ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಬೆನ್ನಲ್ಲೇ ಮತ್ತೊಂದು ಬಾಂಬ್ ಬೆದರಿಕೆ ಇ-ಮೇಲ್
ಬೆಂಗಳೂರು: ರಾಮೇಶ್ವಂರ ಕೆಫೆ ಬಾಂಬ್ ಸ್ಫೋಟ ಪ್ರಕರಣ ಬೆನ್ನಲ್ಲೆ ಇದೀಗ ಬೆಂಗಳೂರಿನಲ್ಲಿ ಮತ್ತೆ ಬಾಂಬ್ ಸ್ಫೋಟಿಸುವ ಬೆದರಿಕೆ ಇಮೇಲ್ ಬಂದಿದೆ.
ಮುಖ್ಯಮಂತ್ರಿ, ಗೃಹ ಮಂತ್ರಿ, ಡಿಸಿಎಂ, ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ಗೆ ಬೆದರಿಕೆ ಇ-ಮೇಲ್ ಬಂದಿದ್ದು 2.5 ಮಿಲಿಯನ್ ಡಾಲರ್ ಕೊಟ್ಟಿಲ್ಲ ಅಂದರೆ ರಾಮೇಶ್ವರಂ ಕೆಫೆ ರೀತಿಯಲ್ಲೇ ಬಾಂಬ್ ಸ್ಫೋಟಿಸುವುದಾಗಿ ಇಮೇಲ್ನಲ್ಲಿ ಬೆದರಿಕೆ ಹಾಕಲಾಗಿದೆ.
ಈ ಇಮೇಲ್ ಬೆದರಿಕೆ ಸಂಬಂಧ ಸಿಸಿಬಿ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. Shahidkhan10786@protonmail.com ಎನ್ನುವ ಮೇಲ್ ಐಡಿಯಿಂದ ಬೆದರಿಕೆ ಬಂದಿದ್ದು, ಸದ್ಯ ಸಿಸಿಬಿ ಪೊಲೀಸರು ಈ ಇಮೇಲ್ ಬಗ್ಗೆ ತನಿಖೆ ನಡೆಸಿದ್ದಾರೆ.
ರಾಮೇಶ್ವರಂ ಕೆಫೆ ಸ್ಫೋಟ ಬರೀ ಟ್ರೈಲರ್? ನೀವು ನಮಗೆ 2.5 ಮಿಲಿಯನ್ ಡಾಲರ್ ನೀಡದಿದ್ದರೆ, ನಾವು ಕರ್ನಾಟಕದಾದ್ಯಂತ ಬಸ್ಸುಗಳು, ರೈಲುಗಳು, ದೇವಸ್ಥಾನಗಳು, ಹೋಟೆಲ್ಗಳು ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಬಾಂಬ್ ಸ್ಫೋಟಿಸುತ್ತೇವೆ ಎಂದು ಇ-ಮೇಲ್ ನಲ್ಲಿ ಬರೆಯಲಾಗಿದೆ.
"ನಾವು ನಿಮಗೆ ಇನ್ನೊಂದು ಟ್ರೈಲರ್ ಅನ್ನು ತೋರಿಸಲು ಬಯಸುತ್ತೇವೆ. ನಾವು ಮುಂದೆ ಅಂಬಾರಿ ಉತ್ಸವ ಬಸ್ನ ಸ್ಫೋಟಿಸುತ್ತೇವೆ. ಅಂಬಾರಿ ಉತ್ಸವ ಬಸ್ ಸ್ಫೋಟದ ನಂತರ, ನಾವು ನಮ್ಮ ಬೇಡಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಎತ್ತುತ್ತೇವೆ. ನಿಮಗೆ ಕಳುಹಿಸಲಾದ ಮೇಲ್ನ ಸ್ಕ್ರೀನ್ಶಾಟ್ಗಳನ್ನು ಅಪ್ಲೋಡ್ ಮಾಡುತ್ತೇವೆ. ಸಾಮಾಜಿಕ ಮಾಧ್ಯಮದಲ್ಲಿ ನಾವು ಮುಂದಿನ ಸ್ಫೋಟದ ಬಗ್ಗೆ ಮಾಹಿತಿಯನ್ನು ಟ್ವೀಟ್ ಮಾಡುತ್ತೇವೆ ಎಂದು ಮೇಲ್ ನಲ್ಲಿ ಹೇಳಲಾಗಿದೆ.
ಬೆಂಗಳೂರಿನ ಹೆಚ್ಎಎಲ್ನ ರಾಮೇಶ್ವರಂ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟಿಸಲಾಗಿದ್ದು ನಾಲ್ಕು ದಿನ ಕಳೆದರೂ ಸಹ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟ ಉಗ್ರನ ಸಣ್ಣ ಸುಳಿವು ಸಿಗುತ್ತಿಲ್ಲ. ಇನ್ನು ಎಫ್ಎಸ್ಎಲ್ ತಂಡ, ಸಿಸಿಬಿ ಪೊಲೀಸರು, ಇನ್ನೊಂದೆಡೆ NIA ಅಧಿಕಾರಿಗಳೂ ಫೀಲ್ಡ್ಗಳಿಂದು ಶಂಕಿತ ಉಗ್ರನ ಬೆನ್ನತ್ತಿದ್ದಾರೆ.
ಈ ಹಿಂದೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಮೊಹಮ್ಮದ್ ರಸೂಲ್ ಕದ್ದಾರೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ ಯಾದಗಿರಿಯ ಸುರಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯ ವಿರುದ್ಧ ಯಾದಗಿರಿಯ ಸುರಪುರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಕಲಂ 505(1)(ಬಿ), 25(1)(ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೊಬೈಲ್ನಲ್ಲಿ ಸೆಲ್ಫಿ ವಿಡಿಯೋ ಮಾಡಿಕೊಂಡಿರುವ ರಸೂಲ್, ಪ್ರಧಾನಿ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಮಾತನಾಡಿದ ಬಿಜೆಪಿ ನಾಯಕ ಮತ್ತು ಹಿರಿಯ ವಕೀಲ ನಳಿನ್ ಕೊಹ್ಲಿ, "ಪಾಕಿಸ್ತಾನ್ ಜಿಂದಾಬಾದ್" ಎಂದು ಹೇಳಲು ಬಯಸುವ, ಪ್ರಧಾನಿ ಮೋದಿಗೆ ಜೀವ ಬೆದರಿಕೆ ಹಾಕುವ ಮತ್ತು ರೆಸ್ಟೋರೆಂಟ್ನಲ್ಲಿ ಬಾಂಬ್ ಇಡುವ ಇಂತಹ ಅಂಶಗಳು ಇದ್ದಕ್ಕಿದ್ದಂತೆ ಕರ್ನಾಟಕದಲ್ಲಿ ಬರಲಾರಂಭಿಸಿವೆ ಎಂದು ಆರೋಪಿಸಿದರು.