
ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA) ದಿಂದ 50:50 ಅನುಪಾತದಲ್ಲಿ ಬದಲಿ ಭೂಮಿ ಪಡೆದವರ ಪಟ್ಟಿಯನ್ನು ಜಾಹೀರಾತು ಮೂಲಕ ಬಹಿರಂಗಪಡಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಹಗರಣದಲ್ಲಿ ಇರುವ ಭ್ರಷ್ಟರ ಪತ್ತೆಗಾಗಿ ತನಿಖೆ ನಡೆಯುತ್ತಿದೆ. ಹಗರಣ ಸಂಪೂರ್ಣ ಬಯಲಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದರು.
ಮುಡಾ ಪ್ರಕರಣದ ತನಿಖೆ ಸಿಬಿಐಗೆ ವಹಿಸುವಂತೆ ಒತ್ತಡ ಹಾಕುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಇಲಿ ಹೋಯ್ತು, ಕೋತಿ ಹೋಯ್ತು ಅಂದ್ರೂ ಸಿಬಿಐಗೆ ಕೊಡಿ ಅಂದ್ರೆ ಹೇಗೆ, ನಮ್ಮ ಅಧಿಕಾರಿಗಳು ತನಿಖೆ ಮಾಡಲು ಸಮರ್ಥರಿದ್ದಾರೆ. ಬಿಜೆಪಿ ಅವಧಿಯಲ್ಲಿ ಎಷ್ಟು ಪ್ರಕರಣ ಸಿಬಿಐಗೆ ಕೊಟ್ಟಿದ್ದಾರೆ ಹೇಳಿ ಎಂದರು.
ಮುಖ್ಯಮಂತ್ರಿಗಳ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರು ಕಾನೂನಾತ್ಮಕವಾಗಿ ಜಮೀನು ಖರೀದಿಸಿದ್ದರು. 2010ರಲ್ಲಿ ಅರಿಶಿನ, ಕುಂಕಮ ಜೊತೆಗೆ ಗಿಫ್ಟ್ ಅಂತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಮ್ಮ ಅವರಿಗೆ ಭೂಮಿ ನೀಡಿದ್ದಾರೆ. ಪಾರ್ವತಮ್ಮ ಅವರು ಕಾನೂನಾತ್ಮಾಕವಾಗಿ ಜಮೀನು ಪಡೆದಿದ್ದಾರೆ ಎಂದರು.
SC, ST ಜಮೀನು ಹಸ್ತಾಂತರ ನಿಷೇಧ ಕಾಯ್ದೆ ಮರು ಜಾರಿ: ಹಿಂದೆ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಪರಭಾರೆ ನಿಷೇಧ ಕಾಯ್ದೆ ರದ್ದಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜಮೀನು ಬೇರೆಯವರಿಗೆ ಹೋಗಬಾರದೆಂದು ಕಾಯ್ದೆ ಮರು ಜಾರಿ ಮಾಡಲಾಗಿದೆ. ಹಿಂದಿನ ಪ್ರಕರಣಗಳೂ ಅನ್ವಯವಾಗುವಂತೆ ಜಾರಿ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರ ಪರ ಇದೆ ಎಂದರು.
ಆಷಾಢ ಶುಕ್ರವಾರದ ದರ್ಶನಕ್ಕೆ ಯಾವುದೇ ಪಾಸ್ ಇಲ್ಲ: ಮುಂದಿನ ವಾರದಿಂದ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಮೈಸೂರಿನ ಚಾಮುಂಡಿಬೆಟ್ಟ ದರ್ಶನಕ್ಕೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಆಷಾಢ ಶುಕ್ರವಾರದ ದರ್ಶನಕ್ಕೆ ಯಾವುದೇ ಪಾಸ್ ಇಲ್ಲ. ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧಿಸಲಾಗಿದೆ. ಕಳೆದ ಬಾರಿಯಂತೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದರು.
Advertisement