ಬೆಂಗಳೂರು: ರಾಮ ಮಂದಿರದ ಶ್ರೇಯಸ್ಸು ಪಡೆಯುತ್ತಿರುವ ಬಿಜೆಪಿಯನ್ನು ಗುರಿಯಾಗಿಸಿಕೊಂಡ ಸಚಿವ ಮತ್ತು ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಅವರು, 'ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ರಾಮ ಮಂದಿರವನ್ನು ತೆರೆಯಲು ಕ್ರಮ ಕೈಗೊಂಡಿದ್ದರು' ಎಂದು ಹೇಳಿದ್ದಾರೆ.
'ಆ ಮಂದಿರವನ್ನು ಯಾರು ತೆರೆದರು? ಅದಕ್ಕೆ ಬೀಗ ಹಾಕಲಾಗಿತ್ತು. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಆ (ರಾಮ) ಮಂದಿರವನ್ನು ತೆರೆಯಲು ಕ್ರಮ ಕೈಗೊಂಡಿದ್ದರು. ಈ ಬಿಜೆಪಿಯವರು ಸುಳ್ಳುಗಾರರು. ಅವರಿಗೆ ಸುಳ್ಳು ಹೇಳುವುದನ್ನು ಬಿಟ್ಟು ಮಾಡಲು ಬೇರೆ ಕೆಲಸವಿಲ್ಲ. 1985 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರು ಅಯೋಧ್ಯೆಯಲ್ಲಿ ಅಂದಿನ ಬಾಬರಿ ಮಸೀದಿಯ ಬೀಗಗಳನ್ನು ತೆರೆದಿದ್ದನ್ನು ಉಲ್ಲೇಖಿಸುವಾಗ ಹೇಳಿದರು.
ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅರು, ಬಿಜೆಪಿ ಪಕ್ಷವು ಧರ್ಮವನ್ನು ರಾಜಕೀಯಕ್ಕೆ ಎಳೆದು ತರುತ್ತಿದೆ. ಕಾಂಗ್ರೆಸ್ನ ಜನರು ಹಿಂದೂಗಳಾಗಿ ಹುಟ್ಟಿದ್ದಾರೆ ಮತ್ತು ನಾವು ಹಿಂದೂ ಧರ್ಮವನ್ನು ರಾಜಕೀಯದೊಂದಿಗೆ ಬೆರೆಸುವುದಿಲ್ಲ. ಈ ಬಿಜೆಪಿಯವರು ಹಿಂದೂ ಧರ್ಮದೊಂದಿಗೆ ರಾಜಕೀಯವನ್ನು ಬೆರೆಸುತ್ತಾರೆ ಮತ್ತು ಅವರು ಶ್ರೀರಾಮನನ್ನು ಕೂಡ ರಾಜಕೀಯಕ್ಕೆ ಎಳೆದು ತರುತ್ತಾರೆ. ನಾವು ಆ ಕೆಲಸಗಳನ್ನು ಮಾಡುವುದಿಲ್ಲ' ಎಂದು ಹೇಳಿದರು.
'ಜನವರಿ 22 ರಂದು (ಅಯೋಧ್ಯೆಯ ರಾಮ ಮಂದಿರ 'ಪ್ರಾಣ ಪ್ರತಿಷ್ಠಾಪನಾ' ಸಂದರ್ಭದಲ್ಲಿ) ವಿಶೇಷ ಪೂಜೆ ಮಾಡುವಂತೆ ರಾಜ್ಯದ 34,000 ದೇವಾಲಯಗಳಿಗೆ ಸುತ್ತೋಲೆ ಹೊರಡಿಸಲಾಗಿದೆ' ಎಂದು ರೆಡ್ಡಿ ಹೇಳಿದರು.
ಇದನ್ನೂ ಓದಿ: ಕಡೆಗೂ ರಾಮಭಕ್ತಿಗೆ ಶರಣಾದ ಕಾಂಗ್ರೆಸ್ ಸರ್ಕಾರ!
ಜನವರಿ 22 ರಂದು ರಾಮ ಮಂದಿರ ಲೋಕಾರ್ಪಣೆ ಸಮಾರಂಭಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಗಣ್ಯರು ಹಾಗೂ ಸಮಾಜದ ಎಲ್ಲ ವರ್ಗದ ಜನರನ್ನು ಸೆಳೆಯಲಿದೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಜನವರಿ 22 ರಂದು ಮಧ್ಯಾಹ್ನ ರಾಮ ಮಂದಿರದ ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲು ನಿರ್ಧರಿಸಿದೆ.
ಭವ್ಯ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ.
ನಿರ್ಮಾಪಕ ಮಹಾವೀರ್ ಜೈನ್ ಜೊತೆಗೆ ನಟರಾದ ರಜನಿಕಾಂತ್, ಅಮಿತಾಬ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್ ಮತ್ತು ಹಿರಿಯ ನಿರ್ದೇಶಕರಾದ ಸುಭಾಷ್ ಘಾಯ್, ರಾಜ್ಕುಮಾರ್ ಹಿರಾನಿ, ಸಂಜಯ್ ಲೀಲಾ ಬನ್ಸಾಲಿ ಮತ್ತು ರೋಹಿತ್ ಶೆಟ್ಟಿ ಅವರಿಗೆ ಟ್ರಸ್ಟ್ ಆಹ್ವಾನ ಕಳುಹಿಸಿದೆ. ಹೆಚ್ಚುವರಿಯಾಗಿ, ದಕ್ಷಿಣ ಭಾರತದ ಸೆಲೆಬ್ರಿಟಿಗಳಾದ ಚಿರಂಜೀವಿ, ಮೋಹನ್ಲಾಲ್, ಧನುಷ್ ಮತ್ತು ರಿಷಬ್ ಶೆಟ್ಟಿ ಅವರನ್ನು ಸಹ ಆಹ್ವಾನಿಸಲಾಗಿದೆ.
ಸಮಾರಂಭಕ್ಕೆ ಎಲ್ಲಾ ವರ್ಗದ 4,000 ಸಂತರನ್ನು ಟ್ರಸ್ಟ್ ಆಹ್ವಾನಿಸಿದೆ. ಅಯೋಧ್ಯೆಯಲ್ಲಿ ರಾಮ್ ಲಲ್ಲಾ (ಶಿಶು ಭಗವಾನ್ ರಾಮ) ಅವರ ಪ್ರಾಣ-ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭದ ವೈದಿಕ ಆಚರಣೆಗಳು ಮುಖ್ಯ ಸಮಾರಂಭದ ಒಂದು ವಾರಕ್ಕೂ ಮೊದಲು ಜನವರಿ 16 ರಂದು ಪ್ರಾರಂಭವಾಗುತ್ತವೆ.
ವಾರಣಾಸಿಯ ಅರ್ಚಕ ಲಕ್ಷ್ಮೀಕಾಂತ ದೀಕ್ಷಿತ್ ಅವರು ರಾಮ್ ಲಲ್ಲಾ ಮೂರ್ತಿ ಪ್ರತಿಷ್ಠಾಪನೆಯ ಸಮಾರಂಭದ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಜನವರಿ 14 ರಿಂದ ಜನವರಿ 22 ರವರೆಗೆ ಅಯೋಧ್ಯೆಯು ಅಮೃತ ಮಹೋತ್ಸವ ನಡೆಯುತ್ತಿದೆ.
Advertisement