ಬೆಂಗಳೂರು: ಕನಕಪುರ, ರಾಮನಗರದಲ್ಲಿ ಕಾಡಾನೆ ಹಾವಳಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಬೆಳೆ ಹಾನಿಯಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಫೋಸ್ಟ್ ಮಾಡಿದ್ದು, ಕಾಡಾನೆಯಿಂದ ದಾಳಿಯಿಂದ ಒಬ್ಬ ಮಹಿಳೆ ಸೇರಿದಂತೆ ಮೂರು ಜನ ರೈತರು ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು ಮೂವತ್ತಕ್ಕೂ ಹೆಚ್ಚು ಕಾಡಾನೆಗಳು ಕನಕಪುರ ಹಾಗೂ ರಾಮನಗರ ಸುತ್ತಮುತ್ತಲಿನ ಗ್ರಾಮಗಳ ಸಮೀಪ ಬೀಡು ಬಿಟ್ಟಿರುವ ಮಾಹಿತಿಯಿದ್ದು, ಕಾಡಂಚಿನಲ್ಲಿರುವ ಗ್ರಾಮಗಳ ಜನರು ಮನೆಯಿಂದ ಹೊರಬರಲಾರದಂಥ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಸಚಿವ ಈಶ್ವರ್ ಖಂಡ್ರೆ ಈ ಕೂಡಲೇ ಎಚ್ಚೆತ್ತುಕೊಂಡು ಆನೆ ಸೆರೆ ಕಾರ್ಯಾಚರಣೆಗೆ ಆದೇಶ ನೀಡಿ ರೈತರ ಜೀವ ರಕ್ಷಣೆ ಮಾಡಬೇಕು. ಹಾಗೆಯೇ ಕಾಡಾನೆ ದಾಳಿಯಿಂದ ಬೆಳೆ ನಾಶವಾಗಿ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸುವುದಾಗಿ ತಿಳಿಸಿದ್ದಾರೆ.
Advertisement