ಹಾಸನ: ಹಾಸನ ಜಿಲ್ಲೆ ಕಾಂಗ್ರೆಸ್ ಕಾರ್ಯಕರ್ತರ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಕೆಎನ್ ರಾಜಣ್ಣ ನೇತೃತ್ವದಲ್ಲಿ ನಡೆದಿದ್ದು, ಗೊಂದಲ, ಕೋಲಾಹಲ ಉಂಟಾಗಿದೆ.
ಹಾಸನ ಜಿಲ್ಲೆಯಲ್ಲಿ ಮಾ.30 ರಂದು ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಪ್ರಚಾರ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸುವುದಕ್ಕಾಗಿ ಈ ಸಭೆ ನಡೆದಿತ್ತು. ಅರಕಲಗೂಡು ವಿಧಾನಸಭಾ ಕ್ಷೇತ್ರದಲ್ಲಿ ಶ್ರೇಯಸ್ ಪಟೇಲ್ ಗೆ 30,000 ಮತಗಳ ಮುನ್ನಡೆ ಲಭ್ಯವಾಗುವಂತೆ ಮಾಡುವುದಕ್ಕೆ ಶಕ್ತಿ ಹೊಂದಿರುವ ಶ್ರೀಧರ್ ಗೌಡ ಅವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದು ಏಕೆ ಎಂದು ಶ್ರೀಧರ್ ಗೌಡ ಅವರನ್ನು ಕೆಎನ್ ರಾಜಣ್ಣ ಪ್ರಶ್ನಿಸಿದಾಗ ರಾಜಣ್ಣ ಅವರ ಪ್ರಶ್ನೆಗೆ ಶ್ರೀಧರ್ ಗೌಡ ಅವರ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು ಈ ವೇಳೆಯಲ್ಲಿ ಗೊಂದಲ, ಕೋಲಾಹಲ ಉಂಟಾಗಿತ್ತು.
ಇದಕ್ಕೂ ಮುನ್ನ ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ರೀಧರ್ ಗೌಡ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅರಕಲಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರಯಸ್ ಪಟೇಲ್ 30 ಸಾವಿರ ಮತಗಳ ಮುನ್ನಡೆ ಸಾಧಿಸಲಿದ್ದಾರೆ. ಕೆ.ಎನ್.ರಾಜಣ್ಣ ಕಳೆದ ವಿಧಾನಸಭಾ ಚುನಾವಣೆ ವೇಳೆ ಸೋತಿದ್ದು ಏಕೆ ಎಂದು ಪ್ರಶ್ನಿಸಿದಾಗ ಶ್ರೀಧರ್ ಗೌಡ ಬೆಂಬಲಿಗರು ಮತ್ತು ಇತರ ಮುಖಂಡರ ಬೆಂಬಲಿಗರ ನಡುವೆ ಜಟಾಪಟಿ ನಡೆಯಿತು. ಕೊನೆಗೆ ಕೆ.ಎನ್.ರಾಜಣ್ಣ ಅವರು ಕಾರ್ಯಕರ್ತರಲ್ಲಿ ಭಿನ್ನಾಭಿಪ್ರಾಯ, ಅಹಂಕಾರವಿದ್ದರೆ ಬದಿಗೊತ್ತಿ ಹಾಸನ ಸ್ಥಾನ ಗೆಲ್ಲಲು ಕಾರ್ಯತಂತ್ರ ರೂಪಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ವಿಚಲಿತರಾಗಿ ಭಾಷಣ ನಿಲ್ಲಿಸಿದರು. ಅರಸೀಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಕಾರ್ಯಕರ್ತರನ್ನುದ್ದೇಶ್ಸಿ ಮಾತನಾಡುವಾಗ ಕಾರ್ಯಕರ್ತರು ಪರಸ್ಪರ ಗೊಣಗಿಕೊಂಡು ದೂರು ಹೇಳಿದರು. ಮುಖಂಡರ ಮಾತು ಕೇಳಲು ಆಸಕ್ತಿ ಇಲ್ಲದಿದ್ದರೆ ಸಭಾಂಗಣದಿಂದ ಹೊರ ಹೋಗುವಂತೆ ಕಾರ್ಯಕರ್ತರಿಗೆ ಸಚಿವರು ಸೂಚಿಸಿದರು.
ಈ ಬಾರಿ ಜೆಡಿಎಸ್ ಅಭ್ಯರ್ಥಿಗೆ ತಕ್ಕ ಪಾಠ ಕಲಿಸಲು ಜನ ಮುಂದಾಗಿದ್ದು, ಇದರ ಸದುಪಯೋಗ ಪಡೆದು ಮೈತ್ರಿ ಅಭ್ಯರ್ಥಿಯನ್ನು ಸೋಲಿಸಲು ಕಾಂಗ್ರೆಸ್ ಕಾರ್ಯಕರ್ತರು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕೆಎಚ್ಬಿ ಅಧ್ಯಕ್ಷ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದ್ದಾರೆ. ಸ್ಥಳೀಯ ಮುಖಂಡರ ವಿರುದ್ಧ ಆರೋಪಿಸಿ ಕಾರ್ಯಕರ್ತರು ವೇದಿಕೆಯತ್ತ ಧಾವಿಸಿದಾಗ ಕಾಂಗ್ರೆಸ್ ಮುಖಂಡ ಹಾಗೂ ಹಾಸನ ಜಿಲ್ಲಾ ಚುನಾವಣಾ ಉಸ್ತುವಾರಿ ಜೆ.ಸಿ.ಚಂದ್ರಶೇಖರ್ ಮೌನವಾಗಿದ್ದರು.
Advertisement