ಬೆಂಗಳೂರು: ಮಂಡ್ಯದ ಕೆರೆಗೋಡುವಿನಲ್ಲಿ ಹನುಮ ಧ್ವಜ ವಿಚಾರವನ್ನಿಟ್ಟುಕೊಂಡು ಬಿಜೆಪಿ ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಂಡ್ಯದಲ್ಲಿ ರಾಜಕೀಯ ನೆಲೆ ಇಲ್ಲದೆ ಬಿಜೆಪಿ ತನ್ನ ಅಸ್ತಿತ್ವ ಕಂಡುಕೊಳ್ಳಲು ಹನುಮ ಧ್ವಜ ವಿಚಾರ ಇಟ್ಟುಕೊಂಡು ಜನರನ್ನು ಎತ್ತಿಕಟ್ಟಲು ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
ಬಿಜೆಪಿ ನಾಯಕರಿಂದ ಸಮಾಜದಲ್ಲಿ ಅಶಾಂತಿ: ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ. ದೇಶದ ಕಾನೂನಿಗೆ ನಾವು ಗೌರವ ಕೊಡಬೇಕು. ಮಂಡ್ಯದಲ್ಲಿ ಬಿಜೆಪಿ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಹಾಗಾಗಿ ಜೆಡಿಎಸ್ ಜತೆ ಸೇರಿಕೊಂಡು ರಾಜಕೀಯ ನೆಲೆ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಇದರಿಂದ ಏನೂ ಲಾಭ ಆಗಲ್ಲ ಮಂಡ್ಯದ ಜನಕ್ಕೆ ಎಲ್ಲವೂ ಗೊತ್ತಿದೆ. ಮಂಡ್ಯದ ಜನ ಜಾತ್ಯಾತೀತರು ಹಾಗೂ ಸಹಿಷ್ಣುತೆ ಉಳ್ಳವರು ಇಂತಹ ವಿಚಾರಕ್ಕೆ ಸೊಪ್ಪು ಹಾಕಲ್ಲ ಎಂದರು.
ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿಯಲ್ಲ. ನಾವೆಲ್ಲರೂ ಮೊದಲು ಭಾರತೀಯರು. ನಾವೆಲ್ಲರೂ ಹಿಂದೂಗಳಲ್ಲವೇ, ನಮ್ಮ ಹಳ್ಳಿಯಲ್ಲಿರುವ ಜನ ಹಿಂದೂಗಳಲ್ಲವೆ. ಸಮಾಜದಲ್ಲಿ ಅಶಾಂತಿ ಮೂಡಿಸಲು ಬಿಜೆಪಿ ಪ್ರಯತ್ನ ನಡೆಸಿದೆ. ಶಾಂತಿ ಸ್ಥಾಪನೆ ನಮ್ಮ ಆದ್ಯತೆ ಎಂದರು.
Advertisement