ಹುಬ್ಬಳ್ಳಿ: ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೊ ಪ್ರಕರಣದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಒಳಸಂಚು ಅಡಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶುಕ್ರವಾರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರ ವಯಸ್ಸೇನು, ಅವರ ಹಿರಿತನವೇನು, ಅವರ ಸ್ಥಾನಮಾನವೇನು, ಅವರ ವಿರುದ್ಧ ಈ ರೀತಿ ಷಡ್ಯಂತ್ರ ಮಾಡುವುದು ಎಂದರೆ ಎಂಥಾ ಅನ್ಯಾಯವಿದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಒಬ್ಬ ಪ್ರಭಾವಿ, ಹಿರಿಯ ರಾಜಕಾರಣಿ ಮೇಲೆ ಈ ರೀತಿ ಸುಳ್ಳು ದೂರು ದಾಖಲಿಸುವುದು ನಿಜಕ್ಕೂ ಅಕ್ಷಮ್ಯ, ಈ ಸಂಬಂಧ ಕಾನೂನು ರೀತಿ ತನಿಖೆ ಆಗುತ್ತದೆ. ಅವರು ಇದರಿಂದ ಹೊರಬರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೇಶಾದ್ಯಂತ ಎಲ್ಲಾ ಯುವ ಮತದಾರರು ಪ್ರಧಾನಿ ಮೋದಿಯವರ ಅಭಿಮಾನಿಗಳಾಗಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುತ್ತಾರೆಂಬ ವಿಶ್ವಾಸವಿದೆ. ಶೇ 90ರಷ್ಟು ಹೊಸ ಮತದಾರರಲ್ಲಿ ಮೋದಿಗೆ ಅಪಾರ ಅನುಯಾಯಿಗಳೂ ಇದ್ದಾರೆ. ಹಾಗಾಗಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
Advertisement