
ನವದೆಹಲಿ: ಭಾರತ ಮತ್ತು ಮಧ್ಯಪ್ರಾಚ್ಯದ ಶೇ. 80ರಷ್ಟು ಗಣಿತ ಶಿಕ್ಷಕರಿಗೆ ಅನುಪಾತ, ಬೀಜಗಣಿತ ಮುಂತಾದ ಮೂಲ ಸಂಗತಿಗಳೇ ಗೊತ್ತಿಲ್ಲ ಎಂಬ ವಿಷಯ ಬೆಂಗಳೂರು ಮೂಲದ ಶಿಕ್ಷಣ ಸಂಶೋಧನೆ ಮತ್ತು ಪರಿಹಾರ ಸಂಸ್ಥೆಯಾದ ಎಜುಕೇಷನಲ್ ಇನಿಶಿಯೇಟಿವ್ಸ್ (ಇಐ) ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ, ಯುಎಇ, ಒಮಾನ್, ಸೌದಿ ಅರೇಬಿಯಾದ 152 ಶಾಲೆಗಳಲ್ಲಿ 3ರಿಂದ 6ನೇ ತರಗತಿವರೆಗಿನ ಮಕ್ಕಳಿಗೆ ಗಣಿತ ಪಾಠ ಹೇಳುವ 1300 ಶಿಕ್ಷಕರನ್ನು ಸಂದರ್ಶಿಸಿ ಈ ಅಧ್ಯಯನ ವರದಿ ತಯಾರಿಸಲಾಗಿದೆ.
ಅಧ್ಯಯನ ವೇಳೆ ‘ಗಣಿತ ವಿಷಯಜ್ಞಾನ ಮಟ್ಟ -1 ಮೌಲ್ಯಮಾಪನ’ ಪರೀಕ್ಷೆಯನ್ನು 1,357 ಶಿಕ್ಷಕರು ತೆಗೆದುಕೊಂಡರು. ಆ ಪೈಕಿ ಶೇ. 80ರಷ್ಟು ಶಿಕ್ಷಕರು ಭಾರತೀಯರು, ಶೇ. 18ರಷ್ಟು ಯುಎಇಯವರು ಮತ್ತು ತಲಾ ಶೇ. 1ರಷ್ಟು ಒಮನ್ ಮತ್ತು ಸೌದಿ ಅರೇಬಿಯಾದವರಿದ್ದರು. ಅಧ್ಯಯನದ ಸಂದರ್ಭದಲ್ಲಿ ಶೇ. 75ರಷ್ಟು ಶಿಕ್ಷಕರು ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸಿದರಲ್ಲದೇ ಕೇವಲ ಅರ್ಧದಷ್ಟು ಪ್ರಶ್ನೆಗಳಿಗೆ ಮಾತ್ರ ಸರಿಯುತ್ತರ ನೀಡಿದರು.
ಪ್ರಮೇಯಗಳನ್ನು ಬಿಡಿಸಲು ಅವಶ್ಯವಿರುವ ಅನುಪಾತ, ಪ್ರಮಾಣಾನುಗುಣ ತರ್ಕ, ಬೀಜಗಣಿತದ ತರ್ಕ, ಅಂದಾಜು ಮುಂತಾದ ಮೂಲ ವಿಷಯಗಳ ಬಗ್ಗೆ ಶೇ. 80ರಷ್ಟು ಶಿಕ್ಷಕರು ಮಾತ್ರ ಸರಿಯಾದ ಉತ್ತರ ನೀಡಿದರು. ನಾಲ್ಕನೇ ತರಗತಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಶೇ.73.3ರಷ್ಟು ಶಿಕ್ಷಕರು ಮಾತ್ರ ಸರಿಯಾಗಿ ಉತ್ತರಿಸಿದರು. ಏಳನೇ ತರಗತಿಯ ಪಠ್ಯಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿದ ಶಿಕ್ಷಕರ ಸಂಖ್ಯೆ ಕೇವಲ ಶೇ. 36.7ರಷ್ಟಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ.
ದಶಮಾಂಶ ಚಿಹ್ನೆಯನ್ನು ಎಲ್ಲಿ ಬಳಸಬೇಕು ಎಂಬುದರ ಬಗ್ಗೆ ಶೇ.36.3ರಷ್ಟು ಶಿಕ್ಷಕರಿಗೆ ಅರಿವಿರಲಿಲ್ಲ. ದಶಮಾಂಶ ಚಿಹ್ನೆ ಹಾಕಿದ ಸಂಖ್ಯೆಗಳಲ್ಲಿಯೂ ಅದನ್ನು ನಿರ್ಲಕ್ಷಿಸಿ ಮುಂದಿನ ಶೂನ್ಯಗಳನ್ನು ಸೇರಿಸಿಕೊಂಡು ತಪ್ಪು ಉತ್ತರ ನೀಡುತ್ತಿ ದ್ದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇಐ ನ ಸಹ-ಸಂಸ್ಥಾಪಕ ಮತ್ತು ಮುಖ್ಯ ಕಲಿಕಾ ಅಧಿಕಾರಿ (CLO) ಶ್ರೀಧರ್ ರಾಜಗೋಪಾಲನ್ ಮಾತನಾಡಿ, ಈ ಅಧ್ಯಯನವು ನಮ್ಮ ಶಿಕ್ಷಣ ವ್ಯವಸ್ಥೆಗೆ ಎಚ್ಚರಿಕೆಯ ಕರೆಯಾಗಿ ಕಾರ್ಯನಿರ್ವಹಿಸುತ್ತದೆ, ಇದು ದೀರ್ಘಾವಧಿಯ ಮೌಖಿಕ ಕಲಿಕೆಗೆ ಆದ್ಯತೆ ನೀಡುತ್ತದೆ ಎಂದು ಹೇಳಿದ್ದಾರೆ.
ಶಿಕ್ಷಕರಲ್ಲಿ ಕಂಡುಬರುವ ತಪ್ಪುಗ್ರಹಿಕೆಗಳು ಬಹುತೇಕ ವಿದ್ಯಾರ್ಥಿಗಳಲ್ಲೂ ಕಂಡು ಬಂದಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ತಪ್ಪುಗ್ರಹಿಕೆಗಳ ನಡುವಿನ ಈ ಸಮಾನಾಂತರವು ಆತಂಕಕಾರಿ ವಿಷಯವಾಗಿದೆ, ಇದು ಗಣಿತ ಶಿಕ್ಷಣದಲ್ಲಿ ಹಲವು ಸವಾಲನ್ನು ಎದುರು ಮಾಡುತ್ತದೆ, ಈ ದೋಷಗಳು ತಲೆಮಾರುಗಳ ಕಾಲ ಶಾಶ್ವತವೂ ಆಗಬಹುದು ಎಂದು ತಿಳಿಸಿದ್ದಾರೆ.
ವಿಷಯ ಅಭಿವೃದ್ಧಿ ಮತ್ತು ಶಿಕ್ಷಣ ಸಂಶೋಧನೆಯ ಉಪಾಧ್ಯಕ್ಷ ಶುಕ್ಲಾ ಅವರು ಮಾತನಾಡಿ, ಈ ತಪ್ಪುಗ್ರಹಿಕೆಗಳ ಪರಿಣಾಮಗಳು ದೂರಗಾಮಿ ಮತ್ತು ಮೂಲಭೂತ ಪರಿಕಲ್ಪನೆಗಳನ್ನು ಗ್ರಹಿಸುವ ವಿದ್ಯಾರ್ಥಿಗಳ ಸಾಮರ್ಥ್ಯಕ್ಕೆ ಅಡ್ಡಿಯಾಗುವುದಲ್ಲದೆ, ಶಿಕ್ಷಣದ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಸೃಷ್ಟಿಸಲಿದೆ ಎಂದು ಹೇಳಿದ್ದಾರೆ.
Advertisement