ಮಂಗಳೂರು: ಸುಮಲತಾ ಅವರು ನಮ್ಮ ಅಮ್ಮ, ಅವರ ಜೊತೆ ನಾನು ಯಾವಾಗಲೂ ಇರುತ್ತೇನೆ ಎಂದು ಹೇಳುವ ಮೂಲಕ ಈ ಬಾರಿ ಕೂಡ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಅಂಬರೀಷ್ ಪರ ಪ್ರಚಾರ ನಡೆಸುವುದಾಗಿ ನಟ ದರ್ಶನ್ ತಿಳಿಸಿದ್ದಾರೆ.
ಅವರು ಇಂದು ಮಂಗಳೂರಿನ ಉಳ್ಳಾಲ ಸಮೀಪದ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಸ್ನೇಹಿತರೊಂದಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಹೆತ್ತ ತಾಯಿಯನ್ನು ಎಂದಾದರೂ ಹಿಟ್ಟು ಕೊಡಲಿಕ್ಕಾಗುತ್ತದೆಯೇ, ಮೊನ್ನೆಯವರೆಗೂ ಸುಮಲತಾ ಅಮ್ಮನ ಜೊತೆ ಇದ್ದೆ. ಈಗ ಅವರ ಕೈಬಿಟ್ಟರೆ ಆಗುತ್ತದೆಯೇ ಸರ್, ನಿಮ್ಮ ಮನೆಯಲ್ಲಿ ನಿಮ್ಮ ತಾಯಿಯನ್ನು ಬಿಟ್ಟು ಬಿಡುತ್ತೀರಾ, ಸುಮಲತಾ ಅಮ್ಮ ಅಮ್ಮನೇ ಸಾರ್ ಎಂದರು.
ಅಮ್ಮ ಅಮ್ಮನೇ ಅವಳೊಂದಿಗೆನೇ ಇರೋದು. ಬೇರೆಯವರಿಗಾಗಿ ಅಮ್ಮನನ್ನು ಬಿಡೋಕಾಗುತ್ತಾ? ಎಂದು ಪ್ರಶ್ನಿಸಿದ್ದಾರೆ ದರ್ಶನ್. ಕುತ್ತಾರು ಕೊರಗಜ್ಜ ಕ್ಷೇತ್ರದ ಮಹಿಮೆ ಬಗ್ಗೆ ಎಲ್ಲರೂ ಹೇಳುತ್ತಿದ್ದರು. ಅದಕ್ಕೆ ಒಂದು ಬಾರಿ ಹೋಗಿ ಕೊರಗಜ್ಜನಲ್ಲಿ ಪ್ರಾರ್ಥನೆ ಮಾಡಿಕೊಂಡು ಬರೋಣವೆಂದು ಬಂದಿದ್ದೇನೆ, ಬೇರೇನು ಕಾರಣವಿಲ್ಲ ಎಂದಷ್ಟೇ ಹೇಳಿದರು. ದರ್ಶನ್ ಗೆ ನಟ ಚಿಕ್ಕಣ್ಣ ಹಾಗು ಯಶಸ್ ಸೂರ್ಯ ಸಾಥ್ ನೀಡಿದ್ದರು.
ಈ ಹಿಂದೆ ಮಾಲಾಶ್ರೀ, ಶಿವರಾಜ್ಕುಮಾರ್, ನಟಿ ರಕ್ಷಿತಾ, ರಚಿತಾ ರಾಮ್, ಅವರು ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟಿದ್ದರು. ಇತ್ತೀಚೆಗೆ ಸ್ಯಾಂಡಲ್ವುಡ್ ಸೆಲೆಬ್ರಿಟಿಗಳು ಹೆಚ್ಚಾಗಿ ಕುತ್ತಾರಿಗೆ ಭೇಟಿ ಕೊಡುತ್ತಿರುತ್ತಾರೆ.
Advertisement