ಬಸ್ ದರ ಏರಿಕೆ ಅನಿವಾರ್ಯ- ಸಾರಿಗೆ ಸಚಿವ; ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಆತ್ಮಹತ್ಯೆ; ಹಾಸನದಲ್ಲಿ ಫೈರಿಂಗ್: 2 ಸಾವು; ಇವು ಇಂದಿನ ಪ್ರಮುಖ ಸುದ್ದಿಗಳು-20-06-2024

File pic
ಸಾಂಕೇತಿಕ ಚಿತ್ರonline desk

1. ದರ್ಶನ್ ಗೆ ಇನ್ನೂ 2 ದಿನ ಪೊಲೀಸ್ ಕಸ್ಟಡಿ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಇನ್ನೂ 3 ಆರೋಪಿಗಳ ಪೊಲೀಸ್ ಕಸ್ಟಡಿಯನ್ನು 2 ದಿನಗಳಿಗೆ ವಿಸ್ತರಿಸಿ ಬೆಂಗಳೂರು ಕೋರ್ಟ್ ಆದೇಶ ಪ್ರಕಟಿಸಿದೆ. ಪ್ರಕರಣದ 2ನೇ ಆರೋಪಿ ಪವಿತ್ರ ಗೌಡ ಸೇರಿ ಇನ್ನಿತರ 13 ಆರೋಪಿಗಳನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಪ್ರಕರಣದಲ್ಲಿ ಈ ವರೆಗೂ ಒಟ್ಟು 17 ಆರೋಪಿಗಳನ್ನು ಬಂಧಿಸಲಾಗಿದೆ.

2. ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ 7ನೇ ವೇತನ ಆಯೋಗದ ಶಿಫಾರಸು ಶೀಘ್ರವೇ ಜಾರಿ ಸಾಧ್ಯತೆ

ರಾಜ್ಯ ಸರ್ಕಾರಿ ನೌಕರರ ಬಹುನಿರೀಕ್ಷಿತ 7ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇಂದು ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. 7ನೇ ವೇತನ ಆಯೋಗದ‌ ಶಿಫಾರಸು ಜಾರಿಗೊಳಿಸುವ ಅಧಿಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಲಾಗಿದೆ. ನೌಕರರ ವೇತನವನ್ನು ಶೇ.25ರಷ್ಟು ಹೆಚ್ಚಳ ಮಾಡುವಂತೆ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಸಲಹೆ ನೀಡಿದ್ದಾರೆ. ವೇತನ ಶೇ.27ರಷ್ಟು ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಲವು ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ರಾಜ್ಯ ಸರ್ಕಾರ ಶೀಘ್ರದಲ್ಲೇ ಅಧಿಕೃತ ನಿರ್ಧಾರ ಪ್ರಕಟಿಸುವ ಸಾಧ್ಯತೆಗಳಿವೆ.

3. ಹಾಸನದಲ್ಲಿ ಫೈರಿಂಗ್: 2 ಸಾವು

ಹಾಸನದ ಹೊಯ್ಸಳ‌ ನಗರ ಬಡಾವಣೆಯಲ್ಲಿ ಹಾಡಹಗಲೇ ಫೈರಿಂಗ್ ನಡೆದಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದರೆ, ಮತ್ತೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶರಫತ್ ಅಲಿ ಮತ್ತು ಆಸಿಫ್ ಮೃತ ವ್ಯಕ್ತಿಗಳಾಗಿದ್ದಾರೆ. ಶುಂಠಿ ವ್ಯಾಪಾರಿ ಶರಫತ್ ಅಲಿ ಮತ್ತು ರಿಯಲ್ ಎಸ್ಟೇಟ್ ಮಾಲೀಕ ಆಸಿಫ್ ಅಲಿ ಕಾರಿನಲ್ಲಿ ಬಂದು ನಿವೇಶನದ ಮುಂದೆ ಜಮೀನು ಮತ್ತು ಹಣಕಾಸಿನ ವಿಚಾರವಾಗಿ ಚರ್ಚಿಸಿದರು. ಜಮೀನು ಸಮಸ್ಯೆ ಕುರಿತು ಚರ್ಚೆ ನಡೆಸುತ್ತಿದ್ದ ವೇಳೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಆಸಿಫ್ ಶರಫತ್ ಅಲಿ ಮೇಲೆ ಗುಂಡು ಹಾರಿಸಿ ಅದೇ ಆಯುಧದಿಂದ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶರಫತ್ ಅಲಿ ಮತ್ತು ಆಸಿಫ್ ಸ್ನೇಹಿತರಾಗಿದ್ದು, ಹಲವು ವ್ಯವಹಾರಗಳಲ್ಲಿ ಪಾಲುದಾರಿಕೆ ಹೊಂದಿದ್ದರು ಎಂದು ಹಾಸನದ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ.

4. ಪೆಟ್ರೋಲ್ ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿ ನಾಯಕರ ಪ್ರತಿಭಟನೆ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಬಿಜೆಪಿ ನಾಯಕರು ನಗರದಲ್ಲಿ ಪ್ರತಿಭಟನೆ ನಡೆಸಿದರು. ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಿಂದ ವಿಧಾನಸೌಧಕ್ಕೆ ಸೈಕಲ್ ಜಾಥಾ ಹೊರಟಿದ್ದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಸೈಕಲ್ ಜಾಥಾದ ಆರಂಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯ ಭಂಡತನದ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು. ಜನರಿಗೆ ಹೊರೆ ಆಗುವ ಈ ನಿರ್ಧಾರವನ್ನು ತಕ್ಷಣ ಕೈಬಿಡಬೇಕು. ಅಲ್ಲಿನವರೆಗೆ ಬಿಜೆಪಿ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.

5. ಬಸ್ ದರ ಏರಿಕೆ ಸುಳಿವು ನೀಡಿದ ಸಾರಿಗೆ ಸಚಿವ

ಪೆಟ್ರೋಲ್ ಡೀಸೆಲ್ ದರ ಏರಿಕೆಯ ಪರಿಣಾಮ ಸರ್ಕಾರಿ ಸಾರಿಗೆಯಲ್ಲಿ ಪ್ರಯಾಣಿಸುವವರಿಗೂ ತಟ್ಟಲಿದೆ. ಈ ಬಗ್ಗೆ ಸುಳಿವು ನೀಡಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆ ಅನಿವಾರ್ಯ ಎಂದು ಹೇಳಿದ್ದಾರೆ. ಬಿಎಂಟಿಸಿ ಬಸ್ ದರಗಳನ್ನು 2014ರಲ್ಲಿ ಮತ್ತು ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‌ಡಬ್ಲ್ಯುಕೆಆರ್‌ಟಿಸಿಯ ದರಗಳನ್ನು 2020ರಲ್ಲಿ ಪರಿಷ್ಕರಿಸಲಾಗಿದೆ. ಪರಿಷ್ಕರಣೆ ನಂತರ ಡೀಸೆಲ್ ಮತ್ತು ಬಿಡಿಭಾಗಗಳ ಬೆಲೆಗಳು ಏರಿಕೆಯಾಗಿವೆ. ಜತೆಗೆ ಸಿಬ್ಬಂದಿ ವೇತನವೂ ಹೆಚ್ಚಿದೆ ಎಂದು ಸಚಿವರು ತಿಳಿಸಿದ್ದಾರೆ.

6. ಹಜ್ ಯಾತ್ರೆಗೆ ತೆರಳಿದ್ದ ಇಬ್ಬರು Heat wave ನಿಂದ ಸಾವು!

Heat wave ನಿಂದಾಗಿ ಸೌದಿ ಅರೇಬಿಯಾದಲ್ಲಿ ಈ ವರ್ಷದ ಹಜ್ ಯಾತ್ರೆಗೆ ತೆರಳಿದ್ದವರ ಪೈಕಿ 68 ಮಂದಿ ಮೃತಪಟ್ಟಿದ್ದು, ಈ ಪೈಕಿ ಬೆಂಗಳೂರಿನ ಇಬ್ಬರು ಯಾತ್ರಾರ್ಥಿಗಳು ಇದ್ದಾರೆ. ಫ್ರೇಜರ್ ಟೌನ್ ನಿವಾಸಿಗಳಾದ ಕೌಸರ್ ರುಖ್ಸಾನಾ, ಅಬ್ದುಲ್ ಅನ್ಸಾರಿ ಮೃತ ವ್ಯಕ್ತಿಗಳಾಗಿದ್ದು, ನಿರ್ಜಲೀಕರಣ ತೀವ್ರ ಶಾಖಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಸರ್ಫರಾಜ್ ಖಾನ್ ತಿಳಿಸಿದ್ದಾರೆ.

7. ಭಾರತದ ಮಾಜಿ ಕ್ರಿಕೆಟಿಗ ಡೇವಿಡ್ ಜಾನ್ಸನ್ ಆತ್ಮಹತ್ಯೆ 

ಭಾರತದ ಮಾಜಿ ಕ್ರಿಕೆಟ್ ಆಟಗಾರ ಡೇವಿಡ್ ಜಾನ್ಸನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೊತ್ತನೂರು ಬಳಿ ಇರುವ ಅಪಾರ್ಟ್ಮೆಂಟ್ ನಿಂದ ಜಿಗಿದು ಡೇವಿಡ್ ಜಾನ್ಸನ್ ಸಾವನ್ನಪ್ಪಿದ್ದು ಆತ ಖಿನ್ನತೆಗೆ ಒಳಗಾಗಿದ್ದರು. ಡೇವಿಡ್ ಜಾನ್ಸನ್ 1996ರಲ್ಲಿ ಭಾರತ ಪರ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಅವರಿಗೆ ಭಾರತ ಪರ ಕೊನೆಯ ಪಂದ್ಯವಾಗಿತ್ತು. ಇದಾದ ಬಳಿಕ ಅವರಿಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com