
ಬೆಂಗಳೂರು: ರಾಜ್ಯದ ಬಡತನ ನಿರ್ಮೂಲನೆ ಹಾಗೂ ಬಡಜನರ ಶ್ರೇಯೋಭಿವೃದ್ಧಿಗಾಗಿ ' ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮಂಗಳವಾರ 'ಕರ್ನಾಟಕ ಅಂತರ್ಗತ ಜೀವನೋಪಾಯ ಕಾರ್ಯಕ್ರಮ'ವನ್ನು ಅನುಷ್ಠಾನಗೊಳಿಸಿದೆ.
ರಾಷ್ಟ್ರೀಯ ಜೀವನೋಪಾಯ ಮಿಷನ್, ಕರ್ನಾಟಕ ಮತ್ತು ಬಡತನ ನಿರ್ಮೂಲ ಕಾರ್ಯಕ್ರಮಗಳಿಗೆ ಹೆಸರುವಾಸಿಯಾದ ಜಾಗತಿಕ ಸಂಸ್ಥೆಯಾದ ಬ್ರ್ಯಾಕ್ (BRAC) ಇಂಟರ್ನ್ಯಾಷನಲ್ ನಡುವೆ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ತಿಳುವಳಿಕೆ ಪತ್ರಕ್ಕೆ ಮಂಗಳವಾರ ವಿಕಾಸ ಸೌಧದಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್ ಅವರ ಸಮ್ಮುಖದಲ್ಲಿ ಸಹಿ ಹಾಕಲಾಯಿತು.
ಈ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಕುರಿತು ಮಾತನಾಡಿದ ಶರಣ ಪ್ರಕಾಶ್ ಪಾಟೀಲ್, 23 ಕೋಟಿ ಬಜೆಟ್ನಲ್ಲಿ 4,000 ಕುಟುಂಬಗಳನ್ನು ಒಳಗೊಳ್ಳುವ ಗುರಿಯನ್ನು ಹೊಂದಿರುವ ಈ ಕೆಐಎಲ್ಪಿ ಕಾರ್ಯಕ್ರಮವು ಅತ್ಯಂತ ಬಡ ಕುಟುಂಬಗಳಿಗೆ ಸುಸ್ಥಿರ, ಲಿಂಗ-ಸಮಾನ ಮತ್ತು ಹವಾಮಾನ-ನಿರೋಧಕ ಜೀವನೋಪಾಯವನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದ 10 ಜಿಲ್ಲೆಗಳ 20 ತಾಲೂಕುಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಕಳಪೆ ಸ್ಥಾನ ಪಡೆದಿದೆ. ಇದು ಅತ್ಯಂತ ದುರ್ಬಲ ಗುಂಪುಗಳನ್ನು, ವಿಶೇಷವಾಗಿ ಮಹಿಳೆಯರನ್ನು ಗುರಿಯಾಗಿಸುತ್ತದೆ ಮತ್ತು ಆತ್ಮವಿಶ್ವಾಸ, ಕೌಶಲ್ಯ ತರಬೇತಿ, ಜೀವನೋಪಾಯವನ್ನು ಹೆಚ್ಚಿಸುವ, ಸಾಮಾಜಿಕ ಸೇರ್ಪಡೆಯನ್ನು ಉತ್ತೇಜಿಸುವ ಮತ್ತು ಸಾಮಥ್ರ್ಯ-ನಿರ್ಮಾಣ ವಿಧಾನದ ಮೂಲಕ ಆರ್ಥಿಕ ಸಮೃದ್ಧಿಯನ್ನು ಉತ್ತೇಜಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುತ್ತದೆ ಎಂದು ಹೇಳಿದರು.
ಈ ಯೋಜನೆಯು 2027ರ ವೇಳೆಗೆ 50,000 ಅತ್ಯಂತ ಬಡ ಕುಟುಂಬಗಳಿಗೆ ಮತ್ತು 2029ರ ವೇಳೆಗೆ 2,50,000 ಕುಟುಂಬಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲಿದೆ. ಬಡತನ, ಅಸಮಾನತೆಗಳು, ಪ್ರಾದೇಶಿಕ ಅಸಮಾನತೆಗಳು ಮತ್ತು ಜೀವನೋಪಾಯದ ಸಮಸ್ಯೆಗಳನ್ನು ಪರಿಹರಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಉಮಾ ಮಹದೇವನ್ ಮಾಹಿತಿ ನೀಡಿದರು.
ಫಲಾನುಭವಿಗಳ ಆಯ್ಕೆಯಲ್ಲಿ ಗ್ರಾಮ ಸಭೆಗಳು, ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟಗಳು ಮತ್ತು ಸ್ವ-ಸಹಾಯ ಗುಂಪುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರಾಯೋಗಿಕ ಹಂತದಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಬಾದಾಮಿ, ಬೀದರ್ ನ ಔರಾದ್, ಕಮಲನಗರ, ಕಲಬುರಗಿಯ ಕಾಳಗಿ ಮತ್ತು ಶಹಾಬಾದ, ರಾಯಚೂರಿನ ಮಸ್ಕಿ, ಸಿರವಾರ, ಯಾದಗಿರಿಯ ವಡಗೇರಾ, ಗುರುಮಿಟ್ಕಲ್, ಕೊಪ್ಪಳ ಜಿಲ್ಲೆಯ ಕನಕಗಿರಿ, ಗಂಗಾವತಿ, ತಾಳಿಕೋಟೆ, ಅಲ್ಮೇಲ್, ವಿಜಯಪುರ, ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹರಪನಹಳ್ಳಿ, ಕಂಪ್ಲಿ ಬಳ್ಳಾರಿ ಜಿಲ್ಲೆಯ ಕುರುಗೋಡು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮತ್ತು ಯಳಂದೂರು ಸೇರಿದಂತೆ 20 ತಾಲೂಕುಗಳನ್ನು ಪ್ರಾಯೋಗಿಕ ಹಂತದಲ್ಲಿ ಅನುಷ್ಟಾನ ಮಾಡುವುದಾಗಿ ಅವರು ತಿಳಿಸಿದರು.
Advertisement