ಧಾರವಾಡ: ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಆರೋಪ ಕೇಳಿಬಂದಿದ್ದು, ಧಾರವಾಡದಲ್ಲಿ ವ್ಯಕ್ತಿಗೆ ಥಳಿಸಿದ ಆರೋಪ ಕೇಳಿಬಂದಿದೆ.
ಧಾರವಾಡದ ಪ್ರತಿಷ್ಠಿತ ವ್ಯಾಪಾರ ಮಳಿಗೆಯಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದೆ ಎಂದು ಆರೋಪಿಸಲಾಗಿದ್ದು, ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಬಲಪಂಥೀಯ ಕಾರ್ಯಕರ್ತರ ಗುಂಪು ವ್ಯಾಪಾರ ಸಂಸ್ಥೆಗೆ ನುಗ್ಗಿ ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯನ್ನು ಥಳಿಸಿದೆ ಎಂದು ಹೇಳಲಾಗಿದೆ. ವ್ಯಾಪಾರ ಸಂಸ್ಥೆಗೆ ಭೇಟಿ ನೀಡುವ ಹಿಂದೂ ಯುವತಿಯರು ಮತ್ತು ಮಹಿಳೆಯರ ಫೋನ್ ಸಂಖ್ಯೆಗಳನ್ನು ಪಡೆದು ಅವರಿಗೆ ವೀಡಿಯೊ ಕರೆ ಮಾಡಿ ನಂತರ ಅವರ ಅಶ್ಲೀಲ ಫೋಟೋಗಳನ್ನು ಬಳಸಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಆರೋಪಿಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಅಂತಹ ಫೋಟೋಗಳು ಮತ್ತು ವೀಡಿಯೊಗಳನ್ನು ಆ ವ್ಯಕ್ತಿಯ ಮೊಬೈಲ್ ಫೋನ್ನಲ್ಲಿ ನೋಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿದಾಗ ಇದು ನೈತಿಕ ಪೊಲೀಸ್ಗಿರಿ ಅಲ್ಲ ಎಂದು ಕಾರ್ಯಕರ್ತರು ಹೇಳಿದ್ದಾರೆ.
ಹುಬ್ಬಳ್ಳಿ-ಧಾರವಾಡ ಡಿಸಿಪಿ ರಾಜೀವ್ ಎಂ ಕೂಡ ತಕ್ಷಣ ಸ್ಥಳಕ್ಕೆ ಆಗಮಿಸಿದ ಕಾರಣ ಇದು ನೈತಿಕ ಪೊಲೀಸ್ಗಿರಿ ಅಲ್ಲ. ಕಾರ್ಯಕರ್ತರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆಪಾದಿತ ಸಂತ್ರಸ್ತರು ಯಾರೂ ದೂರು ನೀಡಲು ಮುಂದೆ ಬಂದಿಲ್ಲ. ಅದಾಗ್ಯೂ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂತಹ ಯಾವುದೇ ಘಟನೆಗೆ ತಾವು ಸಾಕ್ಷಿಯಾಗಿಲ್ಲ ಮತ್ತು ಇದು ಅಂಗಡಿಯ ಹೊರಗೆ ಸಂಭವಿಸಿರಬಹುದು ಎಂದು ವ್ಯಾಪಾರ ಸಂಸ್ಥೆಯ ವ್ಯವಸ್ಥಾಪಕರು ಹೇಳಿದರು. ಅವರು ತಮ್ಮ ಉದ್ಯೋಗಿಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
Advertisement