ಏಳು ತಿಂಗಳಾದರೂ ಬರ ಪರಿಹಾರವಿಲ್ಲ, ಮಾಹಿತಿ ನೋಂದಣಿಗೆ ಸೂಪರ್‌ವೈಸರ್‌ಗಳಿಂದ ಅನುಮೋದನೆಯೂ ಇಲ್ಲ!

ರಾಜ್ಯದಲ್ಲಿ ಬರಗಾಲ ಬಂದು ಏಳು ತಿಂಗಳಾದರೂ ಕಾಂಗ್ರೆಸ್ ಸರ್ಕಾರ ರೈತರಿಗೆ ಪರಿಹಾರ ನೀಡಿಲ್ಲ. ಈ ನಡುವೆ ಪಹಣಿಯಲ್ಲಿ ರೈತರ ಬೆಳೆ ಮಾಹಿತಿ ನೋಂದಣಿಗೆ ಸೂಪರ್‌ವೈಸರ್‌ಗಳು ಅನುಮೋದನೆ ನೀಡುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರ್.ಅಶೋಕ್
ಆರ್.ಅಶೋಕ್
Updated on

ಬೆಂಗಳೂರು: ರಾಜ್ಯದಲ್ಲಿ ಬರಗಾಲ ಬಂದು ಏಳು ತಿಂಗಳಾದರೂ ಕಾಂಗ್ರೆಸ್ ಸರ್ಕಾರ ರೈತರಿಗೆ ಪರಿಹಾರ ನೀಡಿಲ್ಲ. ಈ ನಡುವೆ ಪಹಣಿಯಲ್ಲಿ ರೈತರ ಬೆಳೆ ಮಾಹಿತಿ ನೋಂದಣಿಗೆ ಸೂಪರ್‌ವೈಸರ್‌ಗಳು ಅನುಮೋದನೆ ನೀಡುತ್ತಿಲ್ಲ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಅಶೋಕ್, ಮುಖ್ಯಮಂತ್ರಿ ಸಿದ್ದರಾಮಯ್ಯ ಆರು ತಿಂಗಳ ಕಾಲ ಮೀನಾ ಮೇಷ ಎಣಿಸುತ್ತಾ ಪರಿಹಾರ ಕೊಡಲೋ ಬೇಡವೋ ಎಂದು ಯೋಚಿಸುತ್ತಿದ್ದರು. ನಂತರ ಅರೆ ಮನಸ್ಸಿನಿಂದ ಕಳೆದ ನವೆಂಬರ್‌ನಲ್ಲಿ ಪ್ರತಿ ಎಕರೆಗೆ 2,000 ರೂ. ಬರ ಪರಿಹಾರ ಘೋಷಣೆ ಮಾಡಿದರು. ಅದಾಗಿ ಎರಡು ತಿಂಗಳಾದರೂ ಒಂದು ಬಿಡಿಗಾಸು ಕೂಡ ರೈತರಿಗೆ ತಲುಪಿಲ್ಲ ಎಂದು ಹೇಳಿದ್ದಾರೆ.

ಪರಿಹಾರ ಪಡೆಯಲು ಸರ್ಕಾರದ ಫ್ರೂಟ್ಸ್ ಡಾಟಾಬೇಸ್‌ನಲ್ಲಿ ರೈತರ ಮಾಹಿತಿ ದಾಖಲು ಮಾಡಬೇಕಿದ್ದು, ಇನ್ನೂ ಶೇ.25 ರಷ್ಟು ರೈತರ ಮಾಹಿತಿ ದಾಖಲಾಗಿಲ್ಲ. ಕಂದಾಯ ಸಚಿವ ಕೃಷ್ಣ ಬೈರೇಗೌಡರು ವಾರಕ್ಕೊಮ್ಮೆ ಸಭೆ ನಡೆಸಿ, ಇನ್ನೊಂದು ವಾರದೊಳಗೆ ಮೊದಲ ಕಂತಿನ ಬರ ಪರಿಹಾರ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳುತ್ತಾ, ಕೇವಲ ಹೇಳಿಕೆಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಆರ್‌.ಅಶೋಕ ಅಸಮಾಧಾನ ಹೊರಹಾಕಿದ್ದಾರೆ.

ಗ್ಯಾರೆಂಟಿ ಯೋಜನೆಗಳಿಂದ ಖಜಾನೆ ಖಾಲಿ ಆಗಿರುವುದರಿಂದ ಕಾಂಗ್ರೆಸ್‌ ಸರ್ಕಾರ ರೈತರ ವಿಷಯದಲ್ಲಿ ಚೆಲ್ಲಾಟ ಆಡುತ್ತಾ ಸತಾಯಿಸುತ್ತಿದೆ ಎಂಬ ಅನುಮಾನ ಬರುತ್ತಿದೆ. ಗಾಯದ ಮೇಲೆ ಬರೆ ಎಳೆದಂತೆ ಬೆಳೆ ಸಮೀಕ್ಷೆ ಅನುಮೋದನೆ ಆಗಿಲ್ಲ. ಅತ್ತ ಬರ ಪರಿಹಾರವೂ ಸಿಗದೆ ಇತ್ತ ಬೆಂಬಲ ಬೆಲೆಗೆ ತಮ್ಮ ಕೃಷಿ ಉತ್ಪನ್ನ ಮಾರಾಟ ಮಾಡಲೂ ಆಗದ ಪರಿಸ್ಥಿತಿಯಲ್ಲಿ ನೂರಾರು ರೈತರು ಸಿಲುಕಿದ್ದಾರೆ ಎಂದು ದೂರಿದ್ದಾರೆ.

ಸರ್ಕಾರದ ಸೌಲಭ್ಯ ಪಡೆಯಲು ಪಹಣಿಯಲ್ಲಿ ಬೆಳೆ ನಮೂದಾಗಿರಬೇಕು. ಲಕ್ಷಾಂತರ ರೈತರು ತಾವಾಗಿಯೇ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದ್ದರೂ ಅದನ್ನು ಸೂಪರ್‌ವೈಸರ್‌ಗಳು ಅನುಮೋದನೆ ಮಾಡಿಲ್ಲ. ಹೀಗಾಗಿ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಸರ್ಕಾರದ ಈ ಬೇಜವಾಬ್ದಾರಿ, ಗೊಂದಲದ ನೀತಿಗಳಿಂದ ಸಂಕಷ್ಟದಲ್ಲಿರುವ ರೈತರು ತ್ರಿಶಂಕು ಪರಿಸ್ಥಿತಿಯಲ್ಲಿ ಸಿಲುಕಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಗೊಂದಲ ನಿವಾರಿಸಿ ರೈತರಿಗೆ ಪರಿಹಾರ ಬಿಡುಗಡೆ ಮಾಡಬೇಕು ಮತ್ತು ಬೆಂಬಲ ಬೆಲೆಯಂತೆ ಬೆಳೆ ಮಾರಾಟಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆರ್‌.ಅಶೋಕ ಆಗ್ರಹಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com