ರಾಯಚೂರಿನಲ್ಲಿ ಕನ್ನಡ ಮಾಧ್ಯಮ ಶಾಲೆ ಬಂದ್: ಆಕ್ರೋಶ
ರಾಯಚೂರು: ರಾಯಚೂರು ಸಮೀಪದ ಶಕ್ತಿನಗರದಲ್ಲಿರುವ ಡಿಎವಿ (ದಯಾನಂದ ಆಂಗ್ಲೋ ವೇದಿಕ್) ಕನ್ನಡ ಮಾಧ್ಯಮ ಶಾಲೆ ಬಂದ್ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಈ ಕ್ರಮಕ್ಕೆ ಕನ್ನಡ ಕ್ರಿಯಾ ಸಮಿತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳು ದಾಖಲಾತಿ ಪಡೆಯುತ್ತಿಲ್ಲ ಎಂದು ಕಾರಣ ನೀಡಿ ಶಾಲೆ ಬಂದ್ ಮಾಡುತ್ತಿರುವುದಾಗಿ ತಿಳಿದುಬಂದಿದೆ.
ಶಾಲೆಯಲ್ಲಿ 2012-13ನೇ ಶೈಕ್ಷಣಿಕ ವರ್ಷದವರೆಗೆ ಎಲ್'ಕೆಜಿಯಿಂದ 10ನೇ ತರಗತಿವರೆಗೆ ಒಟ್ಟು 12 ತರಗತಿಗಳು ಕನ್ನಡ ಮಾಧ್ಯಮದಲ್ಲಿದ್ದವು. ಆದರೆ, 2013-14ನೇ ಸಾಲಿನಿಂದ ಕನ್ನಡ ಮಾಧ್ಯಮ ತರಗತಿಗಳನ್ನು ಹಂತಹಂತವಾಗಿ ಮುಚ್ಚುತ್ತಾ ಬರಲಾಗಿದೆ. ಇದೀಗ ಶಾಲೆಯನ್ನೇ ಬಂದ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ನಡುವೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಾಧ್ಯಮಕ್ಕೆ ಶಾಲಾ ಮಾನ್ಯತೆಯನ್ನು ನವೀಕರಿಸಿ ಆದೇಶ ಹೊರಡಿಸಿದ್ದು, ಈ ಆದೇಶ ಬಗ್ಗೆ ಹಲವು ಪ್ರಶ್ನೆಗಳು ಮೂಡತೊಡಗಿವೆ.
ಏತನ್ಮಧ್ಯೆ ಡಿಎವಿ ಕನ್ನಡ ಮಾಧ್ಯಮ ಶಾಲೆ ಪುನರಾರಂಭಿಸುವಂತೆ ಜಿಲ್ಲಾ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಅವರು, ಕಲಬುರಗಿ ವಿಭಾಗದ ಶಿಕ್ಷಣ ಇಲಾಖೆ ಆಯುಕ್ತರಿಗೆ ಒತ್ತಾಯಿಸಿದ್ದಾರೆ.
ಕನ್ನಡ ಮಾಧ್ಯಮ ಶಾಲೆಯ ಬಗ್ಗೆ ಜಾಗೃತಿ ಮೂಡಿಸಿ, ಹೆಚ್ಚಿನ ವಿದ್ಯಾರ್ಥಿಗಳು ಪ್ರವೇಶ ಪಡೆಯುವಂತೆ ಮಾಡಿ ಶಾಲೆ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ