
ಡೆಹ್ರಾಡೂನ್/ಬೆಂಗಳೂರು: ಉತ್ತರಾಖಂಡದಲ್ಲಿ ಹವಾಮಾನ ವೈಪರಿತ್ಯ ಹಿನ್ನೆಲೆ ಚಾರಣಕ್ಕೆ ಹೋಗಿದ್ದ 9 ಚಾರಣಿಗರು ಸಾವನ್ನಪ್ಪಿದ್ದಾರೆ. ಚಾರಣಕ್ಕೆ ಹೋಗಿದ್ದ 20 ಕನ್ನಡಿಗರ ಪೈಕಿ 9 ಸಾವನ್ನಪ್ಪಿದ್ದಾರೆ. 9 ಮಂದಿ ಕನ್ನಡಿಗರ ಮೃತದೇಹವನ್ನು ರಾಜ್ಯಕ್ಕೆ ತರಲು ರಾಜ್ಯ ಸರ್ಕಾರದ ಶತಪ್ರಯತ್ನ ನಡೆಸಿದೆ.
ಕನ್ನಡಿಗರ ರಕ್ಷಣೆ, ಮೃತದೇಹ ತರಲು ಸಚಿವ ಕೃಷ್ಣಬೈರೇಗೌಡ ಅವರು ಉತ್ತರಾಖಂಡಕ್ಕೆ ಭೇಟಿ ನೀಡಿದ್ದು, ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ಶ್ರೀಮತಿ ರಾಧಾ ರಾತುರಿ ಮತ್ತು ವಿಪತ್ತು ನಿರ್ವಹಣೆಯ ಕಾರ್ಯದರ್ಶಿ ಶ್ರೀ ರಂಜಿತ್ ಸಿನ್ಹಾ ಅವರನ್ನು ಭೇಟಿ ಮಾಡಿ, ಮಾತುಕತೆ ನಡೆಸಿದ್ದಾರೆ. ಭೇಟಿ ವೇಳೆ ವಿಪತ್ತಿನ ಸಮಯದಲ್ಲಿ ತ್ವರಿತ ಪ್ರತಿಕ್ರಿಯೆ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ.
ಅಲ್ಲದೆ, ಮೃತದೇಹಗಳನ್ನು ಬೆಂಗಳೂರಿಗೆ ಸಾಗಿಸಲು ವಿಮಾನದ ವ್ಯವಸ್ಥೆ ಮಾಡುವಂತೆ ಮಾಡಿಕೊಂಡಿದ್ದು, ಇದಕ್ಕೆ ಉತ್ತರಾಖಂಡ ಸರ್ಕಾರ ಸ್ಪಂದಿಸಿದ್ದು, ಶೀಘ್ರದಲ್ಲಿಯಲ್ಲಿ ವ್ಯವಸ್ಥೆ ಮಾಡುವ ಭರವಸೆ ನೀಡಿದೆ.
ಇದರಂತೆ ಎಲ್ಲಾ 9 ಮೃತದೇಹಗಳು ಮಧ್ಯಾಹ್ನ 12 ಗಂಟೆಗೆ ಡೆಹ್ರಾಡೂನ್ ತಲುಪುವ ಸಾಧ್ಯತೆಯಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪರೀಕ್ಷೆ ಬಳಿ ಎಲ್ಲಾ ಮೃತದೇಹಗಳು ವಿಮಾನ ಮೂಲಕ ಶೀಘ್ರದಲ್ಲೇ ಬೆಂಗಳೂರು ತಲುಪಲಿವೆ ಎಂದು ತಿಳಿದುಬಂದಿದೆ.
ಕುಮಾರಸ್ವಾಮಿ ಸಂತಾಪ
ಈ ನಡುವೆ ದುರಂತಕ್ಕೆ ಸಂಸದ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ತೀವ್ರ ಸಂತಾಪ ಸೂಚಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಉತ್ತರಾಖಂಡ ರಾಜ್ಯದ ಸಹಸ್ತ್ರ ತಾಲ್ ಚಾರಣಕ್ಕೆ ರಾಜ್ಯದ 22 ಚಾರಣಿಗರು ತೆರಳಿದ್ದರು. ಹವಾಮಾನ ವೈಪರೀತ್ಯಕ್ಕೆ ಸಿಲುಕಿ, ಅವರಲ್ಲಿ 9 ಚಾರಣಿಗರು ಸಾವನ್ನಪ್ಪಿರುವ ಘಟನೆ ನನಗೆ ತೀವ್ರ ಆಘಾತ ಉಂಟು ಮಾಡಿದೆ. ಸಾಹಸ ಪ್ರವೃತ್ತಿಯ ಚಾರಣಿಗರು ಇಂಥ ಅಪಾಯದ ಸ್ಥಿತಿಗೆ ಸಿಲುಕಿದ್ದು ದುರ್ದೈವದ ಸಂಗತಿ. ಇನ್ನೂ ಹಲವರು ಕಣ್ಮರೆಯಾಗಿದ್ದು, ಅವರೆಲ್ಲರೂ ಕ್ಷೇಮವಾಗಿ ಮರಳಿಬರಲಿ ಎಂದು ಪ್ರಾರ್ಥಿಸುತ್ತೇನೆ. ಜೀವ ಕಳೆದುಕೊಂಡ ಎಲ್ಲಾ ಚಾರಣಿಗರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಅವರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.
Advertisement