ಬೆಂಗಳೂರಿನಲ್ಲಿ ಸ್ಫೋಟ! ಜಾತಿಗಣತಿ ವರದಿಗೆ ವಿರೋಧ, ಬಿಜೆಪಿಯ ನಾಯಕರ ಹತ್ಯೆ: ಇಂದಿನ ಮುಖ್ಯಾಂಶಗಳು-01-03-2024

ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇತ್ತೀಚಿನ ವರದಿಯ ಪ್ರಕಾರ ಮೂವರು ಹೋಟೆಲ್ ಸಿಬ್ಬಂದಿ ಮತ್ತು ನಾಲ್ವರು ಗ್ರಾಹಕ ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ online desk

ಬೆಂಗಳೂರು: ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಸಂಭವಿಸಿದ್ದು, ಇತ್ತೀಚಿನ ವರದಿಯ ಪ್ರಕಾರ ಮೂವರು ಹೋಟೆಲ್ ಸಿಬ್ಬಂದಿ ಮತ್ತು ನಾಲ್ವರು ಗ್ರಾಹಕ ಸೇರಿದಂತೆ 7 ಮಂದಿ ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಬಾಂಬ್ ಸ್ಕ್ವಾಡ್ ಮತ್ತು ವಿಧಿವಿಜ್ಞಾನ ತಂಡಗಳು ಎಲ್ಲಾ ಸಾಕ್ಷ್ಯಗಳು, ವಿವರಗಳನ್ನು ಸಂಗ್ರಹಿಸಿವೆ. ಘಟನಾ ಸ್ಥಳಕ್ಕೆ ತಲುಪಿದಾಗ ಯಾವುದೇ ಬೆಂಕಿ ಮತ್ತು ಸಿಲಿಂಡರ್ ಸ್ಫೋಟ ಸಂಭವಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬಗ್ಗೆ ಹಲವು ಊಹಾಪೋಹಗಳು ಕೇಳಿಬರುತ್ತಿದ್ದು, ಪೊಲೀಸ್ ಅಧಿಕಾರಿಗಳು ಯಾವುದೇ ವಿವರಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಸದ್ಯ ಕೆಫೆಯನ್ನು ಮುಚ್ಚಲಾಗಿದೆ. ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿದೆ ಮತ್ತು ಪ್ರದೇಶದಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನಾವು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾಂಕೇತಿಕ ಚಿತ್ರ
ರಾಮೇಶ್ವರಂ ಕೆಫೆ ಸ್ಫೋಟ: 'ಪೊಲೀಸರ ಗುಪ್ತಚರ ವೈಫಲ್ಯ'.. ಸಿದ್ದು ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಶ

ರಾಮೇಶ್ವರಂ ಕೆಫೆ ವ್ಯವಸ್ಥಾಪಕ ನಿರ್ದೇಶಕಿ(ಎಂಡಿ) ದಿವ್ಯಾ ಮಾತನಾಡಿದ್ದು, ರಾಮೇಶ್ವರಂ ಕೆಫೆಯ ಕೈತೊಳೆಯುವ ಸ್ಥಳದಲ್ಲಿ ಸ್ಫೋಟವಾಗಿದೆ. ಕಿಚನ್ ಹೊರಗಡೆ ಪ್ಲೇಟ್​ಗಳನ್ನು ಇಡುವ ಸ್ಥಳದಲ್ಲಿ ಸ್ಫೋಟವಾಗಿದೆ. ಕೆಫೆಯಲ್ಲಿ ವಿದ್ಯುತ್ ಅವಘಡ ಅಥವಾ ಸಿಲಿಂಡರ್ ಸ್ಫೋಟವಾಗಿಲ್ಲ. ಹೊರಗಿನಿಂದ ತಂದಿಟ್ಟ ಬ್ಯಾಗ್ ಸ್ಫೋಟವಾಗಿದೆ. 10 ಸೆಕೆಂಡ್ ಅಂತರದಲ್ಲಿ 2 ಬಾರಿ ಸ್ಫೋಟವಾಗಿದೆ ಎಂದು ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿದ ಹಳೆಯ ಘಟನೆಯ ವೀಡಿಯೋ ಈಗ ವೈರಲ್ ಆಗತೊಡಗಿದೆ. ಸಂತ್ರಸ್ತೆಯ ಪುತ್ರಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ತನಿಖೆಗೆ ಕೈಗೆತ್ತಿಕೊಂಡಿದ್ದಾರೆ. ಭೂಮಿ ಒತ್ತುವರಿಯನ್ನು ಪ್ರಶ್ನಿಸಿದ್ದಕ್ಕಾಗಿ ಸಂತ್ರಸ್ತೆಯನ್ನು ವಿವಸ್ತ್ರಗೊಳಿಸಿ ಅವಳ ಮಗನನ್ನು ಥಳಿಸಿದ ಘಟನೆ ನಡೆದಿದೆ. ಆರೋಪಿಯು ಮಹಿಳೆಯ ನಗ್ನ ಮೆರವಣಿಗೆ ನಡೆಸಿ, ಆಕೆಯ ಮನೆಯವರನ್ನು ಥಳಿಸಿದ್ದಲ್ಲದೆ, ದೂರು ನೀಡಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾಗಿ ದೂರುದಾರರು ಆರೋಪಿಸಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಿಜೆಪಿ ನಾಯಕರ ಹತ್ಯೆ ನಡೆದಿದೆ. ನೆನ್ನೆ ಸರಸಂಬಾ ಗ್ರಾಮದಲ್ಲಿ ಬಿಜೆಪಿ ಮುಖಂಡ ಮಹಾಂತಪ್ಪ ‌ಸಿದ್ದರಾಮಪ್ಪ ಆಲೂರೆ ಅವರನ್ನು ಹತ್ಯೆ ಮಾಡಲಾಗಿತ್ತು. ಇಂದು ಮತ್ತೊಂದು ಪ್ರಕರಣದಲ್ಲಿ ಸಂಸದ ಡಾ.ಉಮೇಶ್ ಜಾಧವ್ ಆಪ್ತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಗಿರೀಶ್ ಬಾಬು ಚಕ್ರ ಕೊಲೆಯಾದ ಬಿಜೆಪಿ ಮುಖಂಡ. ಜಿಲ್ಲೆಯ ಅಫಜಲಪುರ ತಾಲೂಕಿನ ಸಾಗನೂರ ಗ್ರಾಮದ ಜಮೀನಿನಲ್ಲಿ ಕೊಲೆ ಮಾಡಲಾಗಿದೆ. ಇತ್ತೀಚೆಗಷ್ಟೇ ಗಿರೀಶ್ ಬಾಬು ಅವರನ್ನು ದೂರ ಸಂಪರ್ಕ ಇಲಾಖೆಯ ಕಲಬುರಗಿ ವಿಭಾಗದ ಸಲಹಾ ಸಮಿತಿ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಗಿತ್ತು. ಆತನ ಸ್ನೇಹಿತರು ಪಾರ್ಟಿ ಕೊಡುವುದಾಗಿ ಜಮೀನಿಗೆ ಕರೆಸಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದಾರೆ

ಸಾಂಕೇತಿಕ ಚಿತ್ರ
ನಾನ್ಯಾವ ಜಾತಿ? ಮಾಹಿತಿ ಪಡೆಯಲು ಯಾರೂ ನನ್ನ ಬಳಿ ಬಂದಿಲ್ಲ: ಸಿದ್ದಗಂಗಾ ಶ್ರೀ

ಜಾತಿಗಣತಿ ವರದಿ ಸಲ್ಲಿಕೆಗೆ ಹಲವು ಸಮುದಾಯಗಳಿಂದ ವಿರೋಧ ವ್ಯಕ್ತವಾಗತೊಡಗಿದೆ. ವರದಿಯನ್ನು ತಿರಸ್ಕರಿಸಬೇಕೆಂದು ಲಿಂಗಾಯತ-ಒಕ್ಕಲಿಗ ಸಮುದಾಯ ಆಗ್ರಹಿಸಿದ್ದರೆ, ಕೆಲವು ಮಠಾಧೀಶರಿಂದಲೂ ವರದಿಗೆ ಆಕ್ಷೆಪ ವ್ಯಕ್ತವಾಗಿದೆ. ಜಾತಿ ಗಣತಿ ವರದಿಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಈ ವರದಿಯನ್ನು ನಾವು ಒಪ್ಪುವುದಿಲ್ಲ. ವರದಿಯನ್ನು ಮನೆಯಲ್ಲೇ ಕುಳಿತು ತಯಾರಿ ಮಾಡಲಾಗಿದೆ ಎಂದು ಆರೋಪಿಸಿದಾರೆ. 9 ವರ್ಷದ ಹಳೆಯ ವರದಿಯನ್ನೇ ಈಗ ಮತ್ತೆ ತಂದು ಕೊಟ್ಟಿದ್ದಾರೆ, ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ ಎಂದು ಹೇಳಿದ್ದಾರೆ. ವರದಿಗೆ ಒಕ್ಕಲಿಗರ ಸಂಘ ವಿರೋಧ ವ್ಯಕ್ತಪಡಿಸಿದ್ದು ಅವೈಜ್ಞಾನಿಕವಾಗಿರುವ ವರದಿಗೆ ತಮ್ಮ ವಿರೋಧವಿದೆ ಎಂದು ಸಂಘದ ಅಧ್ಯಕ್ಷ ಡಿ ಹನುಮಂತಯ್ಯ ಹೇಳಿದ್ದಾರೆ. ಈ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದಗಂಗಾ ಶ್ರೀಗಳು ಎಲ್ಲರ ಬಳಿಯೂ ಹೋಗಿ ಸಮೀಕ್ಷೆ ಮಾಡಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ತಮ್ಮ ಬಳಿ ಸಮೀಕ್ಷೆಗೆ ಯಾರೂ ಬಂದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದ ಐದು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಚಿರತೆಗಳ ಸಂಖ್ಯೆ ಏರಿಕೆಯಾಗಿವೆ. 2018ಕ್ಕೆ ಹೋಲಿಕೆ ಮಾಡಿದಲ್ಲಿ 96 ಚಿರತೆಗಳು ಹೆಚ್ಚಾಗಿವೆ. ಪಶ್ಚಿಮ ಘಟ್ಟದಲ್ಲಿ 2018 ರಲ್ಲಿ 3,387 ಇದ್ದ ಚಿರತೆಗಳ ಸಂಖ್ಯೆ 3,596ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ 2018 ರಲ್ಲಿ 12,852 ಇದ್ದ ಚಿರತೆಗಳ ಸಂಖ್ಯೆ ಈಗ 13,874 ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com