ಚಿತ್ರದುರ್ಗ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅನುಕುಮಾರ್ ಅವರ ತಂದೆ ಚಂದ್ರಣ್ಣ ಅವರ ಅಂತ್ಯ ಸಂಸ್ಕಾರವನ್ನು ಇಲ್ಲಿನ ಹೊಳಲ್ಕೆರೆ ರಸ್ತೆಯ ಕನಕ ವೃತ್ತದ ಬಳಿ ಇರುವ ರುದ್ರಭೂಮಿಯಲ್ಲಿ ಶನಿವಾರ ತಡರಾತ್ರಿ ನಡೆಸಲಾಯಿತು.
ಕೊಲೆ ಪ್ರಕರಣದ ಏಳನೇ ಆರೋಪಿಯಾಗಿರುವ ಅನುಕುಮಾರ್ ಅಂತ್ಯಕ್ರಿಯೆಗೆ ನ್ಯಾಯಾಲಯದಿಂದ ಅನುಮತಿ ಪಡೆದು ಬಂದ ಕೂಡಲೇ ಬೆಂಗಳೂರು ನಗರ ಪೊಲೀಸರು ಆತನ ಮನೆಗೆ ಕರೆದುಕೊಂಡು ಹೋದರು.
ತಂದೆಯ ಶವವನ್ನು ನೋಡಿದ ಆರೋಪಿ ಅನು ಕುಸಿದು ಬಿದ್ದು ಅಳಲು ಆರಂಭಿಸಿದ್ದು, ಸ್ವಲ್ಪ ಕಾಲ ತಂದೆಯ ಮೃತದೇಹದ ಪಕ್ಕ ಕುಳಿತಿದ್ದನು, ಅನುಕುಮಾರ್ ಸ್ಥಿತಿ ನೋಡಿ ಕುಟುಂಬಸ್ಥರು, ಮುಖ್ಯವಾಗಿ ತಾಯಿ ಜಯಮ್ಮ ಕೂಡ ನಲುಗಿ ಹೋದರು. ಮಗನನ್ನು ತಬ್ಬಿ ಅಳುತ್ತಾ ಅಸಹಾಯಕತೆ ವ್ಯಕ್ತಪಡಿಸಿದರು. ಬಳಿಕ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಕ್ಕೆ ಕೊಂಡೊಯ್ಯಲಾಯಿತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪುತ್ರ ಅನುಕುಮಾರ್ ಬಂಧನದ ಸುದ್ದಿ ಕೇಳಿ ಕೇಳುತ್ತಲೇ ಚಂದ್ರಣ್ಣ ಅವರು ಕುಸಿದುಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ತೀವ್ರ ಹೃದಯಾಘಾತದಿಂದ ಅವರು ಮೃತಪಟ್ಟಿದ್ದರು ಎಂದು ವೈದ್ಯರು ಹೇಳಿದ್ದರು.
ಈ ನಡುವೆ ಪೊಲೀಸರು ಇತರ ಮೂವರು ಆರೋಪಿಗಳೊಂದಿಗೆ (ರಘು ಅಲಿಯಾಸ್ ರಾಘವೇಂದ್ರ, ಜಗದೀಶ್ ಅಲಿಯಾಸ್ ಜಗ್ಗು ಮತ್ತು ಕಾರು ಚಾಲಕ ರವಿ) ಚಿತ್ರದುರ್ಗಕ್ಕೆ ಭೇಟಿ ನೀಡಿ, ಪೊಲೀಸರು ಸ್ಥಳ ಮಹಜರು ನಡೆಸಿದರು.
Advertisement