ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರು ನೂರಾರು ಮಹಿಳೆಯರ ಜೊತೆ ರಾಸಲೀಲೆ ನಡೆಸಿದ ವಿಡಿಯೋ ಪ್ರಕರಣ ನಾಗರಿಕ ಸಮಾಜವನ್ನೇ ಬೆಚ್ಚಿಬೀಳಿಸಿದೆ ಮತ್ತು ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಮಧ್ಯೆ ತಮ್ಮ ಸಹೋದರ ಪ್ರಜ್ವಲ್ ರಾಸಲೀಲೆ ಪ್ರಕರಣದ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ನನಗೂ ನೋವಾಗಿದೆ. ಆ ವಿಡಿಯೋವನ್ನು ನೋಡುವುದಕ್ಕೆ ನಾನು ಧೈರ್ಯ ಮಾಡಿಲ್ಲ. ನನ್ನ ಆಪ್ತ ವರ್ಗದವರು ಹೇಳಿದ ಪ್ರಕಾರ ಆ ವಿಡಿಯೋಗಳನ್ನು ಕನಿಷ್ಠ ಪಕ್ಷ ಬ್ಲರ್ ಕೂಡ ಮಾಡಿಲ್ಲ. ಆದರೆ ಪಾಪ ಆ ಹೆಣ್ಣು ಮಕ್ಕಳನ್ನ ಓಪನ್ ಆಗಿ ತೋರಿಸಿದ್ದಾರೆ. ಇದು ನಿಜಕ್ಕೂ ಕೂಡ ಬೇಜಾರಾಗುತ್ತೆ. ಇದರ ಬಗ್ಗೆಯೂ ಸಹ ತನಿಖೆ ಆಗಬೇಕು ಎಂದರು.
ರಾಜ್ಯ ಸರ್ಕಾರ ಪ್ರಕರಣದ ತನಿಖೆಗೆ ಈಗಾಗಲೇ ಎಸ್ಐಟಿ ರಚನೆ ಮಾಡಿದೆ. ತನಿಖೆ ನಡೆಯುತ್ತಿದೆ. ಕಾನೂನಿಗಿಂತ ಯಾರು ದೊಡ್ಡವರಲ್ಲ. ಅದು ಒಂದು ಪ್ರಕ್ರಿಯೆ ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಹೋಗಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಹಾಸನ ವಿಚಾರಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ. ನಾನು ಹೆಚ್ಚಿಗೆ ಹಾಸನಕ್ಕೆ ಕಾಲೇ ಇಟ್ಟಿಲ್ಲ. ಹೋದರೆ ಹಾಸನಾಂಬೆ ಉತ್ಸವಕ್ಕೆ ಮಾತ್ರ ಹೋಗುತ್ತೇನೆ. ಹಾಸನ ಸಂಸದರಿಗೂ ನನಗೂ ಸಂಪರ್ಕ ಇರಲಿಲ್ಲ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದ್ದಾರೆ.
ಈ ಪ್ರಕರಣ ರಾಜ್ಯದ ಜನತೆಗೆ ತಪ್ಪು ಸಂದೇಶ ಕೊಡುತ್ತಿದೆ. ವಿಶೇಷವಾಗಿ ದೇವೇಗೌಡರ ಜೀವನ ತೆರೆದ ಪುಸ್ತಕ. ಅಜ್ಜಿ ಚೆನ್ನಮ್ಮ ಯಾವ ರೀತಿ ಬದುಕಿದರು ಅಂತ ಎಲ್ಲರಿಗೂ ಗೊತ್ತಿದೆ. ಅದು ನಮಗೆ ದೊಡ್ಡ ಸ್ಪೂರ್ತಿ. ಯಾವ ರೀತಿ ದಂಪತಿ ಬಾಳಿ ಬದುಕುಬೇಕು ಅಂತ ತೋರಿಸಿಕೊಟ್ಟಿದ್ದಾರೆ. ಬಹುಶಃ ಈ ವಿಚಾರದಲ್ಲಿ ಅವರು ಸಾಕಷ್ಟು ನೊಂದಿದ್ದಾರೆ. ದೇವೇಗೌಡರ ಮೇಲೆ ಯಾವ ರೀತಿ ಪ್ರಭಾವ ಬೀರಿದೆ ಅಂತಾ ನಮ್ಮ ಅಜ್ಜಿ ಸಹ ಬಹಳ ನೋವಿನಲ್ಲಿದ್ದಾರೆ ಎಂದರು.
Advertisement