
ಬೆಂಗಳೂರು: ಭಾರತದ ನಿಯಂತ್ರಕ ಮತ್ತು ಆಡಿಟರ್ ಜನರಲ್ ಅವರ ರಾಜ್ಯ ಹಣಕಾಸು ಆಡಿಟ್ ವರದಿ ಕರ್ನಾಟಕ ಸರ್ಕಾರದ ಇಲಾಖೆಗಳಲ್ಲಿ ಅನುದಾನ, ಹಣವನ್ನು ಅಕ್ರಮವಾಗಿ ಬಳಕೆ ಮಾಡಿರುವ 61 ಪ್ರಕರಣಗಳನ್ನು ಪತ್ತೆ ಮಾಡಿದೆ.
ಲೆಕ್ಕ ಪರಿಶೋಧಕರ ವರದಿಯ ಪ್ರಕಾರ, 2022-23 ರ ಅಂತ್ಯದ ವೇಳೆಗೆ ಸರ್ಕಾರದ 42.88 ಕೋಟಿ ರೂಪಾಯಿಗಳು ಬಾಕಿ ಉಳಿದಿದ್ದು, ಈ ಸಂಬಂಧ ಸರ್ಕಾರದ ಅಂತಿಮ ಕ್ರಮ ಬಾಕಿ ಇದೆ ಎಂದು ಹೇಳಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಅತಿ ಹೆಚ್ಚು ಅಕ್ರಮ ನಡೆದಿದ್ದು, 10 ಪ್ರಕರಣಗಳು ವರದಿಯಾಗಿವೆ. ಈ ನಂತರದ ಸ್ಥಾನದಲ್ಲಿ ಕರ್ನಾಟಕ ರಾಜ್ಯ ತೆಂಗಿನ ನಾರಿನ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿರುವ 8 ಪ್ರಕರಣಗಳಿದ್ದರೆ, ಗೃಹ ಇಲಾಖೆಯಲ್ಲಿ 6, ಬೆಸ್ಕಾಂ ನಲ್ಲಿ 5, ಗೆಸ್ಕಾಂ ಮತ್ತು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ದಲ್ಲಿ ತಲಾ 4 ಪ್ರಕರಣಗಳು ವರದಿಯಾಗಿವೆ.
ಲೆಕ್ಕ ಪರಿಶೋಧಕರ ವರದಿಯ ಪ್ರಕಾರ, ಹಣಕಾಸು ಇಲಾಖೆಯ ಸೂಚನೆಗಳ ಹೊರತಾಗಿಯೂ ಕೆಲವು ಇಲಾಖೆಗಳು/ಕಂಪನಿಗಳಲ್ಲಿ ಸರ್ಕಾರದಿಂದ ಅನುದಾನದ ಮೇಲೆ ಗಳಿಸಿದ ಬಡ್ಡಿಯನ್ನು ಸರ್ಕಾರಕ್ಕೆ ರವಾನೆ ಮಾಡಲಾಗಿಲ್ಲ ಎಂದು ಅದು ಗಮನಿಸಿದೆ.
ಇದು ರಾಜ್ಯ ಸರ್ಕಾರದಲ್ಲಿ ಅಸಮರ್ಪಕ ಆಂತರಿಕ ನಿಯಂತ್ರಣ ಮತ್ತು ಮೇಲ್ವಿಚಾರಣಾ ಕಾರ್ಯವಿಧಾನಗಳನ್ನು ಸೂಚಿಸುತ್ತದೆ. ಇದಲ್ಲದೆ, ಕಳ್ಳತನ, ದುರುಪಯೋಗ, ಸರ್ಕಾರಿ ಸಾಮಗ್ರಿಗಳ ನಷ್ಟ ಮತ್ತು ಹಣದ ದುರುಪಯೋಗದ 15 ಪ್ರಕರಣಗಳಲ್ಲಿ ಇಲಾಖಾ ಕ್ರಮವು 25 ವರ್ಷಗಳಿಂದ ಬಾಕಿ ಉಳಿದಿದೆ ಎಂದು ಲೆಕ್ಕ ಪರಿಶೋಧಕರ ವರದಿ ಹೇಳಿದೆ.
ಸರ್ಕಾರದಿಂದ ಗಣನೀಯವಾಗಿ ಹಣಕಾಸು ಒದಗಿಸುವ ಸಂಸ್ಥೆಗಳ ಲೆಕ್ಕಪರಿಶೋಧನೆಗಾಗಿ ಮಾಹಿತಿ ನೀಡುವಂತೆ ಹಣಕಾಸು ಇಲಾಖೆಯು ಆಡಳಿತಾತ್ಮಕ ಇಲಾಖೆಗಳಿಗೆ ಸೂಚನೆಗಳನ್ನು ನೀಡಿದ್ದರೂ, ಅಗತ್ಯ ಮಾಹಿತಿಯನ್ನು ಒದಗಿಸದ ಸಂಸ್ಥೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಸಿಎಜಿ ಹೇಳಿದೆ.
73% ಸರ್ಕಾರಿ ಶಾಲಾ ಶೌಚಾಲಯಗಳು ಅಂಗವಿಕಲರ ಸ್ನೇಹಿಯಾಗಿಲ್ಲ: ಸಿಎಜಿ
ವಿಕಲಚೇತನರ ಹಕ್ಕುಗಳ ಕಾಯಿದೆಯ ಅನುಷ್ಠಾನಕ್ಕೆ ಸಂಬಂಧಿಸಿದ ವರದಿಯು ಕರ್ನಾಟಕದ ಶೇ.73 ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಸ್ನೇಹಿಯಾಗಿಲ್ಲದ ಶೌಚಾಲಯಗಳನ್ನು ಹೊಂದಿದೆ ಎಂದು ಆಕ್ಷೇಪ ಎತ್ತಿದೆ.
20,366 ಶಾಲೆಗಳಲ್ಲಿ ಇಂತಹ ವಿದ್ಯಾರ್ಥಿಗಳಿಗೆ ರ್ಯಾಂಪ್ ಇಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಗಳೂರು ನಗರ, ಕೋಲಾರ, ಬೆಳಗಾವಿ, ಹಾಸನ ಮತ್ತು ಕಲಬುರ್ಗಿಯ ಶಾಲೆಗಳಲ್ಲಿ ಕಳಪೆ ಸೌಲಭ್ಯಗಳಿದ್ದರೆ, ದಕ್ಷಿಣ ಕನ್ನಡ ಮತ್ತು ಕೊಡಗಿನ ಶಾಲೆಗಳಲ್ಲಿ ಉತ್ತಮ ಸೌಲಭ್ಯಗಳಿವೆ ಎಂದು ವರದಿ ಹೇಳಿದೆ.
ಕಾಯಿದೆಯ ಸೆಕ್ಷನ್ 32 ರ ಪ್ರಕಾರ, ಸರ್ಕಾರದಿಂದ ಸಹಾಯ ಪಡೆಯುವ ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳು ವಿಕಲಾಂಗ ವ್ಯಕ್ತಿಗಳಿಗೆ ಕನಿಷ್ಟ ಶೇ.5 ಸೀಟುಗಳನ್ನು ಮೀಸಲಿಡಬೇಕು ಎಂದು ಸಿಎಜಿ ಹೇಳಿದೆ. ಆದರೆ ಸರ್ಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಲಭ್ಯವಿರುವ ಒಟ್ಟು ಸೀಟುಗಳ ಮಾಹಿತಿಯನ್ನು ಶಿಕ್ಷಣ ಇಲಾಖೆ ನಿರ್ವಹಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಿಕಲಚೇತನರಿಗಾಗಿ 12ನೇ ತರಗತಿವರೆಗೆ ಉನ್ನತ ಮಾಧ್ಯಮಿಕ ಶಾಲೆಗಳನ್ನು ಆರಂಭಿಸಲು ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಗಮನಿಸಿದೆ.
Advertisement