
ಭಟ್ಕಳ: ಮಹಾರಾಷ್ಟ್ರದ ಪುಣೆಯಲ್ಲಿ ನಡೆಸಿದ ಉಗ್ರ ಚಟುವಟಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಭಟ್ಕಳ ನವಾಯತ ಕಾಲೋನಿಯ ಯುವಕನಿಗೆ ವಿಚಾರಣೆಗೆ ಹಾಜರಾಗುವಂತೆ ಮುಂಬೈ ಎಟಿಎಸ್ ತಂಡ ಆತನ ಮನೆಗೆ ನೋಟೀಸ್ ಅಂಟಿಸಿದೆ ಎಂದು ತಿಳಿದುಬಂದಿದೆ.
ಪುಣೆಯಲ್ಲಿ ನಡೆದ ಉಗ್ರ ಕೃತ್ಯದ ಆರೋಪಿಯಾಗಿರುವ ಕಬೀರ್ ಸುಲ್ತಾನ್, ಕಳೆದ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆಗೆ ಹಾಜರುಪಡಿಸುವಂತೆ ಮಹಾರಾಷ್ಟ್ರ ಕೋರ್ಟ್ ಸೂಚನೆ ಹಿನ್ನೆಲೆ ಎಟಿಎಸ್ ತಂಡ ಆಗಮಿಸಿದೆ ಎಂದು ವರದಿಗಳು ತಿಳಿಸಿವೆ.
ಮೂಲತಃ ಭಟ್ಕಳ ನವಾಯತ್ ಕಾಲೋನಿ ಹಾಜಿ ಮಂಜಿಲ್ ನಿವಾಸಿಯಾಗಿರುವ ಅಬ್ದುಲ್ ಕಾದಿರ್ ಸುಲ್ತಾನ ಅಲಿಯಾಸ್ ಮೌಲಾನಾ ಸುಲ್ತಾನ ಎನ್ನುವ ಶಂಕಿನ ಮೇಲೆ ಪುಣೆಯಲ್ಲಿ ಕಾನೂನು ಬಾಹಿರ ಕೃತ್ಯ ಎಸಗಿದ್ದಕ್ಕಾಗಿ ಕಲಂ 10 ಮತ್ತು 13 ರನ್ವಯ ಪ್ರಕರಣ ದಾಖಲಾಗಿದ್ದು, ಪುಣೆಯ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಜೂ.21 ಕ್ಕೆ ವಿಚಾರಣೆಗೆ ಇಡಲಾಗಿದ್ದು ಹಾಜರಾಗುವಂತೆ ನೋಟೀಸ್ ನಲ್ಲಿ ತಿಳಿಸಲಾಗಿದೆ.
ಭಟ್ಕಳದಲ್ಲಿ ಶೋಧ ನಡೆಸಿದ ತಂಡ ಅಂತಿಮವಾಗಿ ಆತನ ಮನೆಗೆ ನೋಟೀಸು ಅಂಟಿಸಿ ಹೋಗಿದ್ದಾಗಿ ತಿಳಿದು ಬಂದಿದ್ದು ಜೂನ್ 6 ನೇ ತಾರೀಕನ್ನು ನಮೂದಿಸಿರುವ ನೋಟೀಸ್ ಅಂಟಿಸಿದ್ದಾರೆ. ಭಟ್ಕಳಕ್ಕೆ ಮಹಾರಾಷ್ಟ್ರ ಎಟಿಎಸ್ ತಂಡ ಆತನ ಮನೆಯನ್ನು ಹುಡುಕಿಕೊಂಡು ಹೋಗಿದ್ದು ಆತ ಮನೆಯಲ್ಲಿ ಇಲ್ಲದ ಕಾರಣ ನೋಟೀಸು ಅಂಟಿಸಿ ಸಾರ್ವಜನಿಕವಾಗಿ ಜಾಹೀರ ಮಾಡಿ ತೆರಳಿದ್ದಾರೆ ಎನ್ನಲಾಗಿದೆ.
Advertisement