕೆ ಸಹಿಸಲಾಗುತ್ತಿಲ್ಲ. ಸದಾ ಕೋಮುದ್ವೇಷ ಹಬ್ಬಿಸಿ ಅದರಿಂದ ಲಾಭ ಮಾಡಿಕೊಳ್ಳುತ್ತಿದ್ದ ಕಾಂಗ್ರೆಸ್ ಈಗ ಹಸಿದಿದೆ. ತನ್ನ ಹಸಿವು ನೀಗಿಸಲು ಸಮಾಜದ ಶಾಂತಿಯನ್ನೇ ಭಕ್ಷಿಸಲು ತಯಾರಾಗಿದೆ ಎಂದು ದೂರಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com