
ಬೆಂಗಳೂರು: ರೇಣುಕಾಸ್ವಾಮಿ ಎಂಬ ವ್ಯಕ್ತಿಯ ಹಲ್ಲೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ 13 ಮಂದಿ ಬಂಧನವಾಗಿದ್ದು, ಈ ವಿಚಾರ ರಾಜ್ಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.
ಕಳೆದ ಭಾನುವಾರ ಕಾಮಾಕ್ಷಿಪಾಳ್ಯದ ನಾಲೆ ಬಳಿಯಲ್ಲಿ ಪತ್ತೆಯಾಗಿದ್ದ ರೇಣುಕಾಸ್ವಾಮಿ ಎನ್ನುವವರ ಶವವನ್ನು ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಶಾಕಿಂಗ್ ವಿಚಾರಗಳು ಬಹಿರಂಗಗೊಂಡಿದೆ ಎಂದು ಹೇಳಲಾಗಿದೆ.
ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬಹಿರಂಗವಾಗಬೇಕಿದ್ದು, ರೇಣುಕಾಸ್ವಾಮಿಯ ಮೃತದೇಹದ ಮೇಲೆ ತೀವ್ರತರವಾಗಿ ಹಲ್ಲೆ ಮಾಡಿದ ಹಾಗೂ ಸಿಗರೇಟಿನಿಂದ ಸುಟ್ಟ ಗಾಯಗಳು ಪತ್ತೆಯಾಗಿದ್ದು, ಭಾರೀ ಕ್ರೌರ್ಯ ಎಸಗಿರುವುದು ಕಂಡು ಬಂದಿದೆ.
ರೇಣುಕಾಸ್ವಾಮಿಯವರ ಶವದ ಮೇಲೆ ಅತೀವ್ರವಾದ ಕ್ರೌರ್ಯ ಮರೆದಿರುವುದು ಪತ್ತೆಯಾಗಿದ್ದು, ಮೂಗು, ಬಾಯಿ, ದವಡೆ ಕತ್ತರಿಸಿ ವಿಕೃತಿ ಮೆರೆಯಲಾಗಿದೆ. ಕೈ ಹಾಗೂ ಕಾಲಿನ ಮೇಲೆ ಸಿಗರೇಟಿನಿಂದ ಸುಟ್ಟ ಗಾಯಗಳು ಕಂಡುಬಂದಿದ್ದು, ಬೆನ್ನು ಸೇರಿದಂತೆ ದೇಹದ ತುಂಬೆಲ್ಲಾ ದೊಡ್ಡ ಪ್ರಮಾಣದ ಗಾಯಗಳು ಪತ್ತೆಯಾಗಿವೆ. ರಾಡು ಮತ್ತು ಕಟ್ಟಿಗೆಯಿಂದ, ಮರದ ಸಲಾಕೆಯಿಂದ ಹಲ್ಲೆ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಇನ್ನು ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ, ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದ್ದು, ಚಿತ್ರದುರ್ಗದ ಜೋಗಿ ಮಟ್ಟಿ ರಸ್ತೆಯ ರುದ್ರಭೂಮಿಯಲ್ಲಿ ವೀರಶೈವ ಸಂಪ್ರದಾಯದಂತೆ ಕುಟುಂಬಸ್ಥರು ನಿನ್ನೆ ರಾತ್ರಿಯೇ ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.
Advertisement